ಹುಬ್ಬಳ್ಳಿ ಬೈಕ್ ಸವಾರರಿಗೆ ಪೊಲೀಸರ ಭಯ
ಹುಬ್ಬಳ್ಳಿ, ಡಿಸೆಂಬರ್, 24: ಹುಬ್ಬಳ್ಳಿ ಧಾರವಾಡದಲ್ಲಿ ಈಗ ಹೆಲ್ಮೆಟ್ ಗಳದ್ದೇ ಸುದ್ದಿ. ಯಾರಿಗೆ ಕೇಳಿದರೂ "ನೀನು ಎಷ್ಟು ದಂಡ ಕಟ್ಟಿದೀಪಾ, ನಾನಿಷ್ಟು ಕಟ್ಟೇನಿ ನೋಡ್" ಎಂಬ ಮಾತುಗಳು ಗಲ್ಲಿ ಗಲ್ಲಿಗಳಲ್ಲಿ ಕೇಳಿ ಬರುತ್ತಿವೆ.
ಸುಪ್ರೀಂಕೋರ್ಟ್ ಆದೇಶದಂತೆ ಅವಳಿ ನಗರ ಪೊಲೀಸ್ ಆಯುಕ್ತ ಪ್ರಭಾಕರ ರಾಣೆ ಹೆಲ್ಮೆಟ್ ಧರಿಸದ ಸವಾರರನ್ನು ಹಿಡಿದು ದಂಡಿಸುವ ಕಾರ್ಯಕ್ಕೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಜನರು ಟ್ರಾಫಿಕ್ ನಿಯಮ ಪಾಲಿಸದೆ ದಂಡ ಕಟ್ಟುವಂತಾದಾಗ ಕೇಳಿದ ಮಾತುಗಳಿವು.[ಪೊಲೀಸಪ್ಪನ ಹುಚ್ಚಾಟ, ರೊಚ್ಚಿಗೆದ್ದ ಹುಬ್ಬಳ್ಳಿಗರು]
ಹಲವಾರು ತಂಡಗಳಾಗಿ ಸಂಚಾರಿ ಪೊಲೀಸರು ಕಾರ್ಯನಿರತರಾಗಿ ಮೂಲೆ ಮೂಲೆಗಳಲ್ಲಿ ನಿಂತುಕೊಂಡು ಹೆಲ್ಮೆಟ್ ಧರಿಸದ ಸವಾರರನ್ನು ಹಿಡಿದು ದಂಡ ತುಂಬಿಸಿಕೊಳ್ಳುವುದು ಎಲ್ಲೆಡೆ ಕಂಡು ಬರುತ್ತಿದೆ. ಹೀಗಾಗಿ ಕೆಲವರು ರಸ್ತೆ ಬದಿಯ ಹೆಲ್ಮೆಟ್ ಗಳನ್ನೇ ಖರೀದಿಸುತ್ತಿದ್ದಾರೆ. ನೂರಿನ್ನೂರಿಗೆ ಸಿಗುವ ಐಎಸ್ಐ ಮಾರ್ಕ ಇಲ್ಲದ ಸಾದಾ ಹೆಲ್ಮೆಟ್ ಧರಿಸಿಕೊಂಡು ಬದುಕಿದೆಯಾ ಬಡಜೀವವೇ ಎಂಬಂತೆ ಎಂದಿನಂತೆ ತಮ್ಮ ಕೆಲಸಗಳಿಗೆ ತೆರಳುತ್ತಿದ್ದಾರೆ.
ಅಕಸ್ಮಾತ್ ಇಂಥಹವರೇನಾದರೂ ಸಂಚಾರಿ ಪೊಲೀಸರಿಗೆ ಸಿಕ್ಕಿ ಬಿದ್ದರೆ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿಕೊಂಡಿರುವುದಕ್ಕೆ ದಂಡ ತುಂಬುವುದು ತಪ್ಪುತ್ತಿಲ್ಲ.ಇನ್ನೊಂದು ವಿಷಯವೆಂದರೆ ಸಂಚಾರಿ ಪೊಲೀಸರ ಬಿಳಿ ಬಣ್ಣದ ಮತ್ತು ಸಿವಿಲ್ ಪೊಲೀಸರು ಧರಿಸುವ ಹಸಿರು ಬಣ್ಣದ ಹೆಲ್ಮೆಟ್ ಗಳಿಗೂ ಐಎಸ್ಐ ಮಾರ್ಕ್ ಇಲ್ಲ. ಇದನ್ನು ಹಲವಾರು ಬೈಕ್ ಸವಾರರು ಪ್ರಶ್ನಿಸುತ್ತ ಪೊಲೀಸರೊಂದಿಗೆ ವಾಗ್ವಾದಕ್ಕಿಳಿಯುವುದು ಇಲ್ಲಿ ನಿತ್ಯ ಸಾಮಾನ್ಯ ದೃಶ್ಯವಾಗಿದೆ.[ಚಾಲಕರೇ,ಹಿಂಬದಿ ಸವಾರರೇ ಹೆಲ್ಮೆಟ್ ಧರಿಸಲು ಸಿದ್ಧರಾಗಿ]
ಈ ಹಿಂದೆ ಹೆಲ್ಮೆಟ್ ಧರಿಸದೇ ಹೊರಟ ವಾಹನ ಸವಾರನೋರ್ವ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲಿ ಬಿದ್ದು ಗಾಯಗೊಂಡ ಘಟನೆ ಇನ್ನೂ ನಗರದ ಜನತೆಯಲ್ಲಿ ನೆನಪು ಹಸಿಯಾಗಿಯೇ ಇದೆ. ಹೆಲ್ಮೆಟ್ ವಿರೋಧಿಸಿ ಅವಳಿ ನಗರದಲ್ಲಿ ಪ್ರತಿಭಟನೆಗಳೂ ಕೂಡ ನಡೆದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಪ್ರಭಾಕರ ರಾಣೆ ಹಿಂದಿನ ಸವಾರರಿಗೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸುವುದಕ್ಕಾಗಿ ಶೀಘ್ರ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ.
ಜವಾಬ್ದಾರಿ ಯಾರದು ?
ಸಾರಿಗೆ ಇಲಾಖೆ ಅಧಿಕಾರಿಗಳು ಮಾತ್ರ ಹೆಲ್ಮೆಟ್ ಐಎಸ್ಐ ಮಾರ್ಕ್ ಇರುವುದನ್ನೇ ಧರಿಸಬೇಕು. ಆದರೆ ಐಎಸ್ಐ ಮಾರ್ಕ್ ಇಲ್ಲದೇ ಹೆಲ್ಮೆಟ್ ಎಲ್ಲಿ ಮಾರಾಟವಾಗುತ್ತವೆ ಮತ್ತು ಅದನ್ನು ತಡೆಗಟ್ಟುವುದು ನಮ್ಮ ಕೆಲಸವಲ್ಲ ಎಂದು ತಮ್ಮ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುತ್ತಿದ್ದಾರೆ.[ಯಮ, ಗಣಪ ಇಹಲೋಕಕ್ಕಿಳಿದಿದ್ದಾರೆ ಹುಷಾರ್!]
ಇದೇ ರೀತಿ ಪೊಲೀಸರು ನಾವು ಸಾದಾ ಅಥವಾ ನಕಲಿ ಹೆಲ್ಮೆಟ್ ಮಾರಾಟವಾಗುವ ಸ್ಥಳಗಳಿಗೆ ದಾಳಿ ಮಾಡಲಾಗುವುದಿಲ್ಲ. ಅದಕ್ಕೆ ಆದ ಸಂಬಂಭಪಟ್ಟ ಇಲಾಖೆಗಳಿವೆ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ.