ಚನ್ನರಾಯಪಟ್ಟಣ: ಪತ್ರಿಕಾ ದಿನಾಚರಣೆ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ
ಚನ್ನರಾಯಪಟ್ಟಣ, ಜುಲೈ 17: ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪರ್ತಕರ್ತರು, ಪೊಲೀಸ್, ವಕೀಲರ ಸಂಘ ಹಾಗೂ ಕಂದಾಯ ಇಲಾಖೆ ನೌಕರರಿಗೆ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಪಂದ್ಯಾವಳಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಣಪತಿ ಗುರುಸಿದ್ದ ಬಾದಾಮಿ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, "ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಅತ್ಯವಶ್ಯಕವಾಗಿದೆ. ಗ್ರಾಮೀಣ ಭಾಗದ ಗ್ರೀಡಾ ಸ್ಪೂರ್ತಿಗೆ ಈ ರೀತಿಯ ಕ್ರೀಡಾಕೂಟಗಳು ಸಹಕಾರಿಯಾಗುತ್ತವೆ. ಪ್ರತಿಯೊಬ್ಬರೂ ಪ್ರತಿನಿತ್ಯ ತಮ್ಮ ಕೆಲಸದ ಒತ್ತಡದಲ್ಲಿರುವುದರಿಂದ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕವಾಗಿ ಒತ್ತಡ ಕಡಿಮೆಯಾಗುತ್ತದೆ," ಎಂದರು.
ನಂತರ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, "ಸರ್ಕಾರ ಕ್ರೀಡಾ ಇಲಾಖೆಗೆ ನೀಡುತ್ತಿರುವ ಅನುದಾನ ಕಡಿಮೆಯಾಗಿದೆ. ದೇಶದ ಜನಸಂಖ್ಯೆ ಹೆಚ್ಚಾಗಿದ್ದು, ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಸಾಲುತ್ತಿಲ್ಲ. ತಾಲ್ಲೂಕು ಕ್ರೀಡಾಂಗಣದ ಅಭಿವೃದ್ದಿಗೆ ಕ್ರೀಡಾ ಇಲಾಖೆಯಿಂದ ಕೇವಲ 25 ಲಕ್ಷ ಹಣ ಬಿಡುಗಡೆಯಾಗಿದೆ. ಆದರೆ ನಗರಾಭಿವೃದ್ದಿ ಇಲಾಖೆಯಿಂದ ಒಂದು ಕೋಟಿ ಹಣ ಮಂಜೂರಾಗಿದ್ದು, ಶೀಘ್ರದಲ್ಲಿಯೇ 1.25 ಕೋಟಿ ರೂಪಾಯಿ ವೆಚ್ಚದ ಅಭಿವೃದ್ದಿ ಕಾಮಗಾರಿ ಆರಂಭಗೊಳ್ಳಲಿದೆ," ಎಂದು ತಿಳಿಸಿದರು.
ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಕಲಗೂಡು ಮಾತನಾಡಿ, "ಕ್ರೀಡೆ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಯಶಸ್ಸು ಸಿಗುತ್ತದೆ. ಪತ್ರಕರ್ತರು ಸಮಾಜಮುಖಿ ಕೆಲಸ ಮಾಡುತ್ತಿದ್ದು, ಅದರ ಜೊತೆಗೆ ಪೊಲೀಸ್, ವಕೀಲರು ಹಾಗೂ ಕಂದಾಯ ಇಲಾಖೆಯೊಂದಿಗೆ ಸೌಹಾರ್ದಯುತ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ," ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದು, ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ವಕೀಲರ ಸಂಘ ಜಯಗಳಿಸಿತು. ಪತ್ರಕರ್ತರು ಹಾಗೂ ಕಂದಾಯ ಇಲಾಖೆ ನಡುವೆ ನಡೆದ ಎರಡನೇ ಪಂದ್ಯದಲ್ಲಿ ಪತ್ರಕರ್ತರ ತಂಡ ಜಯಗಳಿಸಿತು.
ಅಂತಿಮ ಪಂದ್ಯದಲ್ಲಿ ವಕೀಲರ ಸಂಘದ ತಂಡವನ್ನು 25 ರನ್ಗಳಿಂದ ಮಣಿಸಿ ಪತ್ರಕರ್ತರ ತಂಡ ಮೊದಲನೇ ಸ್ಥಾನ ಪಡೆದರೆ, ವಕೀಲರ ಸಂಘ ಎರಡನೇ ಸ್ಥಾನ ಪಡೆಯಿತು. ಪೊಲೀಸ್ ತಂಡ ಮೂರನೇ ಹಾಗೂ ಕಂದಾಯ ಇಲಾಖೆ ತಂಡ ನಾಲ್ಕನೇ ಸ್ಥಾನ ಪಡೆಯಿತು.