ಹಾಸನ: ಬೆಳೆ ಇಲ್ಲದೆ ಸಾಲ ತೀರಿಸಲಾಗದೆ ರೈತ ನೇಣಿಗೆ ಶರಣು
ಹಾಸನ, ಜೂನ್ 15 : ಸಾಲ ತೀರಿಸಲಾಗದೆ ರೈತನೊಬ್ಬ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ಹಾಸನ ಜಿಲ್ಲೆಯ ಅರಕಲಗೂಡ ತಾಲೂಕಿನ ಹೆಣ್ಣೂರು ಕೊಂಗಳಲೆಯಲ್ಲಿ ನಡೆದಿದೆ.
ಹೆಣ್ಣೂರು ಕೊಂಗಳಲೆ ನಿವಾಸಿ ಕಾಳಯ್ಯ ಅವರ ಪುತ್ರ ಕೃಷ್ಣ(45) ಆತ್ಮಹತ್ಯೆ ಮಾಡಿಕೊಂಡ ರೈತ. ಐದು ಎಕರೆ ಜಮೀನು ಹೊಂದಿರು ಈ ರೈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಸಲುವಾಗಿ ಸುಮಾರು 4.50 ಲಕ್ಷ ರು. ಸಾಲ ಪಡೆದು ಶುಂಠಿ ಮತ್ತು ಜೋಳವನ್ನು ಬೆಳೆದಿದ್ದ. ಆದರೆ, ಸರಿಯಾಗಿ ಮಳೆ ಇಲ್ಲದೆ ಬೆಳೆ ಹಾಳಾಗಿ ನಷ್ಟ ಅನುಭವಿಸಿದ್ದ. ಇದರಿಂದ ಮನನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಮಾಡಿದ ಸಾಲವನ್ನು ತೀರಿಸಲಾಗದೆ ಸಾಲಗಾರರಿಂದ ತಪ್ಪಿಸಿಕೊಂಡು ಓಡಾಡುವಂತಾಗಿತ್ತು. ಈ ನಡುವೆ ಸಾಲವನ್ನು ತೀರಿಸುವುದಿರಲಿ ಬಡ್ಡಿ ಕಟ್ಟಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
ಈ ಬಗ್ಗೆ ಮನೆಯಲ್ಲಿ ನೋವು ತೋಡಿಕೊಂಡಿದ್ದರು. ಆಗ ಪತ್ನಿ ಸೇರಿದಂತೆ ಮನೆಯವರು ಸಮಾಧಾನ ಮಾಡಿದ್ದರು. ಆದರೆ ಚಿಂತೆಯಲ್ಲಿದ್ದ ಕೃಷ್ಣ ಗುರುವಾರ ಮನೆಯಿಂದ ಬೆಳಿಗ್ಗೆ 10ರ ಸಮಯದಲ್ಲಿ ಜಮೀನಿನತ್ತ ತೆರಳಿದ್ದಾರೆ. ಎಂದಿನಂತೆ ಜಮೀನಿಗೆ ಹೋಗಿರಬಹುದೆಂದು ಮನೆಯವರು ತಮ್ಮ ಕೆಲಸದಲ್ಲಿ ನಿರತರಾಗಿದ್ದರು.
ಸಹೋದರ ರಾಜೇಶ್ ಜಮೀನಿಗೆ ತೆರಳಿದಾಗ ಅಲ್ಲಿನ ಮರವೊಂದಕ್ಕೆ ಕೃಷ್ಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ರೈತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.