ಮಾರ್ಕೋಪೋಲೋ ಗಲಭೆಯ ಬಲಿಪಶು ಕಂಪನಿಯೋ, ಕಾರ್ಮಿಕರೋ?
ಹುಬ್ಬಳ್ಳಿ,ಮಾರ್ಚ್,05: ಧಾರವಾಡದ ಮಾರ್ಕೋಪೋಲೋ ಕಂಪನಿಯ ಕಾರ್ಮಿಕರು ಹಲವಾರು ಬೇಡಿಕೆಗೆ ಒತ್ತಾಯಿಸಿ ಕೈಗೊಂಡ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಕಂಪನಿಯ ವ್ಯವಸ್ಥಾಪಕರು ಶನಿವಾರ ಕಾರ್ಮಿಕರೊಂದಿಗೆ ಬಹಿರಂಗ ಮಾತುಕತೆ ನಡೆಸಲಿದ್ದಾರೆ.
ಕಾರ್ಮಿಕರ ಬೇಡಿಕೆ ಕುರಿತು ಶನಿವಾರ ಧಾರವಾಡ ನಗರದ ಸೀಡಾಕ್ ಆವರಣದಲ್ಲಿ ನಡೆಯುವ ಸಭೆಯಲ್ಲಿ ಕಾರ್ಮಿಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಂಡಲ್ಲಿ ಕಾರ್ಮಿಕರು ಕೆಲಸಕ್ಕೆ ಹಾಜರಾಗುವ ಸಾಧ್ಯವಿದೆ. ಆದರೆ ಕಂಪನಿಯ ವಿರುದ್ಧ ದನಿ ಎತ್ತಿದ ಕಾರ್ಮಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ ಎಂದು ಆಂತರಿಕ ಯೂನಿಯನ್ ಅಧ್ಯಕ್ಷ ಅಭಿಷೇಕ ದೇಸಾಯಿ ಹೇಳಿದ್ದಾರೆ.[ಹುಬ್ಬಳ್ಳಿಯಲ್ಲಿ ದೇಶಭಕ್ತರಿಂದ ದೇಶಕ್ಕಾಗಿ ನಡಿಗೆ]
ಮಾರ್ಕೋಪೋಲೋ ಕಂಪೆನಿಯ ಕಾರ್ಮಿಕರ ಮತ್ತು ಆಡಳಿತ ಮಂಡಳಿಯ ವಾದ-ವಿವಾದ ಮುಂದುವರೆದರೆ ಕಂಪನಿಯು ಬಂದ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವುದಲ್ಲದೇ ದುಡಿಮೆಗಾಗಿ ಗುಳೆ ಹೋಗುವ ಸಾಧ್ಯತೆ ಇದೆ ಎಂಬ ಆತಂಕ ಕಾರ್ಮಿಕರಲ್ಲಿ ಮೂಡಿದೆ.
ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಅವರ ಮನ ಒಲಿಸಲು ಜನ್ರಪತಿನಿಧಿಗಳು ಮತ್ತು ಜಿಲ್ಲಾಧಿಕಾರಿಗಳು ಹಲವಾರು ಸುತ್ತಿನ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದರೂ ಯಾವುದೇ ಫಲಕಾರಿಯಾಗಿಲ್ಲ. ಕಂಪನಿಯೊಂದಿಗೆ ಕ್ರಾಂತಿಕಾರಿ ಯೂನಿಯನ್ ಐದು ಬಾರಿ ಸಂಧಾನಕ್ಕೆ ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.[ಕಾರ್ಮಿಕ ವರ್ಗಕ್ಕೆ ಬಂಪರ್, ಕನಿಷ್ಠ ವೇತನ ಏರಿಕೆ]
ಒಟ್ಟಿನಲ್ಲಿ ಶನಿವಾರ ನಡೆಯುವ ಸಂಧಾನ ಸಭೆಯು ಕಾರ್ಮಿಕರ ಮತ್ತು ಕಂಪನಿಯವರಲ್ಲಿ ಯಾರು ರಾಜಿಯಾಗುತ್ತಾರೋ ಕಾದು ನೋಡಬೇಕಾಗಿದೆ. ಕಂಪನಿಯು ರಾಜಿಯಾದರೆ ಸಾವಿರಾರು ಕಾರ್ಮಿಕರು ಕೆಲಸಕ್ಕೆ ಹಾಜರಾಗಿ ಅವರ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡಲಿವೆ. ಕಾರ್ಮಿಕರು ರಾಜಿಯಾಗದಿದ್ದರೆ ಮಾರ್ಕೋಪೋಲೋ ಕಂಪನಿ ಶಾಶ್ವತವಾಗಿ ಲಾಕೌಟ್ ಆಗಿ ನೂರಾರು ಕಾರ್ಮಿಕರು ಬೀದಿ ಪಾಲಾಗಿ ಕಾನೂನು ಪ್ರಕರಣಗಳನ್ನು ಎದುರಿಸಬೇಕಾಗುತ್ತದೆ.