ಹಾಸನದಲ್ಲಿ ಮನೆಗೆ ಕನ್ನ ಹಾಕುತ್ತಿದ್ದ ಐವರು ಕಳ್ಳಿಯರ ಬಂಧನ
ಅರಕಲಗೂಡು, ಜೂನ್ 7: ಹೇರ್ ಪಿನ್, ಬಳೆ ಮೊದಲಾದವುಗಳನ್ನು ಮಾರಾಟ ಮಾಡುವ ನೆಪದಲ್ಲಿ ಮನೆಗಳಿಗೆ ಕನ್ನ ಹಾಕುತ್ತಿದ್ದ ಐವರು ಚಾಲಾಕಿ ಕಳ್ಳಿಯರನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಕೆರೆಕೋಡಿ ಹನುವಿನಕಟ್ಟೆ ನಿವಾಸಿಗಳಾದ ಕುಮಾರಿ, ಸುಶೀಲಾ, ಮಂಜುಳಾ, ಗಂಗಾ ಮತ್ತು ಪುಷ್ಪಾ ಬಂಧಿತ ಕಳ್ಳಿಯರು.
ಈ ಕಳ್ಳಿಯರು ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ಹಾಗೂ ಚಿಂದಿ ಆಯುವ, ಹೇರ್ ಪಿನ್, ಬಳೆ ಮುಂತಾದ ವಸ್ತುಗಳನ್ನು ಮನೆ ಮನೆಗೆ ತೆರಳಿ ಮಾರಾಟ ಮಾಡುವ ನೆಪದಲ್ಲಿ ಬೀದಿಗಳಲ್ಲಿ ಅಲೆದು ಬೀಗ ಹಾಕಿರುವ ಮನೆಗಳನ್ನು ಖಾತ್ರಿ ಮಾಡಿಕೊಂಡು ಬಳಿಕ ಕಳವು ಮಾಡುತ್ತಿದ್ದರು.[ಹಾಸನ: ಪ್ರೀತಿಸಿ ತಾಳಿ ಕಟ್ಟಿದ ಕೈಯಿಂದಲೇ ಪತ್ನಿಯ ಕತ್ತು ಹಿಸುಕಿ ಕೊಂದ]
ಮಹಿಳೆಯರಾಗಿದ್ದರಿಂದ ಯಾರಿಗೂ ಸಂಶಯ ಬಂದಿರಲಿಲ್ಲ. ಆದರೆ ಕಳ್ಳಿಯರು ತಮ್ಮ ಕೈಚಳಕ ತೋರಿ ಬೀಗ ಹಾಕಿದ ಮನೆಗಳಿಗೆ ನುಗ್ಗಿ ಒಡವೆ ಹಿತ್ತಾಳೆ ಪಾತ್ರೆಗಳನ್ನು ಕಳ್ಳತನ ಮಾಡುತ್ತಿದ್ದರು.
ಈ ಮಧ್ಯೆ ಅರಕಲಗೂಡು ಮತ್ತು ಕೊಣನೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣ ಬಯಲಿಗೆ ಬಂದಿದ್ದರಿಂದ ಪೊಲೀಸರು ತನಿಖಾ ತಂಡವನ್ನು ರಚಿಸಿ, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಿದ್ದರು.[ಸಾಲಮನ್ನಾ ನೆಪದಲ್ಲಿ ಬ್ಯಾಂಕ್ ದರೋಡೆ ಯತ್ನ: ಹುಬ್ಬಳ್ಳಿಯಲ್ಲಿ ಇಬ್ಬರ ಬಂಧನ]
ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಐವರು ಕಳ್ಳಿಯರನ್ನು ಬಂಧಿಸಿದ್ದು, 36 ಗ್ರಾಂ ಚಿನ್ನದ ಒಡವೆಗಳು, 150 ಗ್ರಾಂ ಬೆಳ್ಳಿಯ ಆಭರಣಗಳು ಮತ್ತು ಸುಮಾರು 75 ಸಾವಿರ ಮೌಲ್ಯದ ತಾಮ್ರದ ಹಂಡೆ, ಹಿತ್ತಾಳೆಯ ಕೊಳಗಗಳು ಸೇರಿದಂತೆ 1.85 ಲಕ್ಷ ರುಪಾಯಿ ಮೌಲ್ಯದ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.