ನಮ್ಮ ಕಾವ್ಯಗಳು ಜನರಿಗೆ ಅನುಕೂಲವಾಗುವಂತಿರಲಿ: ಕಂಬಾರ
ಧಾರವಾಡ, ಜನವರಿ, 23: ಅಲ್ಲಿ ಕನ್ನಡದ ಕಂಪು ಪಸರಿಸಿತ್ತು, ಹಲವಾರು ಹಿರಿಯ, ಕಿರಿಯ ಕವಿಗಳು ಒಂದೇ ವೇದಿಕೆಯಲ್ಲಿ ಆಸೀನರಾಗಿದ್ದರು, ಅಸಹಿಷ್ಣುತೆ, ಧರ್ಮಾಂಧತೆ, ಹುಸಿ ಜಾತ್ಯಾತೀತೆ ಹೀಗೆ ನಾನಾ ವಿಚಾರಗಳು, ಕಳವಳಗಳು ವ್ಯಕ್ತವಾದವು.
ಈ ಮೇಲಿನ ಎಲ್ಲಾ ಸಂದರ್ಭಗಳು ಕಂಡು ಬಂದದ್ದು, ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಧಾರವಾಡ ಸಾಹಿತ್ಯ ಸಂಭ್ರಮದ ನಾಲ್ಕನೇ ಆವೃತ್ತಿ ಸಮಾರಂಭದಲ್ಲಿ. ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರ ಈ ಕನ್ನಡ ಸಾಹಿತ್ಯ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಿದರು.[ಸಾಹಿತ್ಯ ವಿಮರ್ಶೆ ಅಂದರೆ ಏನು? ಏಕೆ? ಹೇಗೆ ಹುಟ್ಟಿತು?]
ಸಾಹಿತ್ಯ ಹಬ್ಬ ಉದ್ಘಾಟಿಸಿ ಮಾತನಾಡಿದ ಸಾಹಿತಿ ಚಂದ್ರಶೇಖರ ಕಂಬಾರ ಅವರು, 'ಜನರಿಗೆ ನಮ್ಮ ಕಾವ್ಯಗಳಿಂದ, ಬರಹಗಳಿಂದ ಏನಾದರೂ ಅನುಕೂಲವಾಗಬೇಕು. ಆ ರೀತಿಯಲ್ಲಿ ಇಂದಿನ ಕವಿಗಳ ಬರವಣಿಗೆ ಇರಬೇಕು ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.
ಪಂಪ-ಜನ್ನ ಶರಣರು ಹರಿಹರ, ರಾಘವಾಂಕ ಹೀಗೆ ಸಾಹಿತ್ಯದ ದಿಗ್ಗಜರುಗಳ ಪರಂಪರೆಯನ್ನು ಮೆಲುಕು ಹಾಕಿದಾಗ ಅವರ ಕಾವ್ಯಗಳಲ್ಲಿ ಒಂದು ನಿರ್ದಿಷ್ಟ ಉದ್ದೇಶ ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಇಂದಿನ ಕವಿಗಳ ಬರವಣಿಗೆಯಲ್ಲಿ ವಿಷಯದ ನಿಖರತೆ ಮಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.[ಕರ್ನಾಟಕ ಸಾಹಿತ್ಯ ಅಕಾಡೆಮಿ ಧ್ಯೇಯ ಮತ್ತು ಉದ್ದೇಶ]
ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡ ವಿಮರ್ಶಕ ಟಿ.ಪಿ ಅಶೋಕ, 'ಹೊಡಿ, ಬಡಿ, ಸುಡು ಎಂಬ ನುಡಿಗಟ್ಟಿನ ಮೂಲಕ ನಾಡಿನಾದ್ಯಂತ ಭಾಷಣ ಮಾಡಿದ ಲೇಖಕರಿಗೆ ಅಕಾಡೆಮಿಯು ಸಾಹಿತ್ಯದ ಗೌರವಾನ್ವಿತ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ ದೇಶದ ಗಣ್ಯ ಸಾಹಿತಿ ಹತ್ಯೆಯಾದರೂ ಅಕಾಡೆಮಿ ಮೌನ ವಹಿಸಿರುವುದು ನಾನಾ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಹಿರಿಯ ಸಂಶೋಧಕ ಡಾ. ಎಂ.ಎಂ ಕಲಬುರ್ಗಿ ನೆನಪು ಕೃತಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ. ಪ್ರಮೋದ ಗವಾಯಿ ಬಿಡುಗಡೆಗೊಳಿಸಿದರು. ಹಿರಿಯ ವಿಮರ್ಶಕ ಡಾ. ಜಿ.ಎಸ್ ಅಮೂರ, ನಾಡೋಜ ವೆನನ್ವೀರ ಕಣವಿ ಇನ್ನಿತರರು ಉಪಸ್ಥಿತರಿದ್ದರು.