ಹಾಸನ: ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದವರಿಗೆ ಬಿತ್ತು ಗೂಸಾ
ಹಾಸನ, ಆಗಸ್ಟ್ 22 : ಅಮಾಯಕರಿಗೆ ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದವರನ್ನು ಸಾರ್ವಜನಿಕರೇ ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಬೇಲೂರು ತಾಲೂಕಿನ ಬಿಟ್ರುವಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂಗಡಿಹಳ್ಳಿ ಗ್ರಾಮದ ಜಗದೀಶ್, ಉಮೇಶ್, ಗಿರೀಶ್ ಹಾಗೂ ಚಾಂದಿನಿ ಎನ್ನುವರರು ಸಾರ್ವಜನಿಕರಿಗೆ ವಂಚಿಸಿ ಗೂಸಾ ತಿಂದು ಪೊಲೀಸ್ ಅತಿಥಿಯಾಗಿದ್ದಾರೆ.
ಇವರು ಕೆಲವರನ್ನು ಸಂಪರ್ಕಿಸಿ ತಮ್ಮ ಬಳಿ ಚಿನ್ನದ ನಾಣ್ಯ ಮತ್ತು ಒಡವೆಗಳಿದ್ದು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದರು
ಬಿಟ್ರುವಳ್ಳಿ ಗ್ರಾಮದ ಪುನೀತ್ ಸಂಬಂಧಿಕ ನಾಗೇಶ್ ಎಂಬುವರೊಂದಿಗೆ ಹುಳಿಯಾರಿನಲ್ಲಿ ಬೇಕರಿ ನಡೆಸುತ್ತಿದ್ದು ಅವರ ಬಳಿಗೆ ಆ. 8 ರಂದು ಆಗಮಿಸಿದ ವಂಚಕರು ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳ ಕೊಡುವುದಾಗಿ ತಿಳಿಸಿ ಕೆಲವು ಚಿನ್ನದ ಆಭರಣಗಳನ್ನು ತೋರಿಸಿದ್ದರು. ಬಳಿಕ ಆ ದಿನ ಅವುಗಳನ್ನು ನೀಡದೆ ಮಾರನೆಯ ದಿನ ತಂದುಕೊಡುವುದಾಗಿ ಹೊರಟು ಹೋಗಿದ್ದರು.
ಮರುದಿನ ಅಂದರೆ ಆ.9ರಂದು ನಾಣ್ಯ ಹಾಗೂ ಸಣ್ಣ ಗುಂಡುಗಳೊಂದಿಗೆ ಆಗಮಿಸಿ ಅವುಗಳನ್ನು ತೋರಿಸಿದ್ದಾರೆ. ಮೊದಲ ದಿನ ತಂದಿದ್ದ ಚಿನ್ನದ ನಾಣ್ಯ ಹಾಗೂ ಗುಂಡುಗಳು ಚಿನ್ನದ್ದು ಎಂದು ಖಾತ್ರಿ ಪಡಿಸಿಕೊಂಡಿದ್ದ ಪುನೀತ್ 2ನೇ ದಿನ ತಂದಿದ್ದ ಚಿನ್ನದ ನಾಣ್ಯ ಹಾಗೂ ಗುಂಡುಗಳನ್ನು ಪಡೆದು 2 ಲಕ್ಷ ರೂ. ನೀಡಿದ್ದಾರೆ.
ಆದರೆ, ಹಣ ಪಡೆದುಕೊಂಡು ಹೋದ ನಂತರ ಅವರು ನೀಡಿದ ನಾಣ್ಯ ಹಾಗೂ ಗುಂಡುಗಳು ನಕಲಿ ಎಂಬುದು ದೃಢವಾಗಿದೆ.
ಬೇಲೂರು ತಾಲೂಕಿನ ಬಿಟ್ರುವಳ್ಳಿಗೆ ಬಂದು ಗ್ರಾಮದ ಬಳಿಯ ಮೋಸ ಮಾಡಿದ ಜಗದೀಶ್ ಹಾಗೂ ಉಮೇಶ್ ಅಲ್ಲಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಹಿಡಿದು ವಿಚಾರಿಸುತ್ತಿದ್ದಂತೆಯೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಸ್ಥಳೀಯರು ಅವರನ್ನು ಹಿಡಿದು ಗೂಸಾ ನೀಡಿದಾಗ ತಾವು ಅಮಾಯಕರಿಗೆ ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುತ್ತಿದ್ದುದನ್ನು ಒಪ್ಪಿಕೊಂಡಿದ್ದಾರೆ.
ಇದಾದ ಬಳಿಕ ವಂಚಕರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.