2ನೇ ಮದುವೆ: ಹಾಸನದ ಬೀದಿಯಲ್ಲಿ ಸವತಿಯರ ಮಾರಾಮಾರಿ
ಹಾಸನ, ಜನವರಿ 23: ಮುಚ್ಚಳಿಕೆ ಪತ್ರ ಬರೆಸಿಕೊಂಡರೂ ಕದ್ದು ವಿವಾಹವಾಗಿದ್ದಾರೆ ಎಂದು ಮೊದಲ ಪತ್ನಿ ಎರಡನೇ ಪತ್ನಿಯ ಜುಟ್ಟು ಹಿಡಿದುಕೊಂಡು ದರದರನೆ ಬೀದಿಗೆ ಎಳೆದುಕೊಂಡು ಬಂದು ಥಳಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಹಾಸನದಲ್ಲಿ ಜರುಗಿದೆ.
ಸೌಮ್ಯ ಎಂಬಾಕೆಯೇ ಥಳಿಸಿದ ಮೊದಲ ಪತ್ನಿ, ವಿಜಯಲಕ್ಷ್ಮೀ ಎರಡನೇ ಪತ್ನಿ. ಇನ್ನು ಪ್ರಭಾಕರ್ ಎಂಬಾತನೇ ಇಬ್ಬರು ಪತ್ನಿಯರ ಗಡಿಬಿಡಿ ಗಂಡ. ಪ್ರಭಾಕರ್ ಖಾಸಗಿ ಕಂಪನಿಯ ಈವೆಂಟ್ ಪ್ರೊಡ್ಯೂಸರ್. ಸೌಮ್ಯ ಮತ್ತು ಪ್ರಭಾಕರ್ ಗೆ ಎಂಟು ವರ್ಷಗಳ ಹಿಂದೆ ವಿವಾಹವಾಗಿತ್ತು. ಒಂದು ಮಗುವೂ ಇದೆ. ಸೌಮ್ಯ ಅತ್ತೆ ಮಾವಂದಿರಿಗೆ ಕಾಟ ಕೊಡುತ್ತಾಳೆ ಎಂಬ ಕಾರಣಕ್ಕೆ ಪ್ರಭಾಕರ್ ಆಕಾಶ್ ನಗರದಲ್ಲಿ ಪ್ರತ್ಯೇಕ ಮನೆಯನ್ನು ಮಾಡಿದ್ದ, ಅಲ್ಲದೆ ಸೌಮ್ಯಳಿಂದ ವಸ್ತ್ರ, ವಡವೆಗಾಗಿ ಪ್ರತಿದಿನ ಒತ್ತಡ ಹೆಚ್ಚಾಗುತ್ತಿದ್ದ ಕಾರಣ ಮನನೊಂದಿದ್ದ.[ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಮದುವೆ]
ಈ ಕಾರಣದಿಂದಾಗಿ ಕೆಲಸದ ಸಮಯದಲ್ಲಿ ಪರಿಚಯವಾಗಿದ್ದ ವಿಜಯಲಕ್ಷ್ಮಿಯನ್ನು ವಿವಾಹವಾಗಲು ಮುಂದಾಗಿದ್ದ. ಈ ಮಾಹಿತಿ ಹೇಗೋ ಸೌಮ್ಯಳಿಗೆ ತಿಳಿದು ರದ್ಧಾಂತವೇ ನಡೆದಿತ್ತು. ಆಗಲೂ ಹಾಸನ ಪೊಲೀಸರು ಬಂದು ಇವರಿಬ್ಬಿರಿಂದ ವಿವಾಹವಾಗದಂತೆ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದರು. ಆದರೆ ವಿಜಯಲಕ್ಷ್ಮೀ ಮತ್ತು ಪ್ರಭಾಕರ್ ಸೌಮ್ಯ ಳಿಗೆ ಕಾಣದಂತೆ ವಿವಾಹವಾಗಿದ್ದು, ಈ ವಿಷಯ ತಿಳಿದ ಸೌಮ್ಯ, ವಿಜಯಲಕ್ಷ್ಮೀ ಮನೆಗೆ ತೆರಳಿ ಆಕೆಯ ಜೂಟನ್ನು ಹಿಡಿದು ಬೀದಿಗೆ ಎಳೆತಂದು ಮನಬಂದಂತೆ ಥಳಿಸಿದ್ದಾಳೆ, ಅವಾಚ್ಯ ಶಬ್ಧಗಳಿಂದ ಬೈದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಪತ್ನಿಯರು ಸೇರಿದಂತೆ ಪ್ರಭಾಕರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.