ಹಾಲಿನ ದರ ಏರಿಕೆ, ಬಿಜೆಪಿಯಿಂದ ತಕರಾರು ಏಕೆ?
ಹುಬ್ಬಳ್ಳಿ, ಜನವರಿ, 09: ರೈತರ ಹಿತದೃಷ್ಟಿಯಿಂದ ಲೀ.ಹಾಲಿಗೆ 4 ರೂ. ಹೆಚ್ಚಳ ಮಾಡಿ ಅದರಲ್ಲಿ 3 ರೂ.ರೈತರಿಗೆ, 1 ರೂ.ಒಕ್ಕೂಟಗಳಿಗೆ ಎಂದು ಸರ್ಕಾರ ನಿರ್ಧರಿಸಿದೆ. ರೈತರಿಗೆ ಅನುಕೂಲ ಮಾಡಿಕೊಟ್ಟಿರುವ ಈ ಸರ್ಕಾರದ ನೀತಿ ಬಿಜೆಪಿಗೆ ಸಹಿಸಲಾಗುತ್ತಿಲ್ಲ ಎಂದು ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ವಕ್ತಾರ ವೇದವ್ಯಾಸ ಕೌಲಗಿ ಆರೋಪಿಸಿದ್ದಾರೆ.
ರೈತರಿಂದ ಖರೀದಿಸುತ್ತಿರುವ ಹಾಲಿಗೆ ಈಗಾಗಲೇ ಪ್ರೋತ್ಸಾಹ ಧನ ನೀಡಲಾಗಿದೆ. ಆದರೂ ದುಬಾರಿಯಾದ ಮೇವು, ಪಶು ಆಹಾರ ಹೈನುಗಾರಿಕೆಯಲ್ಲಿ ತೊಡಗಿದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿಯೂ ತಲೆದೋರಿರುವುದರಿಂದ ಅನಿವಾರ್ಯವಾಗಿ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.[ಹಾಲಿನ ದರ 4 ರೂ ಏರಿಕೆ, ಎಲ್ಲಿ ದರ ಎಷ್ಟಿದೆ?]
ಜೀವನಾವಶ್ಯಕ ವಸ್ತುಗಳಾದ ತೊಗರಿಬೆಳೆ 200 ರೂ, ಉದ್ದಿನಬೆಳೆ 190 ಕೆ.ಜಿ. ಹೀಗೆ ಬೆಲೆ ಹೆಚ್ಚಾದಾಗ ಕೇಂದ್ರ ಸರಕಾರದ ಧೋರಣೆ ಬಗ್ಗೆ ಬಿಜೆಪಿ ನಾಯಕರು ಪ್ರತಿಭಟಿಸಲಿಲ್ಲ. ಈರುಳ್ಳಿ 60 ರೂ. ಏರಿದಾಗ ಗ್ರಾಹಕರ ಜೇಬಿಗೆ ಕತ್ತರಿ ಬಿಳುತ್ತಿತ್ತೇ ವಿನಃ ರೈತರಿಗೆ ಕ್ವಿಂಟಾಲ್ ಗೆ 2000 ರೂ. ರಿಂದ 3000 ರೂ. ಮಾತ್ರ ಸಿಗುತ್ತಿತ್ತು. ಇದರ ಬಗ್ಗೆ ಬಿಜೆಪಿ ತಲೆ ಕೆಡಿಸಿಕೊಳ್ಳಲಿಲ್ಲ. ಇದು ಬಡವರು, ರೈತರ ಪರ ಇರುವ ಪಕ್ಷ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೀಗ ನಂದಿನಿ ಹಾಲಿನ ದರ ಏರಿಕೆ ವಿರುದ್ಧ ಪ್ರತಿಭಟಿಸುತ್ತಿರುವವರು ರೈತರ ಬಳಿಯಿಂದ ನಂದಿನಿ ಹಾಲನ್ನು ಎಷ್ಟರ ಮಟ್ಟಿಗೆ ಖರೀದಿಸುತ್ತಿದ್ದಾರೆ. ಶುದ್ದ ನೀರಿಗೆ ಲೀ. 20 ರೂ. ಕೊಡುವವರು ಹಾಲಿನ ದರ ಹೆಚ್ಚಳಕ್ಕೆ ಯಾಕೆ ಹಿಂದೇಟು ಹಾಕುವರು. ಇದೆಲ್ಲಾ ಬಿಜೆಪಿಯ ರೈತ ವಿರೋಧಿ ಕುತಂತ್ರವಾಗಿದೆ ಎಂದು ವೇದವ್ಯಾಸ ಕೌಲಗಿ ದೂರಿದ್ದಾರೆ.[ತೊಗರಿ ಬೇಳೆಗೆ ಬಂಗಾರದ ಬೆಲೆ ಬರಲು ಕಾರಣವೇನು?]
ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದಾಗ ಕಳೆದ 175 ದಿನಗಳಿಂದ ನಡೆಯುತ್ತಿರುವ ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸುವಂತೆ ಒತ್ತಾಯ ಪಡಿಸಲಿಲ್ಲ. ಹುಬ್ಬಳ್ಳಿಗೆ ರಕ್ಷಣಾ ಸಚಿವ ಮನೋಹರ ಪರಿಕ್ಕರ ಬಂದಾಗಲೂ ಸ್ಥಳೀಯ ಬಿಜೆಪಿ ನಾಯಕರು ಏನು ಮಾತನಾಡಲಿಲ್ಲ. ಇದರಿಂದ ಬಿಜೆಪಿ ಯಾವಾಗಲೂ ರೈತರ ಪರ ಅಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿದಂತಾಗಿದೆ ಎಂದು ಟೀಕಿಸಿದರು.