ಮಾನವೀಯತೆಯ ಇದ್ದರೆ ಮಹಾದೇವಿಗೆ ಕೆಲಸ ಕೊಡಲಿ : ಜೋಶಿ
ಧಾರವಾಡ, ಫೆಬ್ರವರಿ 22 : ಹನುಮಂತಪ್ಪ ಕೊಪ್ಪದ ಹೆಂಡತಿ ಮಹಾದೇವಿಗೆ ಕೆಲಸ ಕೊಡಿಸುತ್ತೇನೆಂದು ಕೇಂದ್ರ ಎಂದೂ ಹೇಳಿಲ್ಲ. ಆದರೆ, ಮಾನವೀಯತೆಯ ಆಧಾರದ ಮೇಲೆ ರಾಜ್ಯ ಸರಕಾರವೇ ಮಹಾದೇವಿಗೆ ಉದ್ಯೋಗ ನೀಡಬೇಕು ಎಂದು ಧಾರವಾಡದ ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಿಯಾಚಿನ್ ಹಿಮಪಾತದಲ್ಲಿ ಸಾವಿಗೀಡಾದ ಯೋಧ ಹನುಮಂತಪ್ಪ ಕೊಪ್ಪದ ಅವರ ಹೆಂಡತಿಗೆ ಉದ್ಯೋಗ ನೀಡುವ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಅವರಿಗೆ ರಾಜ್ಯ ಸರಕಾರದಲ್ಲಿಯೇ ಕೆಲಸ ಸಿಗುವ ಹಾಗೆ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ ಎಂದರು.
ಈ ಕುರಿತು ಒನ್ಇಂಡಿಯಾ ಕನ್ನಡ ಸಂಪರ್ಕಿಸಿದಾಗ, "ಮಹಾದೇವಿಯವರ ಜೀವನ ಸುಖಮಯವಾಗಿರಲು ಕೇಂದ್ರ ಸರಕಾರದಿಂದ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡಲಾಗುತ್ತಿದೆ. ಕೇಂದ್ರ ಸರಕಾರದಿಂದ ಉದ್ಯೋಗ ನೀಡುವುದಾಗಿ ಅವರಿಗೆ ಭರವಸೆ ನೀಡಿರಲಿಲ್ಲ. ನೀಡಲು ಸಾಧ್ಯವೂ ಇಲ್ಲ. ರಾಜ್ಯ ಸರಕಾರವೇ ಉದ್ಯೋಗ ನೀಡುತ್ತೇನೆಂದು ಭರವಸೆ ನೀಡಿದೆ. ಮಾನವೀಯತೆಯ ಆಧಾರದ ಮೇಲೆ ರಾಜ್ಯ ಸರಕಾರವೇ ಕೆಲಸ ನೀಡಬೇಕು" ಎಂದರು. [ಭಿಕ್ಷೆ ಬೇಡುವುದನ್ನು ನನ್ನ ವೀರ ಗಂಡ ಕಲಿಸಿಲ್ಲ : ಮಹಾದೇವಿ]
ಈಗಾಗಲೆ ಅವರ ಮನೆಗೆ ಭೇಟಿ ನೀಡಿದ್ದೇನೆ. ಮತ್ತೆ ಭೇಟಿ ನೀಡುತ್ತೇನೆ. ಅವರಿಗೆ ರಾಜ್ಯ ಸರಕಾರದಿಂದ ಉದ್ಯೋಗ ದೊರಕಿಸಿಕೊಡಲು ಏನು ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ. ಸೈನ್ಯದಲ್ಲಿ ಇದ್ದಮೇಲೆ ಸಾವುನೋವುಗಳಾಗುವುದು ಸಹಜ. ಅದು ಮಹಾದೇವಿ ಕುಟುಂಬದಲ್ಲಿ ಆಗಿದ್ದು ದುರಾದೃಷ್ಟಕರ. ಅವರಿಗೆ ಉದ್ಯೋಗ ಕೊಡಿಸುವ ಬಗ್ಗೆ ರಾಜ್ಯ ಸರಕಾರದೊಡನೆಯೂ ಮಾತನಾಡುತ್ತೇನೆ ಎಂದು ಅವರು ತಿಳಿಸಿದರು.
ಈ ನಡುವೆ, ರಾಜ್ಯ ಸರಕಾರ ಮಹಾದೇವಿ ಅವರಿಗೆ ಮಹಾನಗರ ಪಾಲಿಕೆಯಲ್ಲಿ ಕೆಲಸ ಕೊಡಿಸುವ ಕುರಿತು ಅಧಿಕೃತ ಪತ್ರವೊಂದನ್ನು ಕಳುಹಿಸಿದೆ. ಇನ್ನೊಂದು ತಿಂಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಲಾಗಿದೆ. [ನೆಲ ಗುಡಿಸಿ ಒರೆಸುವುದಕ್ಕೂ ಸಿದ್ಧ : ಯೋಧ ಹನುಮಂತಪ್ಪನ ಹೆಂಡತಿ]