ಧಾರವಾಡ : ಯಮನೂರು ಲಾಠಿ ಚಾರ್ಜ್, 6 ಪೇದೆಗಳ ಅಮಾನತು
ಧಾರವಾಡ, ಆಗಸ್ಟ್ 02 : ಧಾರವಾಡದ ಯಮನೂರಿನಲ್ಲಿ ರೈತರ ಮೇಲೆ ನಡೆದ ಲಾಠಿ ಚಾರ್ಜ್ಗೆ ಸಂಬಂಧಿಸಿದಂತೆ 6 ಪೊಲೀಸ್ ಪೇದೆಗಳನ್ನು ಅಮಾನತು ಮಾಡಲಾಗಿದೆ. ಈ ಘಟನೆ ಬಗ್ಗೆ ಎಡಿಜಿಪಿ ಕಮಲ್ ಪಂತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಅವರು 6 ಪೊಲೀಸ್ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಡಿವೈಎಸ್ಪಿ ಅವರನ್ನು ವರ್ಗಾವಣೆ ಮಾಡಲಾಗಿದೆ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.[ಧಾರವಾಡದಲ್ಲಿ ಖಾಕಿ ದರ್ಪ, ಮಾನವೀಯತೆ ಮರೆತ ಪೊಲೀಸರು]
ಬೆಳಗಾವಿಯ ಇಬ್ಬರು, ವಿಜಯಪುರ ಜಿಲ್ಲೆಯ ಇಬ್ಬರು ಮತ್ತು ನವಲಗುಂದದ ಇಬ್ಬರ ಪೇದೆಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಆದರೆ, ಪೇದೆಗಳ ಹೆಸರನ್ನು ಮಾಧ್ಯಮಗಳಿಗೆ ನೀಡಲು ಎಸ್ಪಿ ನಿರಾಕರಿಸಿದ್ದಾರೆ.[ಪೊಲೀಸ್ ದೌರ್ಜನ್ಯ: ಎಡಿಜಿಪಿ ಪಂತ್ ರಿಂದ ತನಿಖೆ]
ಜುಲೈ 29ರಂದು ಮಹದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ರೈತರು, ಮಹಿಳೆಯರಿಗೆ ಲಾಠಿಯಿಂದ ಥಳಿಸಿದ್ದರು. ಪೊಲೀಸರ ದೌರ್ಜನ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು.[ಚಿತ್ರಗಳು : ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಬಿಸಿ]
ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು : ಯಮನೂರಿನಲ್ಲಿ ನಡೆದ ಪೊಲೀಸರ ದೌರ್ಜನ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಮಹಿಳೆಯರ, ವೃದ್ಧರ ಮೇಲೆ ಹಲ್ಲೆ ನಡೆಸಿರುವುದಕ್ಕೆ ವಿಷಾದ ವ್ಯಕ್ತ ಪಡಿಸುತ್ತೇನೆ. ಪೊಲೀಸರು ಸಂಯಮ ಮೀರಿ ವರ್ತಿಸಿದ್ದರೆ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ' ಎಂದು ಹೇಳಿದ್ದರು.
ಯಮನೂರಿನಲ್ಲಿ ನಡೆದ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೆಹರು ಓಲೇಕಾರ ಅವರನ್ನು ವರ್ಗಾವಣೆ ಮಾಡಲಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಲೋಹಾರ ಮತ್ತು ಸಬ್ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡಲಾಗಿದೆ.
ತನಿಖೆಗೆ ಆದೇಶ : ಯಮನೂರಿನಲ್ಲಿ ನಡೆದ ಪೊಲೀಸರ ದೌರ್ಜನ್ಯದ ಬಗ್ಗೆ ತನಿಖೆ ನಡೆಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ ಆದೇಶ ನೀಡಿದ್ದಾರೆ. ಎಡಿಜಿಪಿ ಕಮಲ್ ಪಂತ್ ಅವರು ತನಿಖೆ ನಡೆಸುತ್ತಿದ್ದು, ಒಂದು ವಾರದಲ್ಲಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಪೊಲೀಸರ ದೌರ್ಜನ್ಯದ ವಿಡಿಯೋ