ಹುಬ್ಬಳ್ಳಿ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ರೈಲ್ವೆ ನೌಕರರ ಪ್ರತಿಭಟನೆ
ಹುಬ್ಬಳ್ಳಿ, ಫೆಬ್ರವರಿ,04: ಏಳನೇ ವೇತನ ಆಯೋಗದಲ್ಲಿ ಸೂಚಿಸಿದಂತೆ ಕನಿಷ್ಠ ವೇತನ ಹೆಚ್ಚಿಸಬೇಕು ಮತ್ತು ಇನ್ನಿತರ ಬೇಡಿಕೆ ಈಡೇರಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ ಸೌಥ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ಬುಧವಾರ ನಗರದಲ್ಲಿ ಭಾರೀ ಪ್ರತಿಭಟನೆ ನಡೆಸಿತು.
ಯೂನಿಯನ್ ಕೇಂದ್ರ ಕಚೇರಿ ಅಧ್ಯಕ್ಷ ಆರ್.ಆರ್.ನಾಯ್ಕ ಮಾತನಾಡಿ, 'ಕನಿಷ್ಠ ವೇತನ 26 ಸಾವಿರ ರೂ. ಹೆಚ್ಚಿಸಬೇಕು. ಇದರ ಜೊತೆಗೆ 26 ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ಬಾರಿ ಹೋರಾಟ ನಡೆಸಲಾಗಿದೆ. ಆದರೆ ಕೇಂದ್ರ ಸರಕಾರ ಇದುವರೆಗೂ ಯಾವುದೇ ಬೇಡಿಕೆಗಳನ್ನು ಈಡೇರಿಸಿಲ್ಲ' ಎಂದು ಆರೋಪಿಸಿದರು.[ಕಾಂಗ್ರೆಸ್ ವೇದವ್ಯಾಸ ಕೌಲಗಿಯಿಂದ ಪ್ರಹ್ಲಾದ್ ಜೋಶಿಗೆ ಬಹಿರಂಗ ಪತ್ರ]
10 ವರ್ಷಕ್ಕೊಮ್ಮೆ ಇರುವ ವೇತನ ಪರಿಷ್ಕರಣೆಯನ್ನು 5 ವರ್ಷಗಳಿಗೆ ಇಳಿಸಬೇಕು. ತಮ್ಮ ಬೇಡಿಕೆಗಳು ಈಡೇರದೇ ಇದ್ದಲ್ಲಿ, ಮಾರ್ಚ್ ತಿಂಗಳಿನ ಮೊದಲ ವಾರದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಸಿದರು. ಯೂನಿಯನ್ ಮುಖಂಡರಾದ ಡಾ.ಎ.ಎಂ.ಡಿಕ್ರೂಜ್, ವಿ.ಚಾರ್ಕಾಣಿ ಮತ್ತಿತರರು ಪಾಲ್ಗೊಂಡಿದ್ದರು.
ಧಾರವಾಡ ಮಾರ್ಕೋಪೋಲೋ ಲಾಕೌಟ್ ಗೆ ರಾಜ್ಯ ಸರಕಾರ ಹೊಣೆ
ಹುಬ್ಬಳ್ಳಿ,ಫೆಬ್ರವರಿ,04: ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಮಾರ್ಕೋಪೋಲೋ ಕಂಪನಿ ಘಟಕ ಬಂದ್ ಆಗಲು ಸಿದ್ಧರಾಮಯ್ಯನವರ ಕಾಂಗ್ರೆಸ್ ಸರಕಾರವೇ ಕಾರಣ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ಮುಂಬಯಿಯ ಕ್ರಾಂತಿಕಾರಿ ಸಂಘಟನೆಯು ಈ ಕಂಪನಿಯ ನೌಕರರನ್ನು ಬಳಸಿಕೊಂಡು ಪದೇ ಪದೇ ಮುಷ್ಕರ ಮಾಡುತ್ತಿರುವುದರಿಂದ ಲಾಕೌಟ್ ಘೋಷಿಸಲಾಗಿದೆ. ಈ ಬಗ್ಗೆ ಹಿಂದೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಇದರಿಂದ 3500 ಕ್ಕೂ ನೌಕರರು ಮತ್ತು ಪರೋಕ್ಷವಾಗಿ 1000 ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಬೆಲ್ಲದ ಬೇಸರ ವ್ಯಕ್ತಪಡಿಸಿದರು.[ಖಾಸಗಿ ಬಸ್ ಗಳಿಂದ ಅವಳಿ ನಗರದ ಜನತೆಗೆ ಉಪದ್ರವ]
ಹೊರ ದೇಶ ಮತ್ತು ಹೊರ ರಾಜ್ಯಗಳ ಹೂಡಿಕೆದಾರರಿಗೆ ಬೆಂಬಲ ನೀಡುತ್ತಾ ಹೋದರೆ ನಮ್ಮ ರಾಜ್ಯದ ಕಾರ್ಮಿಕರ ಸ್ಥಿತಿಯನ್ನು ಕೇಳುವವರು ಯಾರು? ಎಂದು ಪ್ರಶ್ನಿಸಿರುವ ಅರವಿಂದ, ಈ ಬಗ್ಗೆ ಮಾತುಕತೆ ನಡೆಸಿ ಕಂಪನಿ ಪುನರಾರಂಭ ಮಾಡಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದ್ದಾರೆ.