ಅವ್ಯವಸ್ಥೆಯ ಗೂಡು ಹುಬ್ಬಳ್ಳಿ ರೈಲು ನಿಲ್ದಾಣ
ಹುಬ್ಬಳ್ಳಿ, ಫೆಬ್ರವರಿ, 09: ಕಟ್ಟಡ ಕುಸಿತ ಘಟನೆಯಿಂದ ಹಲವಾರು ಮಂದಿಯನ್ನು ಬಲಿತೆಗೆದುಕೊಂಡ, ಮನೆಯ ಶಾಂತಿ ಕದಡಿದ, ಇಡೀ ಜಿಲ್ಲೆಯಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದ ಹುಬ್ಬಳ್ಳಿಯ ರೈಲು ನಿಲ್ದಾಣ ಈ ಮೊದಲೇ ಸಾಕಷ್ಟು ಅವಘಡಗಳನ್ನು ಕಂಡಿತ್ತು.
ಇತ್ತೀಚೆಗೆ ನಗರದ ಹೊರವಲಯದ ಉಣಕಲ್ ರೈಲು ನಿಲ್ದಾಣದ ಬಳಿ ರೈಲೊಂದು ಹಳಿ ತಪ್ಪಿ ಐದು ಬೋಗಿಗಳು ಹಳಿ ಬಿಟ್ಟು ಉರುಳಿದ್ದವು. ಆದರೆ ಅದೃಷ್ಟವಶಾತ್ ಕೆಲವರಿಗೆ ಗಾಯಗಳಾದವೇ ಹೊರತು ಯಾವ ಪ್ರಾಣಹಾನಿಯೂ ಸಂಭವಿಸಲಿಲ್ಲ.
ಇಲ್ಲಿಯ ರೈಲ್ವೆ ವರ್ಕ್ ಶಾಪಿನಲ್ಲಿ ಪದೇ ಪದೇ ಬೆಂಕಿ ಅನಾಹುತಗಳು ಸಂಭವಿಸುತ್ತಲೇ ಇರುತ್ತವೆ. ಘಟನೆ ನಡೆದ ನಂತರ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಳ್ಳುತ್ತೇವೆಂದು ಹೇಳುತ್ತಾರೆಯೇ ಹೊರತು ಘಟನೆಯ ವರದಿ ಯಾರ ಕೈಸೇರಿತು, ಯಾರಿಗೆ ಶಿಕ್ಷೆಯಾಯಿತು, ಆದ ನಷ್ಟವನ್ನು ತುಂಬಿದರು ಯಾರು ಎಂಬ ಮಾಹಿತಿ ಲಭ್ಯವಾಗುವುದೇ ಇಲ್ಲ.[ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಆಗಿದ್ದೇನು?]
ಬೇರೊಂದು ಊರಿಗೆ ಪಾರ್ಸೆಲ್ ಕಳುಹಿಸುವುದು, ಟಿಕೆಟ್ ಕೊಳ್ಳುವುದು, ಸರಿಯಾದ ಮಾರ್ಗಸೂಚಿ ಇಲ್ಲದಿರುವುದು, ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಹೀಗೆ ಹುಬ್ಬಳ್ಳಿ ರೈಲ್ವೆ ವ್ಯವಸ್ಥೆಯು ಸಮಸ್ಯೆಯ ಗೂಡಾಗಿದೆ..ಏನಿದೆ ಇನ್ನಿತರ ಸಮಸ್ಯೆ ಇಲ್ಲಿದೆ ನೋಡಿ.
ರೈಲ್ವೆ ಸ್ಟೇಶನ್ ಹಮಾಲರು ಮಾಡುವುದೇನು?
ವಸ್ತುಗಳನ್ನು ಪ್ಯಾಕ್ ಮಾಡಲು ಹೆಚ್ಚು ಹಣ ಕೊಟ್ಟವರಿಗೆ ಒಂದು ರೀತಿ, ಕಡಿಮೆ ಹಣ ಕೊಟ್ಟವರಿಗೆ ಒಂದು ರೀತಿ ಮಾಡುತ್ತಾರೆ. ಕಡಿಮೆ ಹಣ ನೀಡಿದರೆ ಅಲ್ಲಿರುವ ಹಮಾಲರೇ ವಸ್ತುಗಳನ್ನು ವಿರೂಪಗೊಳಿಸುತ್ತಾರೆ. ಹಣ ಕೊಡದೇ ಪಾರ್ಸಲ್ ದಾರರೇ ಪ್ಯಾಕ್ ಮಾಡಿದರೆ ಮುಗೀತು ಕಥೆ. ಅದು ಬೇರೆ ಊರು ತಲುಪುವಷ್ಟರಲ್ಲಿ ಇದು ನಮ್ಮ ವಸ್ತುವೇ ಎಂಬ ಅನುಮಾನ ಮೂಡಿರುತ್ತದೆ. ಇದನ್ನು ಕೇಳಲು ಹೋದರೆ ನಿಮಗೆ ಮೊದಲೇ ಹೇಳಿದ್ದೆವು, ಹಮಾಲರು ಉತ್ತಮ ರೀತಿಯಲ್ಲಿ ಪ್ಯಾಕ್ ಮಾಡುತ್ತಾರೆ ಎಂದು. ಆದರೆ ನೀವೇ ಪ್ಯಾಕ್ ಮಾಡಿದ್ದೀರಿ ನಾವೇನೂ ಮಾಡೋಕೆ ಆಗಲ್ಲ ಎಂದು ದಬಾಯಿಸಿ ಕಳುಹಿಸುತ್ತಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ ಅವರೂ ಹಮಾಲರ ಪರ ನಿಲ್ಲುತ್ತಾರೆ.
ಲಗೇಜ್ ಹೊತ್ತುಕೊಂಡು ಹೋಗೋಕೆ ಕಷ್ಟ
ರೈಲ್ವೆ ಪೊಲೀಸ್ ಸಿಬ್ಬಂದಿಯು ರೈಲ್ವೆ ನಿಲ್ದಾಣದ ಮುಂಬಾಗಿಲ ಬಳಿ ಹೋಗಲು ಯಾವುದೇ ವಾಹನ ಚಲಿಸುವಂತಿಲ್ಲ. ರೈಲ್ವೆ ನಿಲ್ದಾಣದ ಮುಂದಿನ ವಿಶಾಲ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿ ಲಗೇಜ್ ಹೊತ್ತುಕೊಂಡು ರೈಲ್ವೆ ಟಿಕೆಟ್ ತೆಗೆದುಕೊಳ್ಳಲು ಓಡುತ್ತಾ ಸಾಗಬೇಕು.ವಯಸ್ಸಾದವರು, ಅಂಗವಿಕಲರು, ಮಕ್ಕಳು, ಗರ್ಭಿಣಿಯರು ದೂರದಿಂದ ತಮ್ಮ ಲಗೇಜ್ ಹೊತ್ತುಕೊಂಡು ಕಷ್ಟಪಟ್ಟು ಸಾಗುತ್ತಾರೆ.
ರೈಲ್ವೆ ಟಿಕೆಟ್ ಕೊಡುವ ಸಿಬ್ಬಂದಿಯಿಂದ ತೊಂದರೆ
ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ನೀಡುವ ಸಿಬ್ಬಂದಿಗೆ ಸರಿಯಾಗಿ ಚಿಲ್ಲರೆ ಕೊಟ್ಟರೆ ಮಾತ್ರ ಟಿಕೆಟ್ ಕೊಡುತ್ತಾರೆ. ಇಲ್ಲವಾದರೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಕೊಡಿ ನನ್ನ ಹತ್ತಿರ ಚಿಲ್ಲರೆ ಇಲ್ಲ ಎಂದು ಪರಿಪರಿಯಾಗಿ ಬೇಡಿಕೊಳ್ಳಲು ಆರಂಭಿಸಿದರೆ, ಟಿಕೆಟ್ ಕೊಡುವ ಸಿಬ್ಬಂದಿ ತೆಲುಗು ಮಾತನಾಡಲು ಆರಂಭಿಸಿ ತೆಲುಗುವಿನಲ್ಲಿ ಬೈಯ್ಯಲಾರಂಭಿಸುತ್ತಾರೆ. ಇದರಿಂದ ಭಾಷೆ ಬರದ ಕೆಲವರು ಪೆಚ್ಚು ಮೋರೆ ಹಾಕಿಕೊಂಡು ರೈಲು ತಪ್ಪಿಸಿಕೊಂಡು ಮರಳಿ ಹೋಗುತ್ತಾರೆ.
ರೈಲ್ವೆ ಟಿಕೆಟ್ ಪಡೆಯಲು ದೂರ ಸಾಗಬೇಕು
ರೈಲ್ವೆ ನಿಲ್ದಾಣದ ಹತ್ತಿರದ ರಸ್ತೆಯಲ್ಲಿ ಖಾಸಗಿಯವರಿಂದ ಟಿಕೆಟ್ ನೀಡಲು ಕೌಂಟರ್ ಒಂದನ್ನು ತೆಗೆಯಲಾಗಿತ್ತು. ಅದನ್ನು ಮೂರು ತಿಂಗಳ ಹಿಂದೆ ಮುಚ್ಚಲಾಗಿದೆ. ಈಗ ರೈಲು ನಿಲ್ದಾಣಕ್ಕೆ ಏದುಸಿರು ಬಿಡುತ್ತಾ ಕನಿಷ್ಠ 500 ಮೀಟರ್ ಹೋಗಬೇಕು. ಮೊದಲು ನಗರ ಸಾರಿಗೆ ಬಸ್ಸುಗಳು ನಿಲ್ದಾಣದ ಮುಂಬಾಗಿಲ ಬಳಿಯವರೆಗೂ ಬರುತ್ತಿದ್ದವು. ಈಗ ಅದನ್ನು ನಿರ್ಬಂದಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕೆ ಇರಬೇಕಾದ ರೈಲು ನಿಲ್ದಾಣ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಟಿಕೆಟ್ ಕೌಂಟರ್ ವ್ಯವಸ್ಥೆ ಸರಿಯಾಗಿಲ್ಲ
ಗದಗ ರಸ್ತೆಯಲ್ಲಿ ಇನ್ನೊಂದು ಗೇಟ್ ಬಳಿ ಕೆಲವೊಂದು ತಾಂತ್ರಿಕ ವಿಭಾಗದ ಕಚೇರಿಗಳಿವೆ. ಈ ಸ್ಥಳದಲ್ಲಿ ಒಂದು ಟಿಕೆಟ್ ಕೌಂಟರ್ ತೆರೆಯುವಂತೆ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರೂ ಅಧಿಕಾರಿಗಳು ಒಪ್ಪುತ್ತಿಲ್ಲ. ಹುಬ್ಬಳ್ಳಿ ಮಹಾನಗರದಿಂದ ದೇಶದೆಲ್ಲೆಡೆ ಸಂಪರ್ಕಿಸಲು ರೈಲುಗಳಿದ್ದರೂ ಬೇರೆಡೆ ಎಲ್ಲಿಯೂ ಟಿಕೆಟ್ ಕೌಂಟರ್ ಗಳಿಲ್ಲ. ಬಡವರಿಗೆ, ವಯಸ್ಸಾದವರಿಗೆ ಸಾಮಾನ್ಯ ದರ್ಜೆಯ ಟಿಕೆಟ್ ಸಾಕಾಗಿರುತ್ತದೆ. ಹೀಗಾಗಿ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣ, ನವನಗರ, ವಿದ್ಯಾನಗರ, ಬಂಕಾಪುರ ಚೌಕ್ ಬಳಿ ಟಿಕೆಟ್ ಕೌಂಟರ್ ತೆರೆಯಲು ನಾಗರಿಕರ ಆಗ್ರಹವಿದೆ.
ಅಂಡರಪಾಸ್ ನಲ್ಲಿ ಮಾರ್ಗಸೂಚಿಗಳಿಲ್ಲ
ರೈಲು ನಿಲ್ದಾಣ ಬಳಿ ಅಂಡರಪಾಸ್ ನಿರ್ಮಿಸಲಾಗಿದೆ. ಅಲ್ಲಿ ಯಾವ ರೈಲು ಯಾವ ಪ್ಲಾಟ್ ಫಾರಂನಿಂದ ಹೊರಡುತ್ತದೆ ಎಂಬ ಮಾಹಿತಿಯ ಬೋರ್ಡ್ ಕಾಣುವುದಿಲ್ಲ. ರೈಲು ಹತ್ತಬೇಕೆನ್ನುವರು ಒಂದು ಪ್ಲಾಟ್ ಫಾರ್ಮ ಹೋಗಿ ಅಲ್ಲಿಂದ ತಮ್ಮ ರೈಲು ಯಾವ ಪ್ಲಾಟ್ ಫಾರ್ಮ ನಲ್ಲಿದೆ ಎಂದು ತಿಳಿದು ಮತ್ತೆ ಆ ಪ್ಲಾಟ್ ಫಾರ್ಮಗೆ ಓಡಬೇಕು.
ಆಹಾರ ಮತ್ತು ಆಟೋ ಚಾಲಕರ ಸಮಸ್ಯೆ
ರೈಲು ನಿಲ್ದಾಣದಲ್ಲಿ ಕೆಲವರು ಮಾರುವುದು ಹಳಸಿದ ಆಹಾರ. ಅಲ್ಲದೇ ಆಟೋ ಚಾಲಕರು ಮತ್ತು ಹಮಾಲರ ಆಟೋಟೋಪ ಮಿತಿಮೀರಿದ್ದು, ಮನಬಂದಂತೆ ಹಣ ಕೇಳುತ್ತಾರೆ.
ಮುಂದಿನ ಪರಿಸ್ಥಿತಿ ಚಿಂತಾಜನಕ
ಹೊಸ ಕಟ್ಟಡಕ್ಕೆ ರೈಲು ನಿಲ್ದಾಣ ಸ್ಥಳಾಂತಗೊಂಡಿದ್ದರೂ, ಟಿಕೆಟ್ ಕಾಯ್ದಿರುಸುವಿಕೆಯ ಕೌಂಟರ್ ಇನ್ನೂ ಹಳೆಯ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಸೋಮವಾರ ದುರಂತ ನಡೆದ ಕಟ್ಟಡದ ಪಕ್ಕದಲ್ಲಿಯೇ ಇದು ಕಾರ್ಯನಿರ್ವಹಿಸುತ್ತಿದ್ದು, ಈಗಲೂ ಜನರು ರಿಜರ್ವೇಶನ್ ಗಾಗಿ ಕ್ಯೂ ನಿಲ್ಲುತ್ತಿದ್ದಾರೆ. ಅದೂ ಕೂಡ ಹಳೆಯದಾಗಿದ್ದು ಅದು ಇನ್ನೆಷ್ಟು ಬಲಿ ತೆಗೆದುಕೊಳ್ಳುತ್ತದೆಯೋ ಆ ದೇವರೇ ಬಲ್ಲ