ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?
ಹುಬ್ಬಳ್ಳಿ, ಮೇ, 02: ಹುಬ್ಬಳ್ಳಿ-ಧಾರವಾಡ ಅವಳಿ ನಗರ ನಿವಾಸಿಗಳಿಗೆ ಕಳೆದ ಕೆಲ ದಿನಗಳಿಂದ ಏನೋ ಕಳೆದುಕೊಂಡ ಅನುಭವ. ಬೆಂಗಳೂರು ಮೂಲದ ಸಂಸ್ಥೆ ನೀಡುತ್ತಿದ್ದ ಸೌಲಭ್ಯ ಇದ್ದಕ್ಕಿದಂತೆ ಬಂದ್ ಆಗಿದೆ.
ನಿವಾಸಿಗಳಿಗೆ ನೀರು ಸರಬರಾಜು ಸಮಯದ ಮಾಹಿತಿ ನೀಡುತ್ತಿದ್ದ ಸೇವೆ ಇದ್ದಕ್ಕಿದಂತೆ ಬಂದ್ ಆಗಿದೆ. ಬೆಂಗಳೂರಿನ ಸಂಸ್ಥೆ ಮಾಹಿತಿಯನ್ನು ಮೊದಲೇ ಮೊಬೈಲ್ ಸಂದೇಶದ ಮೂಲಕ ಕಳಿಸುತ್ತಿತ್ತು. ಆದರೆ ಅದೀಗ ಬಂದ್ ಆಗಿದೆ.[ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!]
ನೆಕ್ಸ್ಟಡ್ರಾಪ್ ಎಂಬ ಸಂಸ್ಥೆಯೊಂದು ಸಾರ್ವಜನಿಕರಿಗೆ ಉಚಿತವಾಗಿ ನೀರು ಬರುವ ಸಮಯವನ್ನು ಎಸ್ಸೆಮ್ಮೆಸ್ ಮೂಲಕ ಸಮಯದೊಂದಿಗೆ ಮಾಹಿತಿ ನೀಡುತ್ತಿತ್ತು. ಇದರಿಂದ ಸಾರ್ವಜನಿಕರು ಎಲ್ಲಿಯೇ ಇದ್ದರೂ ಮೆಸೆಜ್ ಬಂದ ಕೂಡಲೇ ಮನೆಯವರಿಗೆ ನೀರು ಬರುವ ಸಮಯವನ್ನು ಹೇಳುತ್ತಿದ್ದರು. ಅದಕ್ಕೆ ಅವರೆಲ್ಲರೂ ಸಿದ್ಧರಾಗಿ ನಿಲ್ಲುತ್ತಿದ್ದರು. ಅಥವಾ ಒಬ್ಬರೇ ಇದ್ದವರು ಕೂಡಲೇ ಮನೆಗೆ ಬಂದು ಕುಡಿಯುವ ನೀರು ತುಂಬಿಸಿಕೊಂಡು ಮತ್ತೇ ತಮ್ಮ ಕೆಲಸಕ್ಕೆ ಮರಳುತ್ತಿದ್ದರು. ಇದರಿಂದ ಸಮಯದ ಉಳಿತಾಯವೂ ಆಗುತ್ತಿತ್ತು. ಜೊತೆಗೆ ನೀರಿನ ಸಮಸ್ಯೆಯೂ ಕಾಣಬರುತ್ತಿರಲಿಲ್ಲ.
ಆದರೆ, ಕಳೆದ ಒಂದೂವರೆ ತಿಂಗಳಿಂದ ನೆಕ್ಸ್ಟ್ ಡ್ರಾಪ್ ಸಂಸ್ಥೆಯು ಎಸ್ಸೆಮ್ಸೆಸ್ ಮೂಲಕ ಮಾಹಿತಿ ನೀಡುವುದನ್ನು ನಿಲ್ಲಿಸಿದೆ. ಇದಕ್ಕೆ ಕಾರಣ ಸಂಸ್ಥೆಯು ಜಲಮಂಡಳಿಯ ಅಧಿಕಾರಿಗಳ ಮಾಹಿತಿ ನೀಡಿದಂತೆಯೇ ನೀರು ಬಿಡುವ ಸಮಯವನ್ನು ಎಸ್ಸೆಮ್ಸೆಸ್ ಮೂಲಕ ಕಳಿಸುತ್ತಿತ್ತು. ಆದರೆ ಜಲಮಂಡಳಿಯು ನೀಡಿದ ಮಾಹಿತಿಯ ಸರಿಯಾಗಿರುತ್ತಿರಲಿಲ್ಲ.
ಬೆಳಗಿನ 8 ಗಂಟೆಗೆ ನೀರು ಬರುತ್ತದೆ ಎಂದು ನೆಕ್ಸ್ಟಡ್ರಾಪ್ ಸಂಸ್ಥೆಯು ಎಸ್ಸೆಮ್ಮೆಸ್ ಕಳಿಸಿದ್ದರೆ ಇತ್ತ ರಾತ್ರಿ 8 ಗಂಟೆಯಾದರೂ ನೀರು ಬರುತ್ತಿರಲಿಲ್ಲ. ಇದರಿಂದ ಸಾರ್ವಜನಿಕರು ಆಕ್ರೋಶಗೊಂಡು ನೆಕ್ಸ್ಟಡ್ರಾಪ್ ಸಂಸ್ಥೆಯವರ ಮೇಲೆಯೇ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಗೂಬೆ ಕೂರಿಸಲಾರಂಭಿಸಿದರು.[ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!]
ಈ ಬಗ್ಗೆ ಜಲಮಂಡಳಿಯವರನ್ನು ಕೇಳಿದರೆ ನಾವು ಈಗ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಪತ್ರಿಕೆಗಳಲ್ಲಿ ನೀರು ಬರುವ ಬಡಾವಣೆಗಳ ಹೆಸರು ಇರುತ್ತದೆ ಹೊರತು ನೀರು ಬರುವ ಸಮಯ ಇರುವುದಿಲ್ಲ. ಇದರಿಂದ ಸಾರ್ವಜನಿಕರು ನೀರು ಬರುವ ಸಮಯವನ್ನು ಬಕಪಕ್ಷಿಯಂತೆ ಕಾಯುತ್ತಿರಬೇಕಾಗುತ್ತದೆ. ಇನ್ನು ಕೆಲವರು ನೀರು ಬಂದಿರುವುದನ್ನು ಯಾರಿಗೂ ಹೇಳುವುದಿಲ್ಲ. ಏಕೆಂದರೆ ಎಲ್ಲರೂ ನಳವನ್ನು ಚಾಲು ಮಾಡಿದರೆ ನಮಗೆಲ್ಲಿ ನೀರು ಕಡಿಮೆಯಾಗುತ್ತದೆಯೋ ಎಂಬ ದುರ್ಬುದ್ಧಿ ಬೇರೆ ಇರಬಹುದೇನೋ.
ಎಲ್ಲವನ್ನೂ ಜಲಮಂಡಳಿಯೇ ನೋಡಿಕೊಳ್ಳುತ್ತದೆ. ನಮ್ಮದು ಯಾವುದೇ ಪಾತ್ರವಿಲ್ಲ ಎಂದು ಹುಬ್ಬಳ್ಳಿ-ಧಾರವಾಡ ಕಮೀಷನರ್ ನೂರ ಮನ್ಸೂರ ಹೇಳುತ್ತಾರೆ. ಒಟ್ಟಿನಲ್ಲಿ ಬರಗಾಲದ ಬಿಸಿ ರೈತರಿಗಷ್ಟೇ ಅಲ್ಲ ಈಗ ನಗರವಾಸಿಗಳಿಗೆ ತಟ್ಟಿದೆ ಎನ್ನಬಹುದು. ಹಳ್ಳಿಗರು ಟ್ಯಾಂಕರ್ ಬರುವುದನ್ನು ಕಾಯ್ದು ಕುಳಿತುಕೊಂಡರೆ ನಗರದವರು ನಲ್ಲಿ ನೀರಿನ ಮುಂದೆ ಕುಡಿಯುವ ನೀರಿಗಾಗಿ ಇಡೀ ದಿನ ಕಾಯಬೇಕಾಗಿದೆ.