'ಹಿಂದೂ ಸಮಾಜಕ್ಕೆ ಮೌಢ್ಯನಿಷೇಧ ಕಾಯ್ದೆ ಮಾರಕ'
ಹುಬ್ಬಳ್ಳಿ,ಜುಲೈ, 09: ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಮೂಢನಂಬಿಕೆ ನಿಷೇಧ ಕಾಯ್ದೆಯನ್ನು ಜಾರಿ ಮಾಡಬಾರದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.
ಕಾಯ್ದೆ ಜಾರಿ ವಿರೋಧಿಸಿ ಹಿಂದೂ ಜನ ಜಾಗೃತಿ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುತಾಲಿಕ್ ಮಾತನಾಡಿದರು. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮೂಢನಂಬಿಕೆ ನಿರ್ಮೂಲನೆಗೊಳಿಸುವ ಕಾರಣವಿಟ್ಟುಕೊಂಡು ಹಿಂದೂ ವಿರೋಧಿ ಕೃತ್ಯ ಮಾಡುತ್ತಿದೆ. ಈ ಕಾನೂನನ್ನು ಬೆಂಬಲಿಸುವವರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.[ಗೋವಾ ಪ್ರವೇಶ ಮಾಡಿಯೇ ತೀರುತ್ತೇನೆ: ಮುತಾಲಿಕ್]
ಕಾಂಗ್ರೆಸ್ ಸರಕಾರ ವೋಟ್ ಬ್ಯಾಂಕ್ ರಾಜಕಾರಣವನ್ನಿಟ್ಟುಕೊಂಡು ಹಿಂದೂ ಸಮುದಾಯದವರ ಪದ್ಧತಿಗಳಿಗೆ ತೀಲಾಂಜಲಿ ಇಡುತ್ತಿದೆ. ಈ ಕಾಯಿದೆ ಜಾರಿಗೆ ತರುವ ಮುನ್ನ ಹಿಂದೂ ಸಮಾಜದ ಮಠ, ಮಾನ್ಯರಲ್ಲಿ ಮತ್ತು ಅಧ್ಯಾತ್ಮಿಕ, ಧಾರ್ಮಿಕ ಮುಖಂಡರ ಸಲಹೆ ಮತ್ತು ಸೂಚನೆಗಳನ್ನು ಯಾರೂ ಕೇಳಿಲ್ಲ. ಹಿಂದೂ ವಿರೋಧಿಗಳೇ ಈ ಕಾಯಿದೆ ಜಾರಿಗೆ ತರುವ ಕರಡು ತಯಾರಿಸಿದ್ದಾರೆ ಎಂದು ಆರೋಪಿಸಿದರು.[ವೈರಲ್ ವಿಡಿಯೋ: ವಿವಾದದ ಸುಳಿಯಲ್ಲಿ ಯಡಿಯೂರಪ್ಪ]
ಈ ಕಾಯಿದೆ ಜಾರಿಗೆ ಬಂದರೆ ಇಡೀ ದೇಶಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ಮುತಾಲಿಕ್ ಕೂಡಲೇ ಈ ಕಾನೂನು ಜಾರಿಗೆ ತರುವುದನ್ನು ನಿಲ್ಲಿಸಬೇಕು ಎಂದರು.
ಸುಧಾ ಆವಾರಿ, ವಿಧುಲಾ ಹಳದೀಪುರ, ಮನೋಜ ಹಾನಗಲ್, ದಯಾನಂದ ರಾವ್ ಮತ್ತಿತರರು ಉಪಸ್ಥಿತರಿದ್ದರು. ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು