ಸಿಸಿಟಿವಿ ಕಣ್ಗಾವಲಲ್ಲಿ ರಾಹುಲ್ ಗಾಂಧಿ ಹಾವೇರಿ ಭೇಟಿ
ಹುಬ್ಬಳ್ಳಿ, ಅಕ್ಟೋಬರ್, 09 : ಬೆಂಗಳೂರಿನಿಂದ ಶನಿವಾರ ಬೆಳಗ್ಗೆ ಹೆಲಿಕಾಪ್ಟರ್ ಮೂಲಕ ರಾಣೆಬೆನ್ನೂರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲ ಕಡೆಗಳಲ್ಲಿ ಭಾರಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ರಾಹುಲ್ ಭೇಟಿ ನೀಡುವ ಮೈದೂರು, ಗುಡಗೂರು ಗ್ರಾಮಗಳಲ್ಲಿ ಈಗಾಗಲೇ ವಿಶೇಷ ಭದ್ರತಾ ದಳಗಳು ಬೀಡು ಬಿಟ್ಟಿವೆ. ಹೆಲಿಪ್ಯಾಡ್ ನಿಂದ ಪಾದಯಾತ್ರೆ ನಡೆಯುವ ಸ್ಥಳ, ರಾಹುಲ್ ಭೇಟಿಯಾಗುವ ರೈತ ಕುಟುಂಬದವರ ಮನೆ ಹತ್ತಿರ ಹಾಗೂ ಸಮಾವೇಶ ನಡೆಯುವ ಸ್ಥಳದಲ್ಲಿ ಸುಮಾರು 250ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ರಸ್ತೆಯ ಪಕ್ಕ ಹೊಸದಾಗಿ ನಿರ್ಮಿಸಲಾಗಿರುವ ವಿದ್ಯುತ್ ಕಂಬಗಳಿಗೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕೆಲವೊಂದು ಕಡೆಗಳಲ್ಲಿ ಗೌಪ್ಯವಾಗಿಯೂ ಕ್ಯಾಮರಾ ಅಳವಡಿಸಲಾಗಿದೆ. ಭದ್ರತಾ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿ ವೀಕ್ಷಿಸಲು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದು, ಅಲ್ಲಿಂದಲೇ ಇಡೀ ದಿನದ ಭದ್ರತೆಯ ಮೇಲುಸ್ತುವಾರಿ ಮಾಡಲಿದ್ದಾರೆ. [ರಾಹುಲ್ ಗಾಂಧಿ ಸಮಾವೇಶಕ್ಕಾಗಿ ಬೆಳೆದ ಬೆಳೆ ಧ್ವಂಸ!]
ರಾರಾಜಿಸುತ್ತಿರುವ ಫ್ಲೆಕ್ಸ್ : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಯಾರೂ ಫ್ಲೆಕ್ಸ್ ಹಾಕಬೇಡಿ ಎಂದು ಮನವಿ ಮಾಡಿದ್ದರೂ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ರಸ್ತೆಯುದ್ದಕ್ಕೂ ರಾಹುಲ್ ರನ್ನು ಸ್ವಾಗತಿಸುವ ಮತ್ತು ಅಭಿನಂದಿಸುವ ಕಟೌಟ್ಗಳು ಎದ್ದು ಕಾಣುತ್ತಿವೆ.
ರೈತ ಸಮಾವೇಶಕ್ಕೆ ಸಾಕಷ್ಟು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಬರುವುದರಿಂದ ಜಿಲ್ಲೆಯ ದೇವರಗುಡ್ಡ ಮತ್ತು ಗಂಗಾಪೂರ ರಸ್ತೆಗಳಲ್ಲಿ ವಿಶೇಷ ಚೆಕ್ ಪೋಸ್ಟ್ ತೆರೆಯಲಾಗಿದೆ. ಎಲ್ಲ ವಾಹನಗಳು ತಪಾಸಣೆಗೊಳಪಟ್ಟೇ ಸಮಾವೇಶದ ಸ್ಧಳಕ್ಕೆ ತೆರಳಲಿವೆ. [ಮಂಡ್ಯದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?]
ಎಂ.ಬಿ.ಪಾಟೀಲ ಎಂಬವರ ಹೊಲದಲ್ಲಿ ತಾತ್ಕಾಲಿಕ ಹೆಲಿಪ್ಯಾಡನ್ನು ನಿರ್ಮಿಸಲಾಗಿದೆ. ಶಾಸಕ ಕೆ.ಬಿ.ಕೋಳಿವಾಡ ಅವರ ಐತಿಹಾಸಿಕ ಹಿನ್ನೆಲೆಯುಳ್ಳ 200 ವರ್ಷಗಳ ಹಿಂದಿನ ಮನೆಯಲ್ಲಿ ಶುದ್ಧ ಸಸ್ಯಾಹಾರಿ ಊಟದ ವ್ಯವಸ್ಥೆಯನ್ನು ರಾಹುಲ್ ಗಾಗಿ ಮಾಡಲಾಗುತ್ತಿದೆ. ಉತ್ತರ ಕರ್ನಾಟಕದ ವಿಶೇಷ ಖಾದ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಕಳಸಾ- ಬಂಡೂರಿ ಹೋರಾಟಗಾರರಿಂದ ಮನವಿ : ಕಳಸಾ- ಬಂಡೂರಿ ಹೋರಾಟಗಾರರು ಶನಿವಾರ ಬೆಳಗ್ಗೆ ರಾಹುಲ್ ಗಾಂಧಿ ಅವರನ್ನು ಹೆಲಿಪ್ಯಾಡ್ ನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ರೈತರ ಪಕ್ಷಾತೀತ ಹೋರಾಟ ಸಮನ್ವಯ ಸಮಿತಿಯ ಪದಾಧಿಕಾರಿಗಳು ರಾಹುಲ ಅವರನ್ನು ಭೇಟಿ ಮಾಡಿ ಕಳಸಾ-ಬಂಡೂರಿ ನಾಲಾ ಯೋಜನೆಯ ಗೊಂದಲ ಬಗೆಹರಿಸುವಂತೆ ಮನವಿ ಸಲ್ಲಿಸಲಿದ್ದಾರೆ.