ಪರಮೇಶ್ವರ್ ಅಕ್ರಮ ಮರಳು ದಂಧೆಯ ಪಾಲುದಾರ: ಎಚ್ಡಿಕೆ
ಹುಬ್ಬಳ್ಳಿ,ಜನವರಿ, 29: ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಅಕ್ರಮ ಮರಳು ದಂಧೆಕೋರರೊಂದಿಗೆ ಶಾಮೀಲಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಅವರು ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾತನಾಡಿ, ಡಿವೈಎಸ್ಪಿ ಅನುಪಮಾ ಶೆಣೈ ಅಕ್ರಮ ಮರಳು ದಂಧೆ ನಿಯಂತ್ರಿಸಲು ಕಠಿಣ ಕ್ರಮ ಕೈಗೊಂಡ ಕಾರಣ ಅವರಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕೆಲ್ಲಾ ಸಚಿವ ಪರಮೇಶ್ವರರೇ ಕಾರಣ ಎಂದು ಕಿಡಿಕಾರಿದರು.[ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ, ಮೌನ ಮುರಿದ ಸಿದ್ದರಾಮಯ್ಯ]
ವಿಜಯಪುರದ ಇಂಡಿಯ ಡಿವೈಎಸ್ ಪಿಯಾಗಿ ವರ್ಗಾವಣೆಯಾಗಿರುವ ಅನುಪಮಾ ಶೆಣೈ ಅವರನ್ನು ಪುನಃ ಕೂಡ್ಲಿಗಿಯಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಬೇಕು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಎಲ್ಲೆಡೆ ರೈತರು ಬೆಳೆ ನಾಶದಿಂದ ಕಂಗೆಟ್ಟಿದ್ದಾರೆ. ಆದರೆ ರಾಜ್ಯದ ಕೃಷಿ ಸಚಿವರು ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ಸಿದ್ಧರಾಮಯ್ಯ ಸರಕಾರ ನ್ಯಾಯದಲ್ಲಿ ತಾರತಮ್ಯ ನೀತಿ ಅನುಸರಿಸಿದೆ ಎಂದು ದೂರಿದರು.[ಅನುಪಮಾ ಶೆಣೈ ಅವರ ಫೇಸ್ ಬುಕ್ ಗೆ ಕ್ಯಾಂಡಿ ಕ್ರಷ್ ರಿಕ್ವೆಸ್ಟ್]
ಹೆಬ್ಬಾಳ ಉಪಚುನಾವಣೆಯಲ್ಲಿ ನಾವೇ ಮೊದಲು ಮುಸ್ಲಿಂ ಸಮುದಾಯ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ನಮ್ಮನ್ನು ನೋಡಿ ಜಾಫರ್ ಷರೀಫ್ ಅವರ ಮೊಮ್ಮಗನಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಸೋಲುವ ಭೀತಿ ತೋರಿಸಿದೆ ಎಂದರು. ಈ ಕ್ಷೇತ್ರದಲ್ಲಿ ಆ ಪಕ್ಷದವರೇ ಜಾಫರ್ ಷರೀಫ್ ಅವರ ಮೊಮ್ಮಗನನ್ನು ಸೋಲಿಸುವದರಲ್ಲಿ ಸಂಶಯವೇ ಇಲ್ಲ ಎಂದರು.