ಹುಬ್ಬಳ್ಳಿ ಕಿಮ್ಸ್ ನಲ್ಲಿ ಮಗು ಕದ್ದವಳ ಸಾವಿನ ಕತೆ
ಧಾರವಾಡ, ಜನವರಿ, 28:ಆಕೆ ಮದುವೆಯಾಗಿ ವರ್ಷಗಳೇ ಉರುಳಿದ್ದವು. ಆದರೆ ತಾಯಿ ಆಗುವ ಭಾಗ್ಯ ಆಕೆಗೆ ಬಂದಿರಲಿಲ್ಲ. ಮಗುವಿಗೆ ಹಂಬಲಿಸಿದ ಮಹಿಳೆ ಹಿಡಿದಿದ್ದು ಕಳ್ಳತನದ ದಾರಿ.. ಮಗುವನ್ನೇ ಕಳವು ಮಾಡಲೇಬೇಕು ಎಂದು ನಿರ್ಧಾರ ಮಾಡಿ ಹುಬ್ಬಳ್ಳಿ ಕಿಮ್ಸ್ ಗೆ ಆಗಮಿಸಿ ಮಗುವನ್ನು ಕದ್ದೊಯ್ದಿದ್ದಳು. ಆದರೆ ಮಗು ಕದ್ದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಅವಮಾನ ಮತ್ತು ಹತಾಶೆ ತಾಳಲಾರದೇ ಮಹಿಳೆ ಅಂತಿಮವಾಗಿ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಂಥ ಘಟನೆಗೆ ಸಾಕ್ಷಿಯಾಗಿದ್ದು ಧಾರವಾಡ ಜಿಲ್ಲೆಯ ಕಾರಾಗೃಹ. ದಾವಣಗೆರೆಯ ಹರಪ್ಪನಹಳ್ಳಿಯ ಸುರೇಖಾ ಕಾವಾಡಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆಯನ್ನು 26ಗಂಟೆಯೊಳಗೆ ಹಿಡಿದ ಪೊಲೀಸರು ನ್ಯಾಯಾಧೀಶರ ಆದೇಶದ ಮೇರೆಗೆ 14 ದಿನಗಳವರೆಗೆ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದರು.[ನರ್ಸ್ ವೇಷದಲ್ಲಿ ಬಂದು ಮಗು ಕದ್ದೊಯ್ದ ಮಹಿಳೆ ಪೊಲೀಸರ ವಶ]
ಕಾರಾಗೃಹದಲ್ಲಿ ಇರಿಸಿದ್ದ ನೋವಿಗೆ ಈಕೆ ಬುಧವಾರ ತಡರಾತ್ರಿ ಅಥವಾ ಗುರುವಾರದ ನಸುಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಹಿರಿಯ ಅಧಿಕಾರಿಗಳು ಬಂದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.[ಭಾರತದ ಹೆಣ್ಣು ಮಕ್ಕಳ ವ್ಯಥೆ ಬಿಚ್ಚಿಡುವ ವರದಿಯಲ್ಲೇನಿದೆ?]
ಹಿಂದೆ ಏನಾಗಿತ್ತು?
ಸುರೇಖಾ ಕಾವಾಡಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿಯವರು. ಈಕೆಗೆ ಮದುವೆಯಾಗಿ ಸುಮಾರು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಮಗುವಿನ ಮೇಲಿನ ಆಸೆಯಿಂದ ಕಿಮ್ಸ್ ಆಸ್ಪತ್ರೆಗೆ ತೆರಳಿದ್ದಾಳೆ.
ಕಿಮ್ಸ್ ಆಸ್ಪತ್ರೆಯಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಅನಿತಾ ಎಂಬುವಳಿಗೆ 11 ದಿನದ ಮಗು ಇರುವುದನ್ನು ಗೊತ್ತು ಮಾಡಿಕೊಂಡ ಸುರೇಖಾ ಈಕೆಯ ಪರಿಚಯ ಮಾಡಿಕೊಂಡಿದ್ದಾಳೆ. ಬಳಿಕ ಮಗುವಿಗೆ ಇಂಜೆಕ್ಷನ್ ಕೊಡಿಸುವ ನೆಪದಲ್ಲಿ ಮಗುವನ್ನು ಕದ್ದೊಯ್ದಿದ್ದಳು.[ಆತ್ಮರಕ್ಷಕ ಕೈಗಡಿಯಾರ, ಇನ್ಮುಂದೆ ನಿಮ್ಮ ಮಕ್ಕಳು ಸೇಫ್]
ಈಕೆ ಮಗು ಕದ್ದೊಯ್ಯುತ್ತಿರುವುದು ಆಸ್ಪತ್ರೆಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಅಲ್ಲದೇ ಸುರೇಖಾ ಬಳಿ ಯಾವುದೋ ಅರಿಚಿತ ಮಗುವಿದೆ ಎಂದು ಸ್ಥಳೀಯರು ನೀಡಿದ ದೂರಿನ ಆಧಾರದ ಮೇಲೆ ಆಕೆಯನ್ನು ಹುಬ್ಬಳ್ಳಿ ವಿದ್ಯಾನಗರ ಪೊಲೀಸರು ಬಂಧಿಸಿದ್ದರು.