ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ ː ಸೆಂಚುರಿ ಸ್ಟಾರ್ ಶಿವಣ್ಣ
ಹಾಸನ, ಜುಲೈ 07: 'ನನಗೂ ರಾಜಕೀಯಕ್ಕೂ ಆಗಿ ಬರುವುದಿಲ್ಲ. ನಮ್ಮ ಕುಟುಂಬದಿಂದ ಗೀತಾ ಅವರು ಸಕ್ರಿಯ ರಾಜಕೀಯದಲ್ಲಿದ್ದಾರೆ ಅಷ್ಟೇ, ಅವರಿಗೆ ನಮ್ಮ ಬೆಂಬಲವಿದೆ' ಎಂದು ನಟ ಶಿವರಾಜ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ಉದ್ದೇಶದಿಂದ ರಾಹುಲ್ ನಮ್ಮ ಮನೆಗೆ ಬಂದಿದ್ದಲ್ಲ: ಶಿವಣ್ಣ
ಹಾಸನದಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ನ ನೂತನ ಮಳಿಗೆ ಉದ್ಘಾಟನೆಗೆ ಬಂದಿದ್ದ ಶಿವರಾಜ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿದರು.
'ನಾನು ರಾಜಕೀಯಕ್ಕೆ ಬರುವುದಾಗಿ ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದೆಲ್ಲಾ ಅಪಟ್ಟ ಸುಳ್ಳು. ಒಂದು ವೇಳೆ ಆ ರೀತಿ ಇದ್ದರೆ ಮೊದಲು ಮಾಧ್ಯಮದವರಿಗೆ ತಿಳಿಸುತ್ತೇನೆ' ಎಂದರು.
'ನಾನು ಕಲ್ಯಾಣ್ ಜ್ಯುವೆಲರ್ಸ್ನ ರಾಯಬಾರಿಯಾಗಿದ್ದೇನೆ. ಇಂದು ಹಾಸನ, ಬಳ್ಳಾರಿ, ಉಡುಪಿ, ಶಿವಮೊಗ್ಗ ಮತ್ತು ದಾವಣೆಗೆರೆಯಲ್ಲಿ ಶೋರೂಂಗಳು ಪ್ರಾರಂಭವಾಗುತ್ತಿವೆ. ಹಾಸನದಿಂದಲೇ ಮೊದಲು ಶೋರೂಂಗೆ ಚಾಲನೆ ನೀಡಲಾಗುತ್ತದೆ' ಎಂದು ಶಿವರಾಜ್ ಕುಮಾರ್ ಹೇಳಿದರು.
ರಾಜಕೀಯ ಪ್ರವೇಶದ ಬಗ್ಗೆ
ನಾನು ರಾಜಕೀಯಕ್ಕೆ ಬರುವುದಾಗಿ ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದೆಲ್ಲಾ ಅಪಟ್ಟ ಸುಳ್ಳು. ಒಂದು ವೇಳೆ ಆ ರೀತಿ ಇದ್ದರೆ ಮೊದಲು ಮಾಧ್ಯಮದವರಿಗೆ ಹೇಳುತ್ತಿದ್ದೆ. ಆದರೆ, ಅಂತಹ ಯಾವುದೇ ವಿಷಯ ಇಲ್ಲ. ರಾಜಕೀಯಕ್ಕೆ ಬರುವ ಆಸೆ, ಆಸಕ್ತಿ ನನಗಿಲ್ಲ ಎಂದು ಪುನರುಚ್ಚರಿಸಿದರು. ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಮತ್ತೆ ಸುದ್ದಿ ಹಬ್ಬುತ್ತಿರುವುದೇಕೆ ಎಂಬುದು ನನಗೆ ಕುತೂಹಲವಾಗಿದೆ ಎಂದರು ಹೇಳಿದರು.
ರಾಹುಲ್ ಗಾಂಧಿ ಭೇಟಿಯ ನಂತರ
ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲು ಡಾ.ರಾಜ್ ಕುಟುಂಬಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭೇಟಿ ನೀಡಿದ್ದರು. ಇದಾದ ಬಳಿಕ,ಗೀತಾ ಶಿವರಾಜಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಮುಂಬರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಬಗ್ಗೆ ಸಂಕ್ಷಿಪ್ತವಾಗಿ ಚರ್ಚೆ ನಡೆಯಿತು ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಸುದ್ದಿಯನ್ನು ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಇಬ್ಬರೂ ಅಲ್ಲಗೆಳೆದಿದ್ದರು.
ನಾವು ಜನಪ್ರತಿನಿಧಿಗಳು
ರಾಜಕಾರಣಿಗಳು ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಲಿ, ಅವರು ಜನಪ್ರತಿನಿಧಿಗಳು ಎನ್ನುವುದನ್ನು ಮೊದಲು ಅರಿತುಕೊಳ್ಳಲಿ. ಅವರು ನೀಡುವ ಬೇಕಾಬಿಟ್ಟಿ ಹೇಳಿಕೆಗಳು ಸಮಾಜಕ್ಕೆ ತಪ್ಪು ಸಂದೇಶ ನೀಡದಿರಲಿ ಎಂದು ನಾಡಿನ ಸಮಸ್ತ ರಾಜಕಾರಣಿಗಳಿಗೆ ಹ್ಯಾಟ್ರಿಕ್ ಶಿವರಾಜ್ ಕುಮಾರ್ ಅವರು ಈ ಹಿಂದೆ ಎಚ್ಚರಿಕೆ ಸಂದೇಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜಕೀಯ ನನಗೆ ಇಷ್ಟ ಇಲ್ಲ
ರಾಜಕೀಯ ನನಗಿಷ್ಟವಿಲ್ಲ,ನನ್ನ ಪತ್ನಿ ಕಣಕ್ಕಿಳಿದಾಗ ಗಂಡನಾಗಿ ನಾನು ಮತಯಾಚಿಸಿದೆ. ಹಾಡುವುದು, ಕುಣಿಯುವುದು ಕಲಾವಿದನಾದ ನನ್ನ ಧರ್ಮ. ಅದನ್ನು ನಾನು ಮಾಡಿದೆ. ರಾಜಕೀಯ ಉದ್ದೇಶಕ್ಕಾಗಿ ನಮ್ಮ ಕುಟುಂಬದಲ್ಲಿ ಎಂದಿಗೂ ಗೊಂದಲ ಉಂಟಾಗಿಲ್ಲ. ರಾಜಕೀಯದಿಂದ ಎಂದಿದ್ದರೂ ನಾನು ದೂರವೇ ಇರುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದರು.