ಜಾತಿ ನಿಂದನೆ ಆರೋಪ, ಹುಬ್ಬಳ್ಳಿ ಪಾಲಿಕೆ ಸದಸ್ಯನ ಬಂಧನ
ಹುಬ್ಬಳ್ಳಿ, ಜನವರಿ,09: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಅವರ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಜಾತಿ ನಿಂದನೆ ಮತ್ತು ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಅವರನ್ನು ಶುಕ್ರವಾರ ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ಆಗ ಬಿಜೆಪಿ ಮುಖಂಡರು, ಸುಳ್ಳು ದೂರು ದಾಖಲಿಸಲಾಗಿದೆ. ಕೂಡಲೇ ಗಂಡಗಾಳೇಕರ ಅವರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.[ಬರ್ರೀ ಲೇ ಇಲ್ಲೇ ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೋ!]
ಗಂಡಗಾಳೇಕರ ಅವರನ್ನು ಬಂಧಿಸಿದ್ದು ಯಾಕೆ?
2013 ರ ಪಾಲಿಕೆ ಚುನಾವಣೆಯಲ್ಲಿ ಗಂಡಗಾಳೇಕರ ಅವರು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಆರ್ ಟಿಐ ಕಾರ್ಯಕರ್ತ ಯಲ್ಲಪ್ಪ ಬಾಗಲಕೋಟೆ ಎಂಬುವವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಜ.2 ರಂದು ನ್ಯಾಯಾಲಯದಲ್ಲಿ ವಿಚಾರಣೆ ಇತ್ತು. ಆ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದಂತೆ ಹೇಳಿದ ಗಂಡಗಾಳೇಕರ ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಯಲ್ಲಪ್ಪ ಜ.4 ರಂದು ಹಳೇಹುಬ್ಬಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಗಂಡಗಾಳೇಕರ ಅವರನ್ನು ಬಂಧಿಸಿದ್ದಾರೆ.
ನಗರದ 41 ನೇ ವಾರ್ಡ್ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಅವರನ್ನು ವಿಚಾರಣೆಗೆ ಠಾಣೆಗೆ ಕರೆ ತಂದ ಪೊಲೀಸರು ನಂತರ ಅವರನ್ನು ಬಂಧನಕ್ಕೊಳಪಡಿಸಿ ನ್ಯಾಯಾಧೀಶರೆದುರು ಹಾಜರುಪಡಿಸಲು ಧಾರವಾಡಕ್ಕೆ ಕರೆದೊಯ್ದರು.
ಬಿಜೆಪಿ ಮುಖಂಡರನ್ನು ಬಂಧಿಸುವುದು, ವಿಚಾರಣೆ ನೆಪದಲ್ಲಿ ಠಾಣೆಗೆ ಕರೆಯಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ ಎಂದು ದೂರಿದ ಪಾಲಿಕೆ ಮಾಜಿ ಸದಸ್ಯ ನಾಗೂಸಾ ಕಲಬುರ್ಗಿ, ಇದೇ ರೀತಿಯ ಘಟನೆಗಳು ನಡೆಯುತ್ತಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.[ಹಾಲಿನ ದರ ಏರಿಕೆ, ಬಿಜೆಪಿಯಿಂದ ತಕರಾರು ಏಕೆ?]
ಪೊಲೀಸ್ ಅಧಿಕಾರಿಗೆ ಮುತ್ತಿಗೆ : ಪಾಲಿಕೆ ಸದಸ್ಯ ಗಂಡಗಾಳೇಕರ ಅವರನ್ನು ಬಂಧನಕ್ಕೊಳಪಡಿಸಿದ ಎಸಿಪಿ ಬಿ.ಬಿ.ಪಾಟೀಲ್ ರನ್ನು ಸುತ್ತುವರಿದ ಪ್ರತಿಭಟನಾಕಾರರು ಪೊಲೀಸ್ ಠಾಣೆಯನ್ನು ಕಾಂಗ್ರೆಸ್ ಕಚೇರಿ ಮಾಡಿಕೊಂಡಿದ್ದೀರಾ? ಎಂದು ಪ್ರಶ್ನಿಸಿದರು.[3 ನಿಮಿಷಕ್ಕಾಗಿ 25 ದಿನ ಹಾಳು ಮಾಡಿದ ಕಾಂಗ್ರೆಸ್: GST ಬಿಲ್ ಕಥೆ?]
ಈ ಸಂದರ್ಭದಲ್ಲಿ ಎಸಿಪಿ ಬಿ.ಬಿ.ಪಾಟೀಲರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಮುಖಂಡ ಜಯತೀರ್ಥ ಕಟ್ಟಿ, ಈ ಹಿಂದೆ ಕಾಂಗ್ರೆಸ್ ಸದಸ್ಯ ಬಶೀರ್ ಗುಡಮಾಲ ವಿರುದ್ಧ 2-3 ಕ್ರಿಮಿನಲ್ ಕೇಸ್ ಗಳಿದ್ದರೂ ಅವರನ್ನು ಎಷ್ಟೋ ದಿನಗಳವರೆಗೂ ಬಂಧಿಸಿರಲಿಲ್ಲ. ಆದರೆ ಬಿಜೆಪಿ ಸದಸ್ಯರನ್ನು ದೂರು ದಾಖಲಾಗುತ್ತಿದ್ದಂತೆಯೇ ಬಂಧಿಸಲಾಗಿದೆ ಏಕೆ ಎಂದು ಪ್ರಶ್ನಿಸಿದರು.