ಸಂಬಳವಿಲ್ಲದೆ ಸೌದಿ ಒಡೆಯರ ಒದೆ ತಿಂದ ಧಾರವಾಡದ ಮಹಿಳೆ
ಸೌದಿ ಅರೇಬಿಯಾ, ಅಕ್ಟೋಬರ್, 28 : ಕಳೆದ ಕೆಲವು ದಿನಗಳ ಹಿಂದೆ ತಮಿಳುನಾಡಿನ ಮಹಿಳೆಯ ಕೈ ಕಟ್ ಮಾಡಿದ ಘಟನೆ ಮಾಸಿಲ್ಲ. ಅಷ್ಟರಲ್ಲೇ ಮನೆಕೆಲಸಕ್ಕೆಂದು ಕರೆದುಕೊಂಡು ಹೋದ ಧಾರವಾಡ ಮಹಿಳೆಗೆ ವೇತನ ನೀಡದೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ಮನೆ ಒಡೆಯರಿಂದ ನಿರಂತರ ಹಿಂಸೆಗೊಳಗಾಗುತ್ತಿದ್ದ ಸಾವಿತ್ರಿ ಮೂಲತಃ ಧಾರವಾಡದವಳು. ಈಕೆ ಬಡತನದಲ್ಲಿರುವ ಗಂಡನಿಗೆ ನೆರವು ನೀಡುವ ಕಾರಣಕ್ಕಾಗಿ ಏಜೆನ್ಸಿಯ ಮೂಲಕ ಮನೆಕೆಲಸಕ್ಕೆಂದು ಸೌದಿ ಅರೇಬಿಯಾಗೆ ತೆರಳಿದ್ದು, ಇಬ್ಬರು ಮಕ್ಕಳನ್ನು ಗಂಡನ ಆರೈಕೆಯಲ್ಲಿ ಬಿಟ್ಟು ಹೋಗಿದ್ದಳು. ಆದರೆ ಅಲ್ಲಿನ ಮನೆಯವರು ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ ಸಂಬಳ ಕೊಡದೆ ವಂಚಿಸಿದ್ದಾರೆ.[ಸೌದಿಯಲ್ಲಿ ತಮಿಳು ಮಹಿಳೆ ಕೈ ಕಟ್, ಭಾರತದಿಂದ ಪ್ರತಿಭಟನೆ]
ಏನಿದು ಘಟನೆ ?
ಸಾವಿತ್ರಿ, ಪರಶುರಾಮ್ ಎಂಬಾತನನ್ನು ಮದುವೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದರು. ಆತ ಉಡುಪಿಯಲ್ಲಿ ಕೂಲಿ ಕಾರ್ಮಿಕನಾಗಿದ್ದನು. ಮನೆಯಲ್ಲಿನ ಕಷ್ಟದ ನಿವಾರಣೆಗೆ ಮುಂದಾದ ಸಾವಿತ್ರಿ ಪತ್ರಿಕೆಯಲ್ಲಿ ಬಂದಿರುವ ತಿಂಗಳಿಗೆ 30,000 ಸಂಬಳದ ಜಾಹೀರಾತು ನೋಡಿ ಸಂಬಂಧಪಟ್ಟ ಏಜೆನ್ಸಿಗೆ ಭೇಟಿ ಮಾಡಿದ್ದಾಳೆ.
ಬಳಿಕ ಮುಂಬೈ ಏಜೆನ್ಸಿ ಮೂಲಕ ಸೌದಿ ಅರೇಬಿಯಾದ ರಿಯಾದ್ ಎಂಬ ಊರಿನಲ್ಲಿನ ಶ್ರೀಮಂತರ ಮನೆಗೆ 2015ರಲ್ಲಿ ಹೋಗಿದ್ದಳು. ದಿನಕ್ಕೆ 16 ರಿಂದ 18 ಗಂಟೆಗಳ ಕಾಲ ದುಡಿಸಿಕೊಳ್ಳುತ್ತಿದ್ದ ಅವರು 5 ತಿಂಗಳಿಂದ ಸಂಬಳ ನೀಡಿರಲಿಲ್ಲ. ಯಾವುದೇ ಕಾರಣವಿಲ್ಲದೆ ಥಳಿಸುತ್ತಿದ್ದರು. ಇವರ ಹಿಂಸೆಯಿಂದ ಬೇಸತ್ತ ಮಹಿಳೆಯು ತನ್ನ ಗಂಡನಿಗೆ ಕರೆ ಮಾಡಿ 'ಸಂಬಳ ಕೇಳಿದರೆ ಹಿಂಸೆ ನೀಡುತ್ತಿದ್ದಾರೆ' ಎಂದು ಫೋನ್ ಮಾಡಿ ತಿಳಿಸಿದ್ದಾಳೆ.[ಕಲ್ಲು ತುಂಬಿಸುವವ ಮ್ಯಾನೇಜರ್ ಆದ ಹಿಂದಿನ ಯಶಸ್ಸಿನ ಕಥೆ]
ಸಾವಿತ್ರಿಯಿಂದ ಕರೆಯನ್ನು ಸ್ವೀಕರಿಸಿದ ಈತ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾನೆ. ಬಳಿಕ ಸಾವಿತ್ರಿಯನ್ನು ಕಳುಹಿಸಿಕೊಟ್ಟ ಏಜೆನ್ಸಿ ಒಡೆಯನನ್ನು ಬಂಧಿಸಿದ ಪೊಲೀಸರು ಆಕೆಯನ್ನು ಪುನಃ ಧಾರವಾಡಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.