ನೈಋತ್ಯ ರೈಲ್ವೆ ವಲಯಕ್ಕೆ ಜ.22ರೊಳಗೆ ಸಲಹೆ ನೀಡಿ
ಹುಬ್ಬಳ್ಳಿ, ಜನವರಿ,20: ರೈಲ್ವೆ ಬಜೆಟ್ ಶೀಘ್ರದಲ್ಲಿ ಮಂಡನೆಯಾಗಲಿದ್ದು ರೈಲು ಬಳಕೆದಾರರು ಸುರಕ್ಷತೆ ಮತ್ತು ಸೌಲಭ್ಯಗಳ ಕುರಿತು ಜನವರಿ 22ರ ಶುಕ್ರವಾರದೊಳಗೆ ಸಲಹೆ-ಸೂಚನೆ ನೀಡಬಹುದು ಎಂದು ನೈಋತ್ಯ ರೈಲ್ವೆ ಉಪ ಮಹಾಪ್ರಬಂಧಕ ಘನಶ್ಯಾಮ್ ವರ್ಮಾ ಮನವಿ ಮಾಡಿದ್ದಾರೆ.
ನೈಋತ್ಯ ರೈಲ್ವೆ ವಲಯ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ಭದ್ರತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೊಸ ರೈಲು ಮತ್ತು ರೈಲ್ವೆ ಸೇವೆ ಮತ್ತು ಸೌಲಭ್ಯಗಳಿಗೆ ರೈಲು ಬಳಕೆದಾರರು ಸಲಹೆ ನೀಡಬಹುದು ಎಂದಿದ್ದಾರೆ.[ಜನ್ ಆಹಾರ ಕೆಫೆ: ರೈಲು ನಿಲ್ದಾಣಗಳಲ್ಲಿ 20ರುಗೆ ಊಟ]
ರೈಲು ಬಳಕೆದಾರರು ಸ್ವಚ್ಛತೆ ಸಮಸ್ಯೆ ಕಂಡು ಬಂದಲ್ಲಿ ಆನ್ ಲೈನ್ ಮೂಲಕ ದೂರು ನೀಡಬಹುದು. 'ಕ್ಲೀನ್ ಮೈಕೋಚ್ ಡಾಟ್ ಕಾಮ್' (cleanmycoach.com) ನಲ್ಲಿ ತಮ್ಮ ಪಿಎನ್ ಆರ್ ಸಂಖ್ಯೆ ನಮೂದಿಸಿದರೆ ಸಾಕು. ರೈಲು ಸಿಬ್ಬಂದಿ ತಾವಿದ್ದ ಕೋಚ್ ಗೆ ಆಗಮಿಸಿ ರೈಲನ್ನು ಸ್ವಚ್ಛಗೊಳಿಸಲಿದ್ದಾರೆ ಎಂದರು.[ಭಾರತದಲ್ಲಿ ಬುಲೆಟ್ ಟ್ರೇನ್, ಯಾಕೆ? ಏತಕ್ಕೆ?]
ಆನ್ ಲೈನ್ ನಲ್ಲಿ ಅನುಕೂಲವಿಲ್ಲದಿದ್ದರೆ ಕ್ಲೀನ್ (clean) ಎಂದು ಟೈಪ್ ಮಾಡಿ ಪಿಎನ್ ಆರ್ ಸಂಖ್ಯೆ ನಮೂದಿಸಿ 58888 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ದೂರು ದಾಖಲಿಸಬಹುದು. ಅಲ್ಲದೇ ರೈಲಿನ ಭದ್ರತೆ ವಿಷಯಕ್ಕೆ ಸಂಬಂಧಪಟ್ಟಂತೆ 138 ಗೆ ಕರೆ ಮಾಡಿ ರೈಲ್ವೆ ಸುರಕ್ಷಾ ಪಡೆ (ಆರ್ ಪಿ ಎಫ್) ಯ ಸೇವೆ ಪಡೆದುಕೊಳ್ಳಬಹುದು. ರೈಲು ಬಳಕೆದಾರರ ದೂರಿಗಾಗಿ ಕಾಲ್ ಸೆಂಟರ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.