ದಾವಣಗೆರೆಯಲ್ಲಿ ತಂದೆ, ತಾಯಿ, ಬಂಧು-ಬಳಗವಿಲ್ಲದ ನೇತ್ರಾಳ ಮದುವೆ
ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ತಂದೆ-ತಾಯಿ, ಬಂಧುಗಳಿಲ್ಲದ ಹೆಣ್ಣುಮಗಳೊಬ್ಬಳ ಮದುವೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಾಗರಾಜ ನರಸಿಂಹ ಭಟ್ಟ ಅವರ ಜತೆಗೆ ಮಾರ್ಚ್ 1ರಂದು ಆಗಿದೆ
ದಾವಣಗೆರೆ, ಮಾರ್ಚ್ 2: ವಿವಾಹ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತು ಜನಜನಿತವಾದದ್ದು. ಆದರೆ ಈಚೆಗೆ ಎಷ್ಟೋ ಸಮುದಾಯದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯೇ ಕಡಿಮೆಯಾಗಿ ಮದುವೆಯೇ ಆಗುತ್ತಿಲ್ಲ. ಅಥವಾ ತುಂಬ ತಡವಾಗಿ ಮದುವೆ ಆಗುತ್ತಿದೆ. ಇಂಥ ಸನ್ನಿವೇಶದಲ್ಲಿ ಜಾತಿಯನ್ನು ಮೀರಿದಂಥ, ಆದರ್ಶ ಎನಿಸುವಂಥ ಮದುವೆಗಳಿಗೆ ಸಾಕ್ಷಿಯಾಗುತ್ತಿದ್ದೇವೆ.
ದಾವಣಗೆರೆಯ ಶ್ರೀರಾಮನಗರದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ (ಮಾರ್ಚ್ 1) ಮಾಮೂಲಿಗಿಂತ ಭಿನ್ನವಾದ ಮದುವೆ ನಡೆಯಿತು. ತಂದೆ-ತಾಯಿ, ಬಂಧು-ಬಳಗ ಯಾರೂ ಇಲ್ಲದ ನೇತ್ರಾ ಎಂಬ ಹೆಣ್ಣುಮಗಳು ನಾಗರಾಜ ನರಸಿಂಹ ಭಟ್ಟ ಅವರನ್ನು ಮದುವೆಯಾದರು.[ಮದುವೆ ಮುರಿದಿದ್ದಕ್ಕೆ ರಾಜರಾಜೇಶ್ವರಿ ನಗರ ಯುವತಿ ಆತ್ಮಹತ್ಯೆ]
ರಾಜ್ಯ ಮಹಿಳಾ ನಿಲಯ 1977ರಲ್ಲಿ ಆರಂಭವಾಗಿದ್ದು ಈವರೆಗೆ ಇಲ್ಲಿ 22 ಮದುವೆ ಹಾಗೂ 15 ನಾಮಕರಣ ನಡೆದಿವೆ. ಸದ್ಯಕ್ಕೆ 67 ಮಂದಿ ಇಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನು ಈಗ ನೇತ್ರಾ ಅವರನ್ನು ಮದುವೆ ಆಗಿರುವವರು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕು ಉಪಳೇಶ್ವರ ಹುತ್ಕಂಡ ಗ್ರಾಮದ ನಾಗರಾಜ ನರಸಿಂಹ ಭಟ್ಟ.
ಇವರ ಕೌಟುಂಬಿಕ, ಸಾಮಾಜಿಕ, ಆರ್ಥಿಕ ಜೀವನದ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಪರಿವೀಕ್ಷಣಾಧಿಕಾರಿಗಳು, ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಉತ್ತಮ ಅಭಿಪ್ರಾಯ ಸೂಚಿಸಿ, ಮದುವೆ ಮಾಡಿಕೊಡಬಹುದೆಂದು ಸ್ಪಷ್ಟ ಅಭಿಪ್ರಾಯ ನೀಡಿದ ನಂತರವಷ್ಟೇ ವಿವಾಹ ನೆರವೇರಿಸಲಾಯಿತು.['ಹುಬ್ಳಿ ಹುಡ್ಗ'ನ ಢಿಪರೆಂಟ್ ಮದುವೆ ಆಮಂತ್ರಣ ನೋಡಿದ್ದೀರಾ?]
ಇನ್ನು ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಉಮಾ ಎಂ ಪಿ ರಮೇಶ್, ಮೇಯರ್ ರೇಖಾ ನಾಗರಾಜ್, ಜಿಲ್ಲಾಧಿಕಾರಿ ಡಿಎಸ್ ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಎಸ್ ಗುಳೇದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್ ಅಶ್ವತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.