ಯಾಕೆ ಕೆಜೆಪಿ ಕಟ್ಟಿದ್ರಿ, ಯಾಕೆ ವಾಪಸ್ ಬಂದ್ರಿ: ಈಶ್ವರಪ್ಪ
ದಾವಣಗೆರೆ, ಸೆಪ್ಟೆಂಬರ್ 14: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪನವರು ಬಗಲಲ್ಲಿ ದೊಣ್ಣೆ, ಬಾಯಲ್ಲಿ ಬೆಣ್ಣೆಯಂಥ ಮಾತು ಯಾಕೆ ಆಡ್ತಿದ್ದಾರೋ ಗೊತ್ತಿಲ್ಲ. ಈಗ ಮತ್ತೆ ಯಡಿಯೂರಪ್ಪನವರನ್ನ ತಡವಿಕೊಂಡಿದ್ದಾರೆ. ಒಂದು ಕಡೆ ಅವರೇ ನಮ್ಮ ಸಿಎಂ ಕ್ಯಾಂಡಿಡೇಟ್ ಅಂತ ಹೇಳ್ತಾರೆ. ಮತ್ತೊಂದು ಕಡೆ ಅವರ ಜತೆಗೆ ಸಣ್ಣ-ಪುಟ್ಟ ಅಸಮಾಧಾನ ಇದೆ ಅಂತಾರೆ.
ದಾವಣಗೆರೆಯಲ್ಲಿ ಮಂಗಳವಾರ ರಾಯಣ್ಣ ಬ್ರಿಗೇಡ್ ನ ಸಭೆಯೊಂದು ಆಗಿದೆ. ಅದರಲ್ಲಿ ಯಥಾ ಪ್ರಕಾರ ಯಡಿಯೂರಪ್ಪನವರಿಗೆ ಟಾಂಗ್ ಕೊಟ್ಟಿದ್ದಾರೆ. ರಾಯಣ್ಣ ಬ್ರಿಗೇಡ್ ಅಂದರೆ ಕೆಜೆಪಿ ಅಲ್ಲ. ಯಾರ ಕೇಳಿ ಕೆಜೆಪಿ ಕಟ್ಟಿದ್ರಿ? ವಾಪಸ್ ಬಂದ್ರಿ. ಎಲ್ಲರನ್ನೂ ಜೊತೆಯಾಗಿ ಹೋಗೋಣ ಅಂದವರು ನೋವು ಮಾಡಿದ್ರಿ ಎಂದು ಈಶ್ವರಪ್ಪ ತಮ್ಮ ಮಾಮೂಲಿ ಧಾಟಿಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.[ರಾಯಣ್ಣ ಬ್ರಿಗೇಡ್ ಈಶ್ವರಪ್ಪ ಮುಖವಾಡ: ಮೊಯಿಲಿ ಟಾಂಗ್]
ಈಗ ಮತ ಕೇಳೋಕೆ ಹೋದರೆ ಜನರು, ನಿಮ್ಮನ್ನ ನಂಬೋದು ಹೇಗೆ ಅಂತಿದ್ದಾರೆ. ಬಿಜೆಪಿ ಕಟ್ಟೋದಿಕ್ಕೆ ಲಕ್ಷಾಂತರ ಜನ ಬೆವರು ಹರಿಸಿದ್ದಾರೆ. ಇದನ್ನು ನಾಶ ಮಾಡೋದಿಕ್ಕೆ ಯಾರಿಗೂ ಅಧಿಕಾರ ಇಲ್ಲ. ಕಾರ್ಯಕರ್ತರ ನೋವಿನ ಬಗ್ಗೆ ಹೈಕಮಾಂಡ್ ಹತ್ತಿರ ಹೇಳಿಬಂದೆ. ನೋವು ತಡೆದುಕೊಂಡು ಸುಮ್ಮನೆ ಇರೋದು ಸಾಧ್ಯವೇ ಇಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಆ ನಂತರ ಯಥಾಪ್ರಕಾರ, ಯಡಿಯೂರಪ್ಪನವರೇ ನಮ್ಮ ಸಿಎಂ ಕ್ಯಾಂಡಿಡೇಟು. ನಮ್ಮ ಮಧ್ಯೆ ಸಣ್ಣ ಅಸಮಾಧಾನ ಇದೆ. ನಾವು ಶೀಘ್ರದಲ್ಲೇ ಒಂದಾಗ್ತೀವಿ. ಆಗಲಿಲ್ಲ ಅಂದರೆ ಕೇಂದ್ರದ ಲೀಡರ್ ಗಳೇ ತಲೆಗೆ ಮೊಟಕ್ತಾರೆ. ಅಧಿಕಾರ ಸಿಕ್ಕಾಗ ಕಿತ್ತಾಡಿದ್ವಿ. ರೇಣುಕಾಚಾರ್ಯನಿಂದಾಗಿ ರೆಸಾರ್ಟ್ ಗಳನ್ನ ನೋಡೋ ಹಾಗಾಯಿತು ಅಂದ ಈಶ್ವರಪ್ಪ, ಮುಂದಿನ ದಿನಗಳಲ್ಲಿ ಯಡಿಯೂರಪ್ಪನವರೂ ರಾಯಣ್ಣ ಬ್ರಿಗೇಡ್ ನ ಒಪ್ತಾರೆ ಎಂದಿದ್ದಾರೆ.['ಚಟುವಟಿಕೆಯಿಂದ ಇರುವ ಮಗು ಕಂಡರೆ ಯಾರೂ ಸಹಿಸುವುದಿಲ್ಲ']
ಕಳೆದ ಸಲ ಬಿಜೆಪಿಗೆ ಅಧಿಕಾರ ಸಿಕ್ಕಿ, ಆ ನಂತರ ಎರಡನೇ ಅವಧಿಗೆ ಗೆಲ್ಲಲಾರದೆ ಕಳೆದುಕೊಂಡಿದ್ದು ಗರ್ಭಪಾತವಾದ ಹಾಗೆ ಆಯಿತು. ಈ ಸಲ ಈಶ್ವರಪ್ಪ, ಯಡಿಯೂರಪ್ಪನವರ ಕಿತ್ತಾಟ ನೋಡ್ತಿದ್ದರೆ ಗರ್ಭ ಕಟ್ಟೋದು ಕೂಡ ಅನುಮಾನ ಆಗ್ತಿದೆ ಎಂದು ದಾವಣಗೆರೆಯ ಮುರಳಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.