ಧಾರವಾಡ: ಮುಗದ ಮೀನುಗಾರರಿಗೆ 30 ಮನೆಗಳು ಮಂಜೂರು
ಮೀನುಗಾರಿಕೆ ಸಚಿವ ಪ್ರಮೋದ್ ಮದ್ವರಾಜ್ ಸೋಮವಾರ ಧಾರವಾಡದ ಮುಗುದ ಗ್ರಾಮಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆಗಳನ್ನು ಹಾಲಿಸಿದರು.ಹಾಗೂ ಮೀನುಗಾರರಿಗೆ 30 ಮನೆಗಳನ್ನು ಮಂಜೂರು ಮಾಡುವುದಾಗಿ ಹೇಳಿದರು.
ಧಾರವಾಡ, ಅಕ್ಟೋಬರ್. 25: ಧಾರವಾಡದ ಮುಗದ ಗ್ರಾಮದ ಮೀನುಗಾರರ ಕುಟುಂಬಗಳಿಗೆ ವಸತಿ ಭಾಗ್ಯ ದೊರೆಯಲಿದೆ. 30 ಮನೆಗಳನ್ನು ಮಂಜೂರು ಮಾಡಲಾಗುವುದು ಎಂದು ಮೀನುಗಾರಿಕೆ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
ಮುಗದ ಗ್ರಾಮದ ಕೆರೆಗೆ ಸೋಮವಾರ ಭೇಟಿ ನೀಡಿದ ಸಚಿವರು, ಮುಗದ ಹಾಗೂ ಮಂಡಿಹಾಳ ಕೆರೆಗಳಲ್ಲಿನ ಮೀನುಗಾರಿಕೆಯ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಧಾರವಾಡದ ಬಡ ಮೀನುಗಾರರು ಪ್ರಜ್ಞಾವಂತರಾಗಿದ್ದು, ಮೀನುಗಾರಿಕೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ಯುವ ಸಬಲೀಕರಣ, ಕ್ರೀಡೆ ಹಾಗೂ ಮೀನುಗಾರಿಕೆ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು.
ಇಲ್ಲಿನ ಮೀನುಗಾರರ ಕುಟುಂಬಗಳ ವಸತಿಗೆ 30 ಮನೆಗಳನ್ನು ಒದಗಿಸಲಾಗುವದು, ತಾಲ್ಲೂಕು ಮೀನುಗಾರಿಕೆ ಸಹಕಾರ ಸಂಘದ ಕಟ್ಟಡ ನಿರ್ಮಿಸಲು ಅನುದಾನ ನೀಡಲು ಸಹಕಾರ ಸಚಿವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವದು ಎಂದರು.
ಕೆರೆ ಮರು ಗುತ್ತಿಗೆಗೆ ಸೂಚನೆ
ಇಲ್ಲಿನ ಮೀನುಗಾರರಿಗೆ ಕೆರೆಗಳ ಮರು ಗುತ್ತಿಗೆ ನೀಡಬೇಕು ಎಂದು ಮೀನುಗಾರಿಕೆ ಸಚಿವರು ಮೀನುಗಾರಿಕೆ ಉಪನಿರ್ದೇಶಕರಿಗೆ ಸೂಚಿಸಿದರು.
ಸಚಿವರ ಸರಳ ಸಜ್ಜನಿಕೆ ಕಂಡು ಮೀನುಗಾರರು ಹರ್ಷ
ಕ್ರೀಡಾ ಮತ್ತು ಮೀನುಗಾರಿಕೆ ಸಚಿವ ಪ್ರಮೋದ್ ಮದ್ವರಾಜ್ ಅವರು ಧಾರವಾಡ ಸಮೀಪದ ಮುಗದ ಕೆರೆ ದಡದಲ್ಲಿ ಮೀನುಗಾರರೊಂದಿಗೆ ನೆಲದ ಮೇಲೆ ಕುಳಿತು ಸಮಾಲೋಚನೆ ನಡೆಸಿದರು. ಸಚಿವರ ಸರಳ ನಡವಳಿಕೆ ಹಾಗೂ ನೀಡಿದ ಭರವಸೆಗೆ ಮೀನುಗಾರರು ಹರ್ಷ ವ್ಯಕ್ತಪಡಿಸಿದರು.
ಮೀನುಗಾರರಿಂದ ಮಾಹಿತಿ ಪಡೆದ ಸಚಿವರು
ಮಳೆ ಅಭಾವದಿಂದ ಕೆರೆಯಲ್ಲಿ ನೀರು ಸಂಗ್ರಹವಾಗದ ಸಂದರ್ಭಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಸೌಲಭ್ಯ ಸಿಗುತ್ತಿರುವ ಬಗ್ಗೆ ಮೀನುಗಾರರಿಂದ ಮಾಹಿತಿ ಪಡೆದರು.
ಶಿಕ್ಷಣಕ್ಕೆ ಒತ್ತು ನೀಡುವಂತೆ ಸಲಹೆ
ಸರಳ ಹಾಗೂ ಸಹಜತೆಯಿಂದ ಮೀನುಗಾರರ ಜೊತೆ ಬೆರೆತು ಅವರ ಕುಟುಂಬದ ಸದಸ್ಯರ ಅಹವಾಲುಗಳನ್ನು ಆಲಿಸಿದ ಸಚಿವರು,ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ ನೀಡಿದರು.
ಕ್ರೀಡಾ ವಸತಿ ನಿಲಯ ಉದ್ಘಾಟನೆ
ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹಾಗೂ ಕ್ರೀಡಾ ವಸತಿ ನಿಲಯವನ್ನು ಕ್ರೀಡಾ ಸಚಿವ ಪ್ರಮೋದ್ ಮದ್ವರಾಜ್ ಉದ್ಘಾಟಿಸಿದರು.