ಹುಬ್ಬಳ್ಳಿ: ಬಿಎಸ್ವೈ, ಎಚ್ಡಿಕೆ ಮೇಲೆ ಕಿಡಿಕಾರಿದ ವೇದವ್ಯಾಸ ಕೌಲಗಿ
ಹುಬ್ಬಳ್ಳಿ, ಫೆಬ್ರವರಿ,08: ಬಿಜೆಪಿ ಪಕ್ಷದ ಬಿ.ಎಸ್.ಯಡಿಯೂರಪ್ಪ ಮತ್ತು ಜೆಡಿಎಸ್ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಭ್ರಷ್ಟರು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಆರೋಪಿಸಿದ್ದಾರೆ.
ಭ್ರಷ್ಟಾಚಾರ ಆರೋಪದಲ್ಲಿ ಜೈಲಿಗೆ ಹೋದ ಯಡಿಯೂರಪ್ಪ ಅವರನ್ನು ಜನರು ತಿರಸ್ಕರಿಸಿದ್ದಾರೆ. ಯಡಿಯೂರಪ್ಪನವರ ಪ್ರಕಾರ ಶಿಷ್ಟಾಚಾರವೆಂದರೆ ಭ್ರಷ್ಟಾಚಾರವೆಂದೂ, ಅದಕ್ಷತೆ ಎಂದರೆ ಭ್ರಷ್ಟರೆಂದು ತಿಳಿದುಕೊಂಡಿದ್ದಾರೆ. ಅವರಿಗೆ ಕನಸಿನಲ್ಲಿಯೂ ಭ್ರಷ್ಟಾಚಾರ ಕಣ್ಣ ಮುಂದೆ ಬರುತ್ತದೆ ಎಂದು ವೇದವ್ಯಾಸ ಕೌಲಗಿ ಅವರು ಟೀಕಿಸಿದ್ದಾರೆ.[ಬಿಎಸ್ ವೈ ವಿರುದ್ಧದ 15 ಎಫ್ ಐಆರ್ ರದ್ದುಗೊಳಿಸಿದ ಹೈಕೋರ್ಟ್]
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರ್ಕಾರದಲ್ಲಿರುವ ಸಚಿವರು ಸಾಕಷ್ಟು ಆಸ್ತಿ ಮಾಡಿ ಈಗಲೂ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸಲು ಲೋಕೋಪಯೋಗಿ ಸಚಿವರಿಗೆ ಶಿಫಾರಸ್ಸು ಮಾಡುತ್ತಾರೆ. ಇತ್ತೀಚೆಗೆ ಹುಬ್ಬಳ್ಳಿಗೆ ಆಗಮಿಸಿದ ಕುಮಾರಸ್ವಾಮಿಯವರು ಉಪಚುನಾವಣೆಗೆ ಖರ್ಚು ಮಾಡುವ ಹಣವನ್ನು ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ನೀಡುತ್ತೇವೆಂದು ಹೇಳಿದ್ದವರು ಈಗ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ಮಾತು ತಪ್ಪಿದ್ದಾರೆ ಎಂದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದರೆ, ಹೆಚ್.ಡಿ. ರೇವಣ್ಣನ ಕೆಎಂಎಫ್ ಅಧ್ಯಕ್ಷರಾಗುವ ಹಂಬಲದಲ್ಲಿದ್ದಾರೆ. ಇನ್ನು ದೇವೇಗೌಡರಿಗೆ ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರ ಹಂಚಿಕೊಳ್ಳಬೇಕೆಂಬ ದೂರಾಲೋಚನೆ ಇದ್ದುದರಿಂದ ರಾಜ್ಯದ ಜನತೆ ಇವರ ಆಸೆಗೆ ತಣ್ಣೀರು ಹಾಕಿದ್ದಾರೆ.[ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸುವ ವಾಚ್, ಗ್ಲಾಸ್ ಬೆಲೆ ಇಷ್ಟೊಂದಾ?]
ಯಡಿಯೂರಪ್ಪ ಅವರಿಗೆ ಹೇಗಾದರೂ ಮಾಡಿ ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕೆನ್ನುವ ಆಸೆ, ಆದರೆ ಅನಂತಕುಮಾರ್, ಸದಾನಂದ ಗೌಡರು, ಜಗದೀಶ ಶೆಟ್ಟರ್ ಅಡ್ಡ ನಿಂತಿದ್ದಾರೆ. ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದವರಿಗೆ ಅದಕ್ಷ, ಭ್ರಷ್ಟ ಅರ್ಥವೇ ಗೊತ್ತಿಲ್ಲದಿರುವಾಗ ಇವರಿಂದ ರಾಜ್ಯದ ಜನತೆಯ ಕಲ್ಯಾಣ ಹೇಗೆ ಸಾಧ್ಯವೆಂದು ಕೌಲಗಿ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಗೆ ಮುಖ್ಯಮಂತ್ರಿ : ನಗರಕ್ಕೆ ಮಂಗಳವಾರ ಫೆ.8 ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿ ಚುನಾವಣಾ ಪ್ರಚಾರಾರ್ಥ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಲಿದ್ದಾರೆ. ಹುಬ್ಬಳ್ಳಿ ಹೊರವಲಯದ ಗಬ್ಬೂರ ಬೈಪಾಸ್ ನಲ್ಲಿ ಈ ಬಹಿರಂಗ ಸಭೆ ನಡೆಯಲಿದೆ.