ಹುಬ್ಬಳ್ಳಿಯಲ್ಲಿ ಜಿಟಿಜಿಟಿ ಮಳೆಗೆ ನಲಿದಾಡಿದ ಮಿರ್ಚಿ ಮಂಡಕ್ಕಿ
ಹುಬ್ಬಳ್ಳಿ, ಜೂ. 10: ಉತ್ತರ ಕರ್ನಾಟಕದ ರಾಜಧಾನಿ, ವಾಣಿಜ್ಯ ನಗರಿ, ಛೋಟಾ ಬಾಂಬೆ ಎಂದೇ ಹೆಸರಾಗಿರುವ ಮಲೆನಾಡಿನ ಸೆರಗಿನಲ್ಲಿರುವ ಹುಬ್ಬಳ್ಳಿ ಮಹಾನಗರದಲ್ಲಿ ಮುಂಗಾರು ಮಳೆ ಸೋಮವಾರದಿಂದ ಜಿಟಿಜಿಟಿಯಾಗಿ ಸುರಿಯುತ್ತಿದೆ.
ಜಿಟಿಜಿಟಿಯ ಮಳೆಯಿಂದ ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಸಂತಸದ ನಗೆ ಬೀರುತ್ತಿದ್ದಾರೆ. ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬಳಲಿದ್ದ ಜನತೆ ಮುಂಗಾರು ಮಳೆಯೊಂದಿಗೆ ಹವಾಮಾನವೂ ಕೂಡ ತಂಪಾಗಿರುವುದರಿಂದ ಸ್ವೇಟರ್, ರೇನಕೋಟ್, ಛತ್ರಿ ಖರೀದಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಾರೆ.[ಹುಬ್ಬಳ್ಳಿಯಲ್ಲಿ ಮಳೆ ಆರ್ಭಟ ಹೇಗಿತ್ತು?]
ಇಷ್ಟು ದಿನ ಫ್ಯಾನ್, ಎಸಿ, ಕೂಲರ್ ಇಲ್ಲದೇ ನಿದ್ದೆ ಮಾಡಲಾಗುತ್ತಿದ್ದ ಜನ, ಈಗ ಫ್ಯಾನ್ ಹಚ್ಚಿದಲ್ಲೇ ಆರಿಸ್ರೀ ಪಾ ಎಂದು ಹೇಳುವಂತಾಗಿದೆ. ಇದೇ ಪ್ರಕೃತಿಯ ವಿಸ್ಮಯವೆನ್ನಬಹುದು. ಏಕೆಂದರೆ ದಾಖಲೆಯ 40 ಡಿಗ್ರಿಯ ಉಷ್ಣಾಂಶದಲ್ಲಿ ಜೀವನ ಸಾಗಿಸಿದ್ದ ಜನತೆ ಈಗ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ನ ಚಳಿಯ ಅನುಭವ ಪಡೆಯುತ್ತಿದ್ದಾರೆ.
ಸತತ ಮಳೆ ಸುರಿಯದಿದ್ದರೂ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದರಿಂದ ಜನತೆ ಮನೆಯಲ್ಲಿ ಬೆಚ್ಚಗೆ ಕುಳಿತುಕೊಂಡು ಬಿಸಿ ಬಿಸಿ ಚಾ ಕುಡಿಯುತ್ತ ಮಂಡಕ್ಕಿ, ಮಿರ್ಚಿ , ಭಜ್ಜಿಯ ಮೊರೆ ಹೋಗಿ ಚಳಿ ಮತ್ತು ಮಳೆಯ ಅನುಭವವನ್ನು ಸಂತಸ ಪಡುತ್ತಿದ್ದಾರೆ. [ಮಳೆಗಾಲ ಬಂತು, ಎಚ್ಚೆತ್ತುಕೊಳ್ಳಿ: ಜಗದೀಶ್ ಶೆಟ್ಟರ್]
ಇತ್ತ ಮೆಡಿಕಲ್ ಶಾಪ್ ಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜನರಿಗೆ ನೆಗಡಿ, ಶೀತ, ಕೆಮ್ಮು ಮುಂತಾದ ಕಾಯಿಲೆಗಳು ಬರುವುದು ಸಾಮಾನ್ಯವಾಗಿರುವುದರಿಂದ ಸಾಕಷ್ಟು ಔಷಧಗಳನ್ನು ಸ್ಟಾಕ್ ಇಟ್ಟುಕೊಳ್ಳುತ್ತಿದ್ದಾರೆ. [ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!]
ಇದೇ ರೀತಿ ಮಳೆಗೆ ರಕ್ಷಣೆ ಪಡೆದುಕೊಳ್ಳಲು ಬೈಕ್ ಸವಾರರು ರೈನ್ ಕೋಟ್, ಟೊಪ್ಪಿಗೆ, ರಬ್ಬರ್ ಶೂ, ಛತ್ರಿ ಮತ್ತಿತರ ಮಳೆಯಿಂದ ರಕ್ಷಣೆ ಪಡೆಯುವ ಸಾಮಾನುಗಳನ್ನು ಮಾರುಕಟ್ಟೆಯಲ್ಲಿ ಖರೀದಿಸುತ್ತಿದ್ದಾರೆ. [ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]
ಒಂದೆಡೆ ಶ್ರೀಮಂತರು ತಮ್ಮ ಮನೆಯನ್ನು ಮಳೆಯಿಂದ ರಕ್ಷಣೆ ಮಾಡಿಕೊಳ್ಳುತ್ತಿದ್ದರೆ, ಬಡವರು ಹೆಂಚಿನ ಮನೆ ಹೆಂಚುಗಳನ್ನು ಬದಲಾವಣೆ ಮಾಡುತ್ತಿದ್ದಾರೆ. ಮಳೆಯಿಂದ ಸೋರಿಕೆಯಾಗಿ ತೊಂದರೆಯಾಗುವುದನ್ನು ತಪ್ಪಿಸಿಕೊಳ್ಳಲು ಮನೆ ಛಾವಣಿ ಮೇಲೆ ಸರ್ಕಸ್ ಆರಂಭವಾಗಿದೆ.[ಕಡಲೆಕಾಯಿ ಪರಿಷೆ ಇತಿಹಾಸ ಏನು?]
ಇನ್ನು ಮಳೆಗಾಲದಲ್ಲಿ ಹೆಚ್ಚಾಗಿ ಮನೆಗಳ ನಿರ್ಮಾಣ ಕಾಮಗಾರಿ ನಡೆಯದೇ ಇರುವುದರಿಂದ ಹತ್ತಿರದ ಹಳ್ಳಿಗಳ್ಳಿ ಬರುತ್ತಿದ್ದ ದುಡಿಮೆಗಾರರು ಹೊಟ್ಟೆಪಾಡಿಗಾಗಿ ಕೆಲವೊಂದು ಫ್ಯಾಕ್ಟರಿಗಳಿಗೆ ಕೆಲಸಕ್ಕಾಗಿ ಮೊರೆ ಹೋಗುತ್ತಿದ್ದಾರೆ.
ಒಟ್ಟಿನಲ್ಲಿ ಪ್ರಕೃತಿ ನಿಯಮದಂತೆ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲವನ್ನು ಸಂತಸದಿಂದ ಅನುಭವಿಸುವುದು ಜನಸಾಮಾನ್ಯರಿಗೆ ತಪ್ಪಿದ್ದಲ್ಲ ಎಂಬುದು ಮಾತ್ರ ಸತ್ಯ.