ಸರಕಾರಿ ಗೌರವದೊಂದಿಗೆ ಹುತಾತ್ಮ ಸಂದೀಪ್ ಅಂತ್ಯಕ್ರಿಯೆ
ಹಾಸನ, ಫೆಬ್ರವರಿ 1: ಪೋಷಕರ ರೋಧನ, ಗ್ರಾಮಸ್ಥರ ಶೋಕದ ನಡುವೆ ಜಮ್ಮುವಿನ ಹಿಮಕುಸಿತದಲ್ಲಿ ಹುತಾತ್ಮನಾದ ಸಂದೀಪ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಹಾಸನದ ಸ್ವಗ್ರಾಮ ದೇವಿಹಳ್ಳಿಯಲ್ಲಿ ಸರಕಾರಿ ಸೇನಾ ಗೌರವದೊಂದಿಗೆ ನೆರವೇರಿಸಲಾಯಿತು.
ಹಿಮಕುಸಿತದಲ್ಲಿ ಹುತಾತ್ಮನಾದ ಯೋದ ಸಂದೀಪ್ ಮೃತದೇಹವನ್ನು ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮಂಗಳವಾರ ರಾತ್ರಿ 2.15ಕ್ಕೆ ಹಾಸನಕ್ಕೆ ತರಲಾಗಿತ್ತು. ನೋಡುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಪಾರ್ಥೀವ ಶರೀರವನ್ನು ಹಾಸನದ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿತ್ತು. ಮೃತದೇಹವನ್ನು ನಂತರ ಬೆಳಗ್ಗೆ 10 ಗಂಟೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.[ಹಾಸನ: ಹಿಮಕುಸಿತದಲ್ಲಿ ಹುತಾತ್ಮನಾದ ಯೋಧನಿಗೆ ಕಂಬನಿ]
ಈ ವೇಳೆ ಸಾವಿರಾರು ಅಭಿಮಾನಿಗಳು, ಹಿರಿಯರು,ಮುಖಂಡರು, ಅಧಿಕಾರಿಗಳು ಅಂತಿಮನಮನ ಸಲ್ಲಿಸಿದರು. ಬಳಿಕ ದೇವಿಹಳ್ಳಿಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಂದೀಪ್ ಪಾರ್ಥೀವ ಶರೀರವನ್ನು ಕೊಂಡೊಯ್ಯಲಾಯಿತು. ಅಲ್ಲಿಯೂ ಅಂತಿಮ ದರ್ಶನಕ್ಕೆ ಅನುಮಾಡಿಕೊಡಲಾಗಿತ್ತು. ನಂತರ ಸರಕಾರಿ ಗೌರವದೊಂದಿಗೆ ಸಂದೀಪ್ ಜಮೀನಿನಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು. ಸೈನಿಕರು ಗೌರವ ನಮನ ಸಲ್ಲಿಸಿದರು.
ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ , ಎಂ.ಪಿ.ಪ್ರಕಾಶ್ ಸೇರಿದಂತೆ ಅನೇಕ ಮುಖಂಡರು ಸಂದೀಪ್ ಅಂತಿಮ ದರ್ಶನ ಪಡೆದರು. ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ದೆಹಲಿಯಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಂಗಳವಾರ ದೆಹಲಿಯಿಂದ ಸಂದೀಪ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ಸಂದರ್ಭದಲ್ಲೇ ಅಂತಿಮ ದರ್ಶನ ಪಡೆದಿದ್ದರು.