ಹುಬ್ಬಳ್ಳಿಯ ಗಲ್ಲಿಗಳಲ್ಲಿ ಮರಾಠಿಗರ ಪೊರಕೆ ಸೇವೆ!
ಹುಬ್ಬಳ್ಳಿ, ಫೆಬ್ರವರಿ,29: ಮಹಾರಾಷ್ಟ್ರದಿಂದ ಬಂದ ಐದು ಸಾವಿರಕ್ಕೂ ಹೆಚ್ಚು ಜನ ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಭಾನುವಾರ ನಡೆದ 'ಮರಾಠಿಗರ ಪೊರಕೆ ಸೇವೆ' ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇಡೀ ನಗರವನ್ನು ಕಸಗುಡಿಸಿ ಸ್ವಚ್ಛಗೊಳಿಸುವುದರ ಮೂಲಕ ಜನತೆಯ ಮೆಚ್ಚುಗೆಗೆ ಪಾತ್ರರಾದರು.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಭಾಗ ತಾಲೂಕು ರೇವದಂಡಾ ಗ್ರಾಮದ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯರು ಈ ಸ್ಚಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಮಹಾನಗರದಲ್ಲಿ ವಿನೂತನ ದಾಖಲೆ ನಿರ್ಮಿಸಿದರು.
'ಸ್ವಚ್ಛ ನಗರ, ಆರೋಗ್ಯದ ತಾಣ' ಎಂಬುದನ್ನು ಅರಿತ ಪ್ರತಿಷ್ಠಾನದ ಸದಸ್ಯರು ಸ್ವತಃ ತಾವೇ ತಂದಿದ್ದ ಪೊರಕೆ, ಗುದ್ದಲಿಗಳನ್ನು ಬಳಸಿ ಕಸ ತೆಗೆದು ಮಹಾನಗರ ಪಾಲಿಕೆಯ ಟ್ಯಾಕ್ಟರ್ ಗಳಲ್ಲಿ ಸಾಗಿಸಿದರು. ಪಾಲಿಕೆಯ 40 ಕ್ಕೂ ಹೆಚ್ಚು ಟ್ಯ್ರಾಕ್ಟರ್ ಗಳನ್ನು ಈ ಸಮಾಜಸೇವೆಗೆ ಬಳಸಿಕೊಳ್ಳಲಾಯಿತು.[ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]
ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಇವರ ಮೊಗದಲ್ಲಿ ಯಾವುದೇ ಬೇಸರವಿರಲಿಲ್ಲ. ಅದರ ಬದಲು ಉತ್ಸಾಹ ತುಂಬಿ ತುಳುಕುತ್ತಿತ್ತು. ಬಿಸಿಲಿನ ಬೇಗೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಪಾಲ್ಗೊಂಡಿದ್ದು ಹುಬ್ಬಳ್ಳಿಯ ಜನತೆಯ ಆಶ್ಚರ್ಯಕ್ಕೆ ಕಾರಣವಾಯಿತು. ಮರಾಠಿಗರ ಪೊರಕೆ ಸೇವೆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಮರಾಠಿಗರ ಪೊರಕೆ ಸೇವೆಗೆ ಬಂದದ್ದು ಹೇಗೆ?
ಮಹಾರಾಷ್ಟ್ರದಿಂದ ಆಗಮಿಸಿದ ಪ್ರತಿಷ್ಠಾನದ ಸದಸ್ಯರು ತಾವೇ ಸ್ವತಃ ನೀರು ಊಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದರು. ಕೆಲವರು ರೈಲಿನಲ್ಲಿ ಬಂದಿದ್ದರೆ, ಇನ್ನು ಕೆಲವರು ಸರ್ಕಾರಿ ಮತ್ತು ಖಾಸಗಿ ಬಸ್ ಗಳಲ್ಲಿ ಆಗಮಿಸಿದ್ದರು. ಇನ್ನಷ್ಟು ಜನ ಸ್ವಂತ ವಾಹನಗಳಲ್ಲಿ ಬಂದಿದ್ದರು.
ಹಿಂದೆ ಗಿನ್ನೆಸ್ ದಾಖಲೆಗೆ ಸೇರಿತ್ತು ಈ ಸಂಸ್ಥೆ
ಮಹಾರಾಷ್ಟ್ರದ ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಸದಸ್ಯರು ಒಂದೇ ದಿನ ಒಂದೂವರೆ ಲಕ್ಷ ಜನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಷ್ಠಾನವನ್ನು ಗಿನ್ನೆಸ್ ವಿಶ್ವದಾಖಲೆಗೆ ಸೇರಿಸಿದ್ದಾರೆ.
ಸ್ವಚ್ಛತಾ ಅಭಿಯಾನ ಉದ್ಘಾಟನೆ ಮಾಡಿದವರು ಯಾರು?
ಸ್ವಚ್ಛತಾ ಅಭಿಯಾನ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮಾತನಾಡಿ,'ಮಹಾತ್ಮ ಗಾಂಧೀಜಿಯವರ ಸ್ವಚ್ಛತಾ ಅಭಿಯಾನ ಜನಾಂದೋಲನ ಆಗಬೇಕು' ಎಂದರು.
ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಅಧ್ಯಕ್ಷರು ಯಾರು?
ನಾನಾಸಾಹೇಬ ಧರ್ಮಾಧಿಕಾರಿ ಪ್ರತಿಷ್ಠಾನದ ಅಧ್ಯಕ್ಷರು ಸಚಿನ್ ಧರ್ಮಾಧಿಕಾರಿ, ಮಹಾರಾಷ್ಟ್ರದಿಂದ ಬಂದು ಸಭೆಯಲ್ಲಿ ಪಾಲ್ಗೊಂಡಿದ್ದ ಐದು ಸಾವಿರ ಜನರನ್ನು ಕಂಡು ನಿಬ್ಬೆರಗಾದರು.
ಯಾರೂ ಸಹಾಯ ಹಸ್ತ ನೀಡಲಿಲ್ಲ.
ದೂರದ ಮಹಾರಾಷ್ಟ್ರದಿಂದ ಬಂದ ಪ್ರತಿಷ್ಠಾನದ ಸದಸ್ಯರು ಬೆಳಗಿನಿಂದಲೇ ಬಿರು ಬಿಸಿಲಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರೇ, ನಗರದ ಕೆಲವರು ಮೊಬೈಲ್ ನಲ್ಲಿ ಈ ದೃಶ್ಯಗಳನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆದರೆ ಯಾರೊಬ್ಬರು ಅವರ ಸಹಾಯಕ್ಕೆ ನಿಂತು ಸ್ವಚ್ಚತೆಯಲ್ಲಿ ಸಹಕರಿಸಲಿಲ್ಲ.
ಕಾಣದ ಬಿಜೆಪಿ ಕಾರ್ಯಕರ್ತರು :
ನಗರದಲ್ಲಿ ಮಹಾರಾಷ್ಟ್ರದಿಂದ ಬಂದು ಸ್ವಚ್ಛತಾ ಕಾರ್ಯ ಮಾಡುತ್ತಿರುವ ಪ್ರತಿಷ್ಠಾನದ ಸದಸ್ಯರಿಗೆ ನಗರದ ಯಾವ ಅಧಿಕಾರಿಯೂ ಸಹಕರಿಸಲಿಲ್ಲ. ಸ್ವಚ್ಛತೆ ಬಗ್ಗೆ ಕೇಂದ್ರ ಸರಕಾರ ಪದೇ ಪದೇ ಹೇಳುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಮತ್ತು ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಇದ್ದರೂ ನಗರದಲ್ಲಿ ಕಸ ತುಂಬಿ ತುಳುಕುತ್ತಿರುತ್ತದೆ. ಈ ಅಭಿಯಾನದಲ್ಲಿ ಯಾವ ಬಿಜೆಪಿ ಕಾರ್ಯಕರ್ತರು ಕಾಣಿಸಲೇ ಇಲ್ಲ.