ಕುಡಿಯುವ ನೀರಿಗಾಗಿ ದೇಶಪಾಂಡೆ ಫೌಂಡೇಶನ್ ನಿಂದ ಸಹಾಯವಾಣಿ
ಹುಬ್ಬಳ್ಳಿ,ಮಾರ್ಚ್,07: ಉತ್ತರ ಕರ್ನಾಟಕದ ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳ ಜನತೆಯ ನೆಮ್ಮದಿಗೆಡಿಸಿರುವ ಬರಗಾಲ ಪರಿಸ್ಥಿತಿಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್ ನಾಗರಿಕರಿಗಾಗಿ ಸಹಾಯವಾಣಿ ಸ್ಥಾಪಿಸಿದೆ. ಜನರ ಬರಗಾಲದ ಬವಣೆ ನೀಗಿಸಲು ಕಂಕಣ ಬದ್ದವಾಗಿದೆ.
ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳು ಸತತವಾಗಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿವೆ. ಈ ಎಲ್ಲ ಸಮಸ್ಯೆಗಳನ್ನು ತಿಳಿದ ದೇಶಪಾಂಡೆ ಫೌಂಡೇಶನ್ ಗ್ರಾಮೀಣ ಜನರಿಗೆ ಅನುಕೂಲ ಕಲ್ಪಿಸಲು ಉದ್ದೇಶಿಸಿದೆ ಎಂದು ದೇಶಪಾಂಡೆ ಫೌಂಡೇಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಝಾ ಮಾಹಿತಿ ನೀಡಿದರು.["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]
ಮಾರ್ಚ್ ಮೊದಲ ವಾರದಿಂದ ಆರಂಭವಾಗಿರುವ ಈ ಸಹಾಯವಾಣಿ ಮೇ ಅಂತ್ಯದವರೆಗೂ ಜಾರಿಯಲ್ಲಿರುತ್ತದೆ. ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಮೇಲ್ಕಂಡ ಮೂರು ಜಿಲ್ಲೆಗಳ ಜನತೆ 180030101221 ಗೆ ಕರೆ ಮಾಡಿ ತಮ್ಮ ಹೆಸರು, ಊರು ತಿಳಿಸಬಹುದು. ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹೇಳಿಕೊಳ್ಳಬಹುದು.[ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]
ಈ ಮೂರು ಜಿಲ್ಲೆಗಳ ಜನತೆಯಿಂದ ಬಂದ ಕರೆಗಳ ಮಾಹಿತಿಯನ್ವಯ ದೇಶಪಾಂಡೆ ಫೌಂಡೇಶನ್ ಸರಕಾರಿ ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಯನ್ನು ಮನವರಿಕೆ ಮಾಡಲಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನವೀನ್ ಝಾ ಹೇಳಿದರು.