ಮುಗಿಯದ ತಿಕ್ಕಾಟ, ಶುರುವಾಗದ ಪಿಯು ಮೌಲ್ಯಮಾಪನ
ಧಾರವಾಡ, ಏಪ್ರಿಲ್, 6: ರಾಜ್ಯದಾದ್ಯಂತ ಪಿಯು ಉಪನ್ಯಾಸಕರ ಪ್ರತಿಭಟನೆ ಮುಂದುವರಿದಿದೆ. ಧಾರವಾಡದಲ್ಲೂ ಪಿಯು ಉಪನ್ಯಾಸಕರು ಮೌಲ್ಯ ಮಾಪನ ಬಹಿಷ್ಕಾರ ಮಾಡಿದ್ದಾರೆ.
ನಗರದ ಕೆ.ಇ. ಬೋರ್ಡ್ ಪಿಯು ಕಾಲೇಜಿನ ಮೌಲ್ಯಮಾಪನ ಕೇಂದ್ರದಲ್ಲಿ ನಡೆಯಬೇಕಿದ್ದ ಅಕೌಂಟೆನ್ಸಿ ಉತ್ತರಪತ್ರಿಕೆ ಮೌಲ್ಯಮಾಪನವು ಉಪನ್ಯಾಸಕರ ಮುಷ್ಕರದಿಂದ ಮಂಗಳವಾರ ಆರಂಭವಾಗಲಿಲ್ಲ.[ರಾಜ್ಯದಾದ್ಯಂತ ಪಿಯುಸಿ ಮೌಲ್ಯ ಮಾಪನ ಬಹಿಷ್ಕಾರ]
ಧಾರವಾಡದ ಸುತ್ತಮುತ್ತಲ ಜಿಲ್ಲೆಗಳಿಂದ ಬಂದಿದ್ದ ನೂರಾರು ಉಪನ್ಯಾಸಕರು ಕುಮಾರ್ ನಾಯಕ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕೋಡಿಂಗ್, ಡಿಕೋಡಿಂಗ್ ಹಾಗೂ ಮೌಲ್ಯಮಾಪನ ಕೆಲಸ ಪ್ರಾರಂಭಿಸಲು ನಿರಾಕರಿಸಿದರು. ರಾಜ್ಯಾದ್ಯಂತ ಈಗಾಗಲೇ ಪ್ರಾರಂಭವಾಗಿರುವ ಉಪನ್ಯಾಸಕರ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಮೌಲ್ಯಮಾಪಕರ ಸಭೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಪ್ರೊ. ಮಾ. ನಾಗರಾಜ ಮಾತನಾಡಿ, ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಪರವಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಹಠಮಾರಿ ಧೋರಣೆ ಕೈಬಿಟ್ಟು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಾಗೂ ಉಪನ್ಯಾಸಕರ ಬಹುದಿನದ ಬೇಡಿಕೆಯಾದ ವೇತನ ತಾರತಮ್ಯ ನಿವಾರಿಸಬೇಕು ಎಂದು ಆಗ್ರಹಿಸಿದರು.[ಪತ್ರಿಕೆ ಸೋರಿಕೆ, ಆರೋಪಿಗಳು ಏ.13ರ ತನಕ ಸಿಐಡಿ ವಶಕ್ಕೆ]
ಬಿಜೆಪಿ ಮುಖಂಡ ವೀರೇಶ ಸಂಗಳದ ಕನಕದಾಸ ಶಿಕ್ಷಣ ಸಂಸ್ಥೆಯ ಸಂದೀಪ ಬೂದಿಹಾಳ, ಕೆ.ಇ. ಬೋರ್ಡ್ ನ ರಮೇಶ ಜಿ. ಮಾಂಗ್ , ಬಿ.ಎನ್. ಮುಂದಿನಮನಿ ಮಾತನಾಡಿದರು. ವಸಂತ ಪೇಟನವರ, ಆಂಜನೇಯ, ಪ್ರಕಾಶ ರಾಣೆ, ಕರೆಪ್ಪ ಗೌಡ್ರು,ರಂಗಾ ಬದ್ದಿ ಸೇರಿದಂತೆ ನೂರಾರು ಜನ ಉಪನ್ಯಾಸಕರು ಭಾಗವಹಿಸಿದ್ದರು ತಿಳಿಸಿದ್ದಾರೆ.