ಶರಣಾಗುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ತ್ತೀನಿ: ರವಿ ಬೆಳಗೆರೆ
ಧಾರವಾಡ, ಜೂನ್ 24: "ನಾನು ಕೈಕಟ್ಟಿ ನಿಲ್ಲವ ಪರಿಸ್ಥಿತಿಯೇ ಇಲ್ಲ. ಅಂಥ ಸ್ಥಿತಿ ಬಂದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ" ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದ್ದಾರೆ. ಕರ್ನಾಟಕ ವಿಧಾನಸಭೆಯಲ್ಲಿ ಅವರಿಗೆ ವಿಧಿಸಿದ ಜೈಲು ಶಿಕ್ಷೆ ಹಾಗೂ ದಂಡದ ಕುರಿತಂತೆ ಆವರು ವಿಡಿಯೋ ಒಂದರ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ರವಿ ಬೆಳಗೆರೆಗೆ ಎದೆನೋವು: ಧಾರವಾಡದಲ್ಲಿ ಆಸ್ಪತ್ರೆಗೆ ದಾಖಲು
ನನಗೆ 1 ವರ್ಷ ಜೈಲು, ₹ 10 ಸಾವಿರ ದಂಡ ಅಂತ ಈ ಸದನ ಸಮಿತಿ ತೀರ್ಪು ನೀಡಿದೆ. ಅದರ ವಿರುದ್ಧ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ವರೆಗೂ ಹೋಗಿ ನಾನು ಬಡಿದಾಡ್ತೀನಿ. ಈ ಸರಕಾರಕ್ಕೆ ಇನ್ನು ಒಂದು ವರ್ಷ ಇದೆ. ಇವರ ಜೀವನ ಮುಗೀತು ಇನ್ನು. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ ಎಂದು ಪ್ರಶ್ನಿಸಿದ್ದಾರೆ.
ಯಾವುದೇ ವಿಚಾರಕ್ಕೆ ನನ್ನನ್ನು ಯಾಕೆ ಜವಾಬ್ದಾರನನ್ನಾಗಿ ಮಾಡ್ತೀರಿ. ಇದು ಬಹಳ ದಮನಕಾರಿ ಆಕ್ರಮಣ. ನಾನು ಇದನ್ನು ವಿರೋಧಿಸುತ್ತೇನೆ. ಈ ವ್ಯವಸ್ಥೆಯನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ನಾನು ಕೈ ಕಾಲು ಇಲ್ಲದವನಲ್ಲ. ನಾನು ಕೋಳಿವಾಡರಂತೆ ದಡ್ಡ, ಮೂರ್ಖ ಅಲ್ಲ. ಅವರು ಬೇಕಾದ್ದು ಮಾಡಲಿ. ಹೋರಾಟ ಮಾಡದೆ ಕೈಕಟ್ಟಿಕೊಂಡು ನಿಂತು ಅವರಿಗೆ ಶರಣಾಗುವಂತಹ ಪರಿಸ್ಥಿತಿ ನನಗಿಲ್ಲ. ಅಂತಹ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ನಾಗರಾಜ್ ಅವರನ್ನು ನಾನು ನೋಡಿಲ್ಲ. ಶುಕ್ರವಾರ ಅವರು ಫೋನ್ಗೆ ಸಿಕ್ಕಿದ್ದರು. ಅವರದ್ದೇನೋ ಯಲಹಂಕದ ಮಠದ ಗಲಾಟೆ. ವಿಶ್ವನಾಥ್ ಅಂದ.. ನನಗೆ ವೈಯಕ್ತಿಕವಾಗಿ ಶತ್ರುಗಳು ಅಂತ ಇಲ್ಲ. ಸದನಕ್ಕೆ ಕಾಲಿಟ್ಟರೆ ಎಲ್ಲರೂ ಮಿತ್ರರೇ, ಹೊರಗೆ ಬಂದರೆ ಎಲ್ಲರೂ ಶತ್ರುಗಳೇ. ನನ್ನ ಪರಿಚಯದ, ನನ್ನ ಸ್ನೇಹದ, ಆತ್ಮೀಯವಾದ ಅಷ್ಟೂ ಜನ ರಾಜಕಾರಣಿಗಳು ಬಹಳ ಇದ್ದಾರೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದು, ಅವರು ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದಾರೆ.
ಇನ್ನು ಇದಕ್ಕೂ ಮುನ್ನ ಒಕ್ಕಣೆಯೊಂದನ್ನು ಫೇಸ್ ಬುಕ್ ನಲ್ಲಿ ಬೆಳಗೆರೆ ಹಾಕಿದ್ದಾರೆ. ರಾಜಕಾರಣಿಗಳ ವಿರುದ್ಧ ಬರೆದರೆ ನೀವು ಜೈಲಲ್ಲಿ ಇರ್ತೀರಾ ಎಂಬ ಸಂದೇಶ ನಮಗೆ ಈಗ ಸಿಕ್ಕಿದೆ. ನೀವು ಕಾಮೆಂಟ್ ಮಾಡಬೇಡಿ ಎಂಬ ನಿಯಮ ಮಾಡಿದರೆ ನೀವು ಏನು ಮಾಡ್ತೀರಿ? ನನಗಿಗಲೂ ನಂಬಿಕೆ ಇದೆ. ಭಾರತದಲ್ಲಿ ಪ್ರಜಾಪ್ರಭುತ್ವ ಜೀವಂತ ಇದೆ ಎಂದು ನಂಬ್ತೀನಿ ಎಂದಿದ್ದಾರೆ.
ನಾನು ಈ ತೀರ್ಪಿನಿಂದ ವಿಚಲಿತನಾಗಿಲ್ಲ. ಈ ಹೋರಾಟದಲ್ಲಿ ಶೇ ನೂರರಷ್ಟು ಗೆದ್ದೇಗೆಲ್ತೀನಿ ಎಂಬ ನಂಬಿಕೆ ಇದೆ. ನೀವು ನನ್ನೊಂದಿಗೆ ಇದ್ದೀರಿ. ಈ ಯುದ್ಧದಲ್ಲಿ ಜತೆಗೆ ಸೇರಿ. ಅವರಿಗೊಂದು ಪಾಠ ಕಲಿಸೋಣ ಎಂದು ಪೋಸ್ಟ್ ಮಾಡಿದ್ದಾರೆ ರವಿ ಬೆಳಗೆರೆ.