ಸಾಹಿತಿ ದ.ರಾ ಬೇಂದ್ರೆ ಪುತ್ರ ಡಾ.ವಾಮನ ಬೇಂದ್ರೆ ನಿಧನ
ಹುಬ್ಬಳ್ಳಿ, ಸೆಪ್ಟೆಂಬರ್, 28- ವರಕವಿ ದ.ರಾ.ಬೇಂದ್ರೆ ಪುತ್ರ ಡಾ.ವಾಮನ ಬೇಂದ್ರೆ (82) ಬುಧವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಡಾ.ವಾಮನ ಬೇಂದ್ರೆ ಚಿಕಿತ್ಸೆಗೆ ಸ್ಪಂದಿಸದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ಧಾರವಾಡದ ಬೇಂದ್ರೆ ಕುಟೀರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುತ್ತಿದೆ. ಸಂಜೆ ಧಾರವಾಡದ ಹೊಸ ಯಲ್ಲಾಪುರದ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಹಿತಿಯಾಗಿದ್ದ ಡಾ.ವಾಮನ ಬೇಂದ್ರೆ ಪ್ರಾಧ್ಯಾಪಕ ವೃತ್ತಿಯೊಂದಿಗೆ 150ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು.[ವಾಮನ : ಬೇಂದ್ರೆ ಗರಡಿಯಲ್ಲಿ ಪಳಗಿದ ಶಾಗಿರ್ದ್]
ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಪಟ್ಟಣದ ವೆಲ್ಲಿಂಗ್ಟನ್ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ಆರಂಭಿಸಿದ್ದರು. ನಂತರ ಧಾರವಾಡದ ವಿದ್ಯಾರಣ್ಯ ಕಾಲೇಜಿನಲ್ಲಿ ವೃತ್ತಿ ಮುಂದುವರೆಸಿ, ಕಿಟೆಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ನಂತರ ಅಲ್ಲಿಯೇ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.