ಹುಬ್ಬಳ್ಳಿ: ಬಲೆಗೆ ಬಿದ್ದ ಐಪಿಎಲ್ ಬೆಟ್ಟಿಂಗ್ ಶೂರರು
ಹುಬ್ಬಳ್ಳಿ, ಏಪ್ರಿಲ್, 11 : ಹುಬ್ಬಳ್ಳಿಯ ಕ್ರಿಕೆಟ್ ಬೆಟ್ಟಿಂಗ್ ಕೋರರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರದಲ್ಲಿ ಶನಿವಾರ ದಾಳಿ ನಡೆಸಿದ ಅಶೋಕನಗರ ಠಾಣೆಯ ಪೊಲೀಸರು ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಬೇಧಿಸಿದ್ದಾರೆ.
ಸಂತೋಷ ನಗರ ಬಳಿಯ ಸಪ್ತಗಿರಿ ಲೇಔಟ್ ನ ವಿಠ್ಠಲ ಹಬೀಬ ಎಂಬಾತನ ಮನೆಯಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿತ್ತು. ಐಪಿಎಲ್ ಕ್ರಿಕೆಟ್ ಮ್ಯಾಚ್ ನಡೆಯುವ ಸಮಯದಲ್ಲಿ ಬೆಟ್ಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ರಾಘವೇಂದ್ರ ಭಾಂಡಗೆ, ಶ್ರೀನಿವಾಸ ಭಾಂಡಗೆ, ಪಾಂಡುರಂಗ ಭಾಂಡಗೆ, ಬಾಬು ಕಬಾಡೆ ಮತ್ತು ನಾಗರಾಜ ಬದ್ದಿ ಎಂಬುವರನ್ನು ಬಂಧಿಸಲಾಗಿದೆ.['ವಾಸಿಂ ಅಕ್ರಂ ಸ್ವಿಂಗ್ ಕಿಂಗ್ ಅಲ್ಲ, ಬೆಟ್ಟಿಂಗ್ ರಾಜ']
ಬಂಧಿತರಿಂದ 26,010 ರೂ. ನಗದು, ಎಲ್ಇಡಿ ಟಿವಿ, ಲ್ಯಾಪ್ ಟಾಪ್, ಲೈನರ್ ಮಶೀನ್ ಇರುವ ಎರಡು ಬಾಕ್ಸ್, 39 ಮೊಬೈಲ್ ಗಳು, ಎರಡು ಬೈಕ್ , ಕ್ಯಾಲಕುಲೇಟರ್, ನಾಲ್ಕು ಪೆನ್ ಸೇರಿದತೆ ಒಟ್ಟು 1.34 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಆರೋಪಿಗಳು ಏಕಕಾಲದಲ್ಲಿ 23 ಜನರೊಂದಿಗೆ ಬೆಟ್ಟಿಂಗ್ ವ್ಯವಹಾರ ನಡೆಸುತ್ತಿದ್ದರು ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ತಿಳಿಸಿದ್ದಾರೆ.