ಹುಬ್ಬಳ್ಳಿ: ಔಡಲ ಬೀಜ ತಿಂದು 57 ವಿದ್ಯಾರ್ಥಿಗಳು ಅಸ್ವಸ್ಥ
ಹುಬ್ಬಳ್ಳಿ, ಜೂನ್ 08: ತಾಲೂಕಿನ ಶೆರೇವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 57 ವಿದ್ಯಾರ್ಥಿಗಳು ಔಡಲ ಮರದ ಬೀಜ ತಿಂದು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿದ್ಯಾರ್ಥಿಗಳನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನುಮಂತಪ್ಪ ಕುರಿ (2ನೇ ತರಗತಿ) ಎಂಬಾತನ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ನಿಗಾ ವಹಿಸಲಾಗಿದೆ.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]
ಮಂಗಳವಾರ ಎಂದಿನಂತೆ ಶಾಲೆಗೆ ಬಂದಿದ್ದ ವಿದ್ಯಾರ್ಥಿಗಳು ಔಡಲ ಮರದ ಬೀಜವನ್ನು ಜಜ್ಜಿಕೊಂಡು ತಿಂದಿದ್ದಾರೆ. ನಂತರ ಶಾಲೆಯಲ್ಲಿ ನೀಡುವ ಕ್ಷೀರಭಾಗ್ಯ ಹಾಲು ಕುಡಿಯುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೆ ವಾಂತಿ, ಭೇದಿ ಆರಂಭವಾಗಿದೆ. ತಕ್ಷಣ ಶೆರೇವಾಡ ಮತ್ತು ನೂಲ್ವಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ವಿದ್ಯಾರ್ಥಿಗಳನ್ನು ದಾಖಲಿಸಲಾಯಿತು.[ಛತ್ತೀಸಗಢದಲ್ಲಿ ನಕ್ಸಲ್ ದಾಳಿ, ಹುಬ್ಬಳ್ಳಿ ಯೋಧ ಹುತಾತ್ಮ]
ಪ್ರಥಮ ಚಿಕಿತ್ಸೆ ನಂತರ ವಿದ್ಯಾರ್ಥಿಗಳನ್ನು ನಗರದ ಕಿಮ್ಸ್ ಗೆ ತರಲಾಯಿತು. ಕಿಮ್ಸ್ ಗೆ ಮಕ್ಕಳ ಪಾಲಕರು ಭೇಟಿ ನೀಡಿ ಆತಂಕ ವ್ಯಕ್ತಪಡಿಸಿದರು.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, ಶಾಸಕ ಸಿ.ಎಸ್.ಶಿವಳ್ಳಿ ಪಾಲಕರಿಗೆ ಸಾಂತ್ವನ ಹೇಳಿ ಮಕ್ಕಳ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಮಕ್ಕಳು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ಹೇಳಿದ್ದಾರೆ.