ಹಾಸನ: ಅಂತರ್ಜಲ ಮಟ್ಟ ಕುಸಿತ, ಬೋರ್ ವೆಲ್ ಕೊರೆತಕ್ಕೆ ನಿರ್ಬಂಧ
ಹಾಸನ, ಅಕ್ಟೋಬರ್ 5 : ರಾಜ್ಯದಲ್ಲಿ ಸತತವಾಗಿ ಐದು ವರ್ಷಗಳಿಂದ ಬರ ಪರಿಸ್ಥಿತಿಯಿದ್ದು ಅಣೆಕಟ್ಟು, ಕೆರೆಗಳಲ್ಲಿ ನೀರಿನ ಕೊರತೆ ಎದುರಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಸಂರಕ್ಷಣೆಗಾಗಿ ಹೊಸ ಕೊಳವೆಬಾವಿಗಳನ್ನು ಕೊರೆಯುವುದನ್ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನೀರು ಜೀವ ಜಲ. ಅದರಲ್ಲೂ ಅಂತರ್ಜಲ ಇಡೀ ಭೂಮಂಡಲದ ಬದುಕಿನ ಭವಿಷ್ಯ. ಅದನ್ನು ಜೋಪಾನ ಮಾಡದೆ ನಿರಂತರ ಭೂಗರ್ಭ ಕೊರೆದು ಹೊರಕ್ಕೆ ನೀರು ಬಸಿಯುತ್ತಿರುವುದರಿಂದ ಮುಂದೊಂದು ದಿನ ಇಡೀ ಧರೆಯೇ ಬರಡಾಗುವ ಅಪಾಯವಿದೆ.
ಸರ್ಕಾರಿ ಆದೇಶ ಸಂಖ್ಯೆ ಆರ್.ಡಿ 267 ಟಿ.ಎನ್.ಆರ್. 2016 ದಿನಾಂಕ 20.08.2016 ಆದೇಶದನ್ವಯ ಹೊಸ ಕೊಳವೆ ಬಾವಿಗಳನ್ನು ಕೊರೆಯುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊರಡಿಸಿರುವ ಆದೇಶವನ್ನು ಸಮಾಜ ಕಲ್ಯಾಣ ಇಲಾಖೆಯ ಗಂಗಾ ಕಲ್ಯಾಣ ಯೋಜನೆಗಳಿಗೆ ಮಾತ್ರ ಕೊಳವೆ ಬಾವಿ ಕೊರೆಸುವ ಯೋಜನೆಗೆ ಇರುವ ನಿರ್ಭಂಧವನ್ನು ಸಡಿಲಿಸಿ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ ಗಂಗಾ ಕಲ್ಯಾಣ ಯೋಜನೆಗೆ ವಿನಾಯಿತಿ ನೀಡಲಾಗಿರುತ್ತದೆ.[ಹೇಮಾವತಿ ಭಾಗದ ರೈತರಿಗೆ ಎಕರೆಗೆ 50 ಸಾವಿರ ರು ನೀಡಿ : ರೇವಣ್ಣ]
ಸರ್ಕಾರದ ಆದೇಶಾನುಸಾರ ಹೊಸದಾಗಿ ಕೊಳವೆ ಬಾವಿ ಕೊರೆಸುತ್ತಿರುವುದು ಪತ್ತೆಯಾದಲ್ಲಿ ಕೊಳವೆ ಬಾವಿ ಕೊರೆಯುವ ಯಂತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು, ಹಾಗೂ ಕೊಳವೆ ಬಾವಿ ಸ್ವಾಧೀನಪಡಿಸಿಕೊಂಡು ನೀರನ್ನು ಸಾರ್ವಜನಿಕ ಉದ್ದೇಶಕ್ಕಾಗಿ, ದನಕರುಗಳ ಕುಡಿಯುವ ನೀರಿಗಾಗಿ ಬಳಸಲಾಗುವುದು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಸರ್ಕಾರ ಅಂತರ್ಲ ಸಂರಕ್ಷಣೆಗೆ ಕಠಿಣ ಕ್ರಮಕ್ಕೆ ಮುಂದಾಗಿರುವುದರಿಂದ ಕೊಳವೆ ಬಾವಿ ಕೊರೆಸುವಂತಿಲ್ಲ.
ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕೊಳವೆ ಬಾವಿ ಕೊರೆಸಲು ಮುಂದಾದಲ್ಲಿ ಕೊಳವೆ ಬಾವಿಕೊರೆಯುವವರು ಹಾಗೂ ಕೊರೆಸುವವರು ಇಬ್ಬರ ವಿರುದ್ದವೂ ಕರ್ನಾಟಕ ಅಂತರ್ಜಲ (ಅಭಿವೃದ್ದಿ ಮತ್ತು ನಿರ್ವಹಣೆ ವಿನಿಮಯನ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012 ರಂತೆ ಜಿಲ್ಲಾ ಅಂತರ್ಜಲ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯಬೇಕಿದೆ.
ಅನುಮತಿ ಪಡೆಯದೆ ಬಾವಿಯನ್ನು ಕೊರೆಯುವುದಕ್ಕೆ/ತೋಡುವುದಕ್ಕೆ ತೊಡಗಿರುವ ಯಾವೂಬ್ಬ ವ್ಯಕ್ತಿಯು, ಐದು ಸಾವಿರ ರೂಪಾಯಿಗಳವರೆಗು ವಿಸ್ತರಿಸಬಹುದಾದಂಥ ಜುಲ್ಮಾನೆ ಅಥವಾ ಆರು ತಿಂಗಳವರೆಗೆ ವಿಸ್ತರಿಸಬಹುದಾದಂತಹ ಕಾರಾಗೃಹವಾಸ ಅಥವಾ ಇವೆರೆಡೂ ದಂಡನೆಗೆ ಗುರಿಯಾಗತಕ್ಕದ್ದು ಎಂದು ಜಿಲ್ಲಾಧಿಕಾರಿ ವಿ.ಚೈತರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿನ ಅಂತರ್ಜಲ ಮಟ್ಟದ ಎರಿಳಿತಗಳ ಬಗ್ಗೆ ಅದ್ಯಯನ ನೆಡೆಸುವಂತಹ ಕೊಳವೆ ಬಾವಿಗಳನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಈ ಪ್ರಕಟಣೆ ಅನ್ವಯಿಸುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.