ಪೊಲೀಸಪ್ಪನ ಹುಚ್ಚಾಟ, ರೊಚ್ಚಿಗೆದ್ದ ಹುಬ್ಬಳ್ಳಿಗರು
ಹುಬ್ಬಳ್ಳಿ, ಡಿಸೆಂಬರ್, 08 : ಹೆಲ್ಮೆಟ್ ಧರಿಸದೇ ಬೈಕ್ ಓಡಿಸುತ್ತಿದ್ದ ಯುವಕನನ್ನು ಪೊಲೀಸ್ ಪೇದೆ ಬಂಧಿಸಲು ಹೋದಾಗ ಯುವಕ ಬೈಕ್ ನಿಂದ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪರಿಣಾಮ ಸಾರ್ವಜನಿಕರು ರೊಚ್ಚಿಗೆದ್ದು ಪೊಲೀಸರ ಬೈಕ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ರಾತ್ರಿ ನಗರದ ದುರ್ಗದಬೈಲ್ ನಲ್ಲಿ ಹೆಲ್ಮೆಟ್ ಹಾಕಿಕೊಳ್ಳದೆ ಬೈಕ್ ಓಡಿಸಿಕೊಂಡ ಬಂದ ಫಕ್ಕೀರಯ್ಯ ಹಿರೇಮಠ ಎಂಬಾತನೇ ಗಂಭೀರವಾಗಿ ಗಾಯಗೊಂಡ ಯುವಕ. ಮಹಾನಗರದಲ್ಲಿ ಹೆಲ್ಮೆಟ್ ಧರಿಸದ ಸವಾರರನ್ನು ಹಿಡಿಯಲು ಪೊಲೀಸರು ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.[ಚಾಲಕರೇ,ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ]
ಡಿಸೆಂಬರ್ 1 ರಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿ ಪೊಲೀಸ್ ಕಮೀಷನರ್ ಪಾಂಡುರಂಗ ರಾಣೆ ಆದೇಶ ನೀಡಿದ್ದರು. ಈ ಹಿನ್ನಲೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ನಲ್ಲಿ ಬಂದ ಫಕ್ಕೀರಯ್ಯನನ್ನು ತಡೆಯಲು ಬಂದ ಘಂಟಿಕೇರಿ ಠಾಣೆಯ ಪೊಲೀಸ್ ಅವನ ಕೊರಳಪಟ್ಟಿ ಹಿಡಿದು ಜಗ್ಗಿದ್ದಾನೆ. ಆಗ ಬೈಕ್ ಸವಾರ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.[ತುಮಕೂರು ತಲೆಗಳಿಗೆ ಶಿರಸ್ತ್ರಾಣ ಕಡ್ಡಾಯ]
ಮಹಾನಗರದ ಟ್ರಾಫಿಕ್ ಸಮಸ್ಯೆ ನಿವಾರಿಸುವುದರ ಹೊಣೆ ಹೊತ್ತ ಪೊಲೀಸರು ಈ ರೀತಿ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಅಲ್ಲದೇ ಪೊಲೀಸ್ ಪೇದೆಯ ಬೈಕ್ ಗೆ ನಡು ರಸ್ತೆಯಲ್ಲೇ ಬೆಂಕಿ ಹಚ್ಚಿದ್ದಾರೆ. ಇದೀಗ ಘಟನೆ ನಡೆದ ಸ್ಥಳದಲ್ಲಿ ಗಂಭೀರ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.