ಅಕ್ಟೋಬರ್ 20ರಿಂದ ಹಾಸನಾಂಬೆ ದರ್ಶನ ಪಡೆಯಿರಿ!
ಹಾಸನ, ಅಕ್ಟೋಬರ್ 03: ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ದತೆಗಳನ್ನು ಕೈಗೊಂಡಿದೆ ಸಿದ್ಧತೆ ಆರಂಭವಾಗಿದೆ ಎಂದು ಸಹಾಯಕ ಆಯುಕ್ತ ಎಚ್ಎಲ್ ನಾಗರಾಜ್ ಹೇಳಿದ್ದಾರೆ.
ಅಕ್ಟೋಬರ್ 20ರಿಂದ ನವೆಂಬರ್ 1ರವರೆಗೆ ಹಾಸನಾಂಬೆ ದೇವಾಲಯ ಸಾರ್ವಜನಿಕರ ದರ್ಶನಕ್ಕೆ ಲಭ್ಯವಿರುತ್ತದೆ. ಈ ಬಾರಿಯೂ ಸಹ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ದೇಗುಲದ ಸುತ್ತಾ ಶಾಶ್ವತ ಬಾರಿಕೇಡ್ನ್ನು ನಿರ್ಮಿಸಲಾಗಿದೆ.
ನಿರ್ಮಾಣ ಹಂತದಲ್ಲಿದ್ದ ರಾಜಗೋಪುರ ಕಾರ್ಯ ಮುಕ್ತಾಯವಾಗಿದ್ದು ಅದಕ್ಕೆ ಚಿನ್ನಲೇಪಿತ ಬಣ್ಣ ಬಳಿಯಲಾಗಿದೆ. ಆಕರ್ಷಕವಾಗಿ ಕಂಗೊಳಿಸುತ್ತಿದೆ. ದೀಪಾಲಂಕಾರ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ ಹಾಗೂ ಶೌಚಾಲಯಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. [ಹಾಸನಾಂಬೆ ಸ್ಥಳ ಪುರಾಣ ಓದಿ]
ಹಾಸನಾಂಬ ದೇವಾಲಯ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ 2 ಕೋಟಿ ರೂ.ಗಳನ್ನು ಘೋಷಣೆ ಮಾಡಿದೆ. 70 ಲಕ್ಷ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ರಾಜಗೋಪುರ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ.
ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬ ದರ್ಶನಕ್ಕಾಗಿ ಬೆಂಗಳೂರು, ತುಮಕೂರು, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹೊರ ರಾಜ್ಯಗಳಿಂದಲೂ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.
ವಿಶೇಷ ಪಾಸ್ ಸೌಲಭ್ಯ: ಭಕ್ತಾದಿಗಳಿಗೆ 300 ರು ಗಳ ವಿಶೇಷ ಪಾಸ್ ಸೌಲಭ್ಯ ಒದಗಿಸಲಾಗುತ್ತಿದೆ. ಕಳೆದ ಬಾರಿ ಸ್ಪೆಶಲ್ ಪಾಸ್ 250 ರು ಗೆ ಲಭ್ಯವಿತ್ತು. ಹಾಸನ ತಹಸೀಲ್ದಾರ್ ಶಿವಶಂಕರಪ್ಪ, ಹಿರಿಯ ಪೊಲೀಸ್ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ಹಾಸನಾಂಬೆ ಉತ್ಸವ ಸಿದ್ಧತೆ ಪರಿಶೀಲನೆ ನಡೆಸಿದ್ದಾರೆ.