ಪ್ರಹ್ಲಾದ್ ಜೋಶಿ ವಿರುದ್ಧ ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ
ಹುಬ್ಬಳ್ಳಿ, ಜನವರಿ, 21: ಸಂಸದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರ ಕಚೇರಿ ಎದುರು ಬಿಎಸ್ಸೆನ್ನೆಲ್ ಗುತ್ತಿಗೆ ಕಾರ್ಮಿಕರು ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ನಗರದ ಚಿಟಗುಪ್ಪಿ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಗುತ್ತಿಗೆ ಹಾಗೂ ಹಂಗಾಮಿ ಕಾರ್ಮಿಕರಾಗಿ ಹಲವಾರು ವರ್ಷಗಳಿಂದ ತಾವು ದುಡಿಯುತ್ತಿದ್ದೇವೆ. ಇದುವರೆಗೂ ನಮ್ಮ ಯಾವುದೇ ಸಮಸ್ಯೆಗಳನ್ನು ಸಂಸದರು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಅವರ ವಿರುದ್ಧ ಕಿಡಿಕಾರಿದರು.[ನೈಋತ್ಯ ರೈಲ್ವೆ ವಲಯಕ್ಕೆ ಜ.22ರೊಳಗೆ ಸಲಹೆ ನೀಡಿ]
ಕೇಂದ್ರದ ನಿಯಮದಂತೆ ಕಾಯಂ ಸ್ವರೂಪದ ಮತ್ತು ಕೆಲವು ಕೆಲಸಗಳನ್ನು ಗುತ್ತಿಗೆ ಅಥವಾ ಹೊರಗುತ್ತಿಗೆ ನೀಡಬಾರದು. ಆದರೆ ಭಾರತೀಯ ದೂರಸಂಪರ್ಕ ನಿಗಮವು ಈ ನಿಯಮವನ್ನು ಪಾಲಿಸುತ್ತಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಆದರೆ ನಿಗಮವು ನಿಗದಿತ ವೇತನ ಕೊಡುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಸಂಸದ ಜೋಶಿ ಕೂಡಲೇ ಸಮಸ್ಯೆ ಪರಿಹರಿಸಲು ಲೋಕಸಭೆಯಲ್ಲಿ ನಮ್ಮ ಸಮಸ್ಯೆಗಳನ್ನು ಪ್ರಸ್ತಾವಿಸಿ ನ್ಯಾಯ ದೊರಕಿಸಿಕೊಡಬೇಕೆಂದು ನೌಕರರ ಸಂಘಟನೆಯ ಅಧ್ಯಕ್ಷ ಶಿವಶಂಕ್ರಪ್ಪ, ರಾಜು ಕೊಟಗಿ, ಮಹೇಶ ಪತ್ತಾರ ಆಗ್ರಹಿಸಿದ್ದಾರೆ.[1 ಬಾಟಲಿ ನೀರು ಖರೀದಿಸಿದ್ರೆ ಒಂದು ಲೀ. ಪೆಟ್ರೋಲ್ ಫ್ರೀ!]
ಹುಬ್ಬಳ್ಳಿಯಲ್ಲಿ ಅಬ್ಬರಿಸಿದ ಜೆಸಿಬಿಗಳು : ಅಕ್ರಮ ಮನೆ ನೆಲಸಮ
ಹುಬ್ಬಳ್ಳಿ, ಜನವರಿ, 21: ಜಿಲ್ಲಾಡಳಿತವು ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ನಗರದ ಬೆಂಗಳೂರು ರಸ್ತೆ ಬೈಪಾಸ್ ನಲ್ಲಿದ್ದ ಅಕ್ರಮ ಮನೆ ಮತ್ತು ಅಂಗಡಿಗಳನ್ನು ಬುಧವಾರ ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು.
ಉಪಾಯುಕ್ತ ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಆರಂಭಿಸಲಾದ ಈ ಕಾರ್ಯಾಚರಣೆಯಲ್ಲಿ ಗಬ್ಬೂರ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ 100 ಕ್ಕೂ ಹೆಚ್ಚು ಅಂಗಡಿ ಮತ್ತು ಮನೆಗಳನ್ನು ನಿರ್ನಾಮ ಮಾಡಲಾಗಿದ್ದು, ಪಾಲಿಕೆ ಆಯುಕ್ತ ನೂರ್ ಮನ್ಸೂರ್ ಆಗಮಿಸಿ ತೆರವುಗೊಳಿಸಿದ ಅತಿಕ್ರಮಿತ ಜಾಗವನ್ನು ಪರಿಶೀಲಿಸಿದರು.[ರಾಷ್ಟ್ರೀಯ ಹೆದ್ದಾರಿಯಾಗಲಿರುವ 14 ರಾಜ್ಯ ಹೆದ್ದಾರಿಗಳ ಪಟ್ಟಿ]
ಸ್ವತಃ ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್ ಮನೆ ಮನೆಗೆ ತೆರಳಿ ನೋಟಿಸ್ ನೀಡಿ ಜಾಗ ಖಾಲಿ ಮಾಡುವಂತೆ ಮೊದಲೇ ಸೂಚಿಸಿದ್ದರು. ಆದರೆ, ನಿಗದಿತ ಸಮಯ ಮುಗಿದ ಬಳಿಕ ಪೊಲೀಸ್ ಬಿಗಿ ಬಂದೋಬಸ್ತ್ ಮತ್ತು ಹುಬ್ಬಳ್ಳಿ ಧಾರವಾಡ ಪಾಲಿಕೆ ಅಧಿಕಾರಿಗಳ ಸಮ್ಮುಖದಲ್ಲಿ ನೆಲಸಮಗೊಳಿಲಾಯಿತು.