ಚಿನ್ನ ಖರೀದಿಸುವ ನೆಪದಲ್ಲಿ ಗುಂಡು ಹಾರಿಸಿದ ದುಷ್ಕರ್ಮಿಗಳು
ಜಮೀನಿನಲ್ಲಿ ಸಿಕ್ಕ ಚಿನ್ನವನ್ನು ಖರೀದಿಸುವುದಾಗಿ ಹೇಳಿಕೊಂಡು ಬಂದಿದ್ದ ಇಬ್ಬರು ದುಷ್ಕರ್ಮಿಗಳು ದಾವಣಗೆರೆಯಲ್ಲಿ ಸಂತೋಷ್ ಕುಮಾರ್ ಎಂಬುವವರ ಮೇಲೆ ಗುಂಡು ಹಾರಿಸಿ, ಪರಾರಿಯಾಗಿದ್ದಾರೆ.
ದಾವಣಗೆರೆ, ಏಪ್ರಿಲ್ 17: ಜಮೀನಿನಲ್ಲಿ ಸಿಕ್ಕಿದ್ದ ಚಿನ್ನವನ್ನು ಖರೀದಿಸುವುದಾಗಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರಿಗೆ ಗುಂಡು ಹಾರಿಸಿ, ಪರಾರಿಯಾಗಿದ್ದಾರೆ. ಹರಪನಹಳ್ಳಿಯ ಸಂತೋಷ್ ಎಂಬಾತನಿಗೆ ಈಚೆಗೆ ಜಮೀನಿನಲ್ಲಿ ಚಿನ್ನ ಸಿಕ್ಕಿತ್ತು. ಆ ದಿನ ಒಂದು ಕರೆ ಬಂದಿತ್ತು. ಆಗ ಸಂತೋಷ್ ತನ್ನ ಬಳಿ ಇರುವ ಚಿನ್ನವನ್ನು ಕಡಿಮೆ ಬೆಲೆಗೆ ಮಾರುವುದಾಗಿ ತಿಳಿಸಿದ್ದ.
ಚಿನ್ನ ಖರೀದಿ ಬಗ್ಗೆ ಫೋನ್ ನಲ್ಲಿ ಮಾತನಾಡೋದು ಬೇಡ ಎಂದು ಅಪರಿತರು ಹೇಳಿದ್ದಕ್ಕೆ, ನೀಲಗುಂದ ಕ್ರಾಸ್ ಬಳಿ ಬರುವಂತೆ ಸಂತೋಷ್ ತಿಳಿಸಿದ್ದಾನೆ. ಏಪ್ರಿಲ್ 15ನೇ ತಾರೀಕು ನೀಲಗುಂದ ಕ್ರಾಸ್ ಬಳಿ ಬಂದ ದುಷ್ಕರ್ಮಿಗಳು, ಕೆಇಬಿ ಕಚೇರಿ ಬಳಿಯ ಡಾಬಾ ಹಿಂಭಾಗಕ್ಕೆ ಕರೆದೊಯ್ದಿದ್ದಾರೆ.[ಬೈದನೆಂದು ಗೆಳೆಯನ ಮಗುವನ್ನೇ ಅಪಹರಿಸಿದ ಪೇಂಟರ್!]
ಮೊದಲು ಹಣ ತೋರಿಸಿ, ಆ ಮೇಲೆ ಬಂಗಾರ ಕೊಡ್ತೀನಿ ಎಂದು ಸಂತೋಷ್ ಹೇಳಿದ್ದಾನೆ. ಆಗ ಅಪರಿಚಿತರು ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದಾರೆ. ಅದು ಬಲತೊಡೆಗೆ ತಗುಲಿದೆ. ಸಂತೋಷ್ ಜೋರಾಗಿ ಕಿರುಚಿಕೊಳ್ಳುತ್ತಿದ್ದಂತೆ ಇಬ್ಬರು ಅಲ್ಲಿಂದ ಓಡಿ ಹೋಗಿದ್ದಾರೆ. ಸದ್ಯಕ್ಕೆ ಸಂತೋಷ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.