ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ
ಧಾರವಾಡ, ಆಗಸ್ಟ್ 03 : ನವಲಗುಂದ ತಾಲೂಕಿನ ಯಮನೂರು ಗ್ರಾಮಸ್ಥರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಅವರು ಭೇಟಿ ಮಾಡಿ ಮಹಿಳೆಯರು ಮತ್ತು ವೃದ್ಧರ ನೋವು ಆಲಿಸಿದರು. ಈ ಸಮಯದಲ್ಲಿ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು.
ಮಹದಾಯಿ ತೀರ್ಪಿನ ವಿರುದ್ಧ ಯಮನೂರಿನಲ್ಲಿ ಪ್ರತಿಭಟನೆ ನಡೆಸಿದ್ದ ರೈತರು, ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಮಂಜುಳಾ ಮಾನಸ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಜನರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.[ಖಾಕಿ ದರ್ಪ, ಮಾನವೀಯತೆ ಮರೆತ ಪೊಲೀಸರು]
ಮಂಜುಳಾ ಅವರ ಜೊತೆ ತಹಶೀಲ್ದಾರ್ ಸಹ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, 'ನಿಮ್ಮ ಸುಳ್ಳು ಭರವಸೆಗಳು ಬೇಡ. ಬಂದವರೆಲ್ಲಾ ಭರವಸೆ ನೀಡು ವಾಪಸ್ ಹೋಗುತ್ತೀರಿ. ಬಂದು ನೋಡಿಕೊಂಡು ಹೋಗಲು ನಮ್ಮೂರಿನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.[ಯಮನೂರು ಲಾಠಿ ಚಾರ್ಜ್ 6 ಪೇದೆಗಳ ಅಮಾನತು]
ಗ್ರಾಮಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಮಂಜುಳಾ ಮಾನಸ ಅವರು, 'ಘಟನೆಯಲ್ಲಿ ನೊಂದವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ಪಡೆದುಕೊಂಡಿದ್ದೇನೆ. ಪ್ರಕರಣದ ನೈಜ ವರದಿಯನ್ನು ಎರಡು-ಮೂರು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತೇನೆ' ಎಂದು ಹೇಳಿದರು.....[ಯಮನೂರು ಸಂತ್ರಸ್ತರಿಗೆ ಶೆಟ್ಟರ್ ಸಾಂತ್ವನ]
'ತಹಶೀಲ್ದಾರ್ ನಮ್ಮ ಕಷ್ಟ ಕೇಳಲಿಲ್ಲ'
'ಘಟನೆ ನಡೆದು ನಾಲ್ಕೈದು ದಿನಗಳ ನಂತರ ನೀವು ಬಂದಿದ್ದೀರಿ. ಪ್ರತಿಭಟನೆ ನಡೆಸದಂತೆ ಆದೇಶ ಹೊರಡಿಸುವ ತಹಶೀಲ್ದಾರ್ ಅವರು ನಮ್ಮ ಮೇಲೆ ಲಾಠಿ ಪ್ರಹಾರವಾದಾಗ, ನಮ್ಮ ಕಷ್ಟ ಕೇಳಲು ಬರಲಿಲ್ಲ' ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
'ಏನು ಕ್ರಮ ಕೈಗೊಳ್ಳುತ್ತೀರಿ?'
'ಗ್ರಾಮಕ್ಕೆ ಬಂದವರಿಗೆ ಗಾಯಗಳನ್ನು ತೋರಿಸಿ ನಮಗೂ ಸಾಕಾಗಿ ಹೋಗಿದೆ. ರೈತರ ಮೇಲೆ ಲಾಠಿ ಬೀಸಿದ ಪೊಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೀರಿ?' ಎಂದು ಗ್ರಾಮಸ್ಥರು ಮಂಜುಳಾ ಮಾನಸ ಅವರನ್ನು ಪ್ರಶ್ನಿಸಿದರು.
'ಎಸ್ಪಿ ಸುಳ್ಳು ಹೇಳಿದ್ದಾರೆ'
'ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದರಿಂದ ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಎಸ್ಪಿ ಹೇಳಿದ್ದರು. ಗ್ರಾಮಕ್ಕೆ ಭೇಟಿ ನೀಡಿ, ಜನರ ಜೊತೆ ಮಾತುಕತೆ ನಡೆಸಿದ ಬಳಿಕ ಇದು ಸುಳ್ಳು ಎಂಬುದು ಸಾಬೀತಾಗಿದೆ. ಪ್ರಕರಣದ ನೈಜ ವರದಿಯನ್ನು ಎರಡು-ಮೂರು ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತೇನೆ' ಎಂದು ಮಂಜುಳಾ ಮಾನಸ ಹೇಳಿದರು.
ಜಗದೀಶ್ ಶೆಟ್ಟರ್ ಭೇಟಿ
ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದರು. 'ರೈತರ ಮೇಲೆ ನಡೆದ ಲಾಠಿ ಚಾರ್ಜ್ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು' ಎಂದು ಅವರು ಒತ್ತಾಯಿಸಿದರು.