ಚಿತ್ರದುರ್ಗದ ಹಳ್ಳಿಯಲ್ಲಿ ಬಾಲಕನ ಬೆತ್ತಲೆ ಮೆರವಣಿಗೆ ಮಾಡಿದವರಿಗೆ ಧಿಕ್ಕಾರ
ಚಿತ್ರದುರ್ಗ, ಜೂನ್ 16 : ಬರಪೀಡಿತ ಪ್ರದೇಶದಲ್ಲಿ ಮಳೆಗಾಗಿ ಕತ್ತೆಗಳ ವಿವಾಹ, ನಾಯಿ-ನರಿಗಳ ಮದುವೆ, ಕಪ್ಪೆಗಳ ಲಗ್ನ ಮಾಡಿದ್ದನ್ನು ನೋಡಿದ್ದೇವೆ. ಆದರೆ, ಒಬ್ಬ ಅಮಾಯಕ ಬಾಲಕನನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿಸಿದ್ದನ್ನು ಎಲ್ಲಾದರೂ ನೋಡಿದ್ದೀರಾ ಅಥವಾ ಕೇಳಿದ್ದೀರಾ?
ಇಂಥದೊಂದು ಅಸಹ್ಯಕರ, ಅಮಾನವೀಯ, ಮೂಢನಂಬಿಕೆಯ ಪರಮಾವಧಿಯಿಂದ ಕೂಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಗ್ರಾಮವೊಂದರಲ್ಲಿ ಜರುಗಿದೆ. ಈ ಘಟನೆ ಇಡೀ ದೇಶದ ಮುಂದೆ ನಾಡಿನ ಜನ ತಲೆತಗ್ಗಿಸುವಂತೆ ಮಾಡಿದೆ. ಚಿತ್ರದುರ್ಗ ಭಯಂಕರ ಬರ ಎದುರಿಸಿದ್ದೇನೋ ಸರಿ, ಆದರೆ ಮಳೆ ಬರಲೆಂದು ಹೀಗೆ ಮಾಡಿದ್ದು ಎಷ್ಟು ಸರಿ?
ಆಗಿದ್ದೇನು? : ಗ್ರಾಮಸ್ಥರೆಲ್ಲ ಸೇರಿ ಬಾಲಕನನ್ನು ಪೂರ್ತಿ ಬೆತ್ತಲಾಗಿಸಿದ್ದಾರೆ. ನಂತರ ಹೂವಿನಿಂದ ಅವನನ್ನು ಅಲಂಕರಿಸಿದ್ದಾರೆ. ಆತನ ಕೈಗೆ ಒಂದು ಗಣಪತಿಯ ಮೂರ್ತಿ ಕೊಟ್ಟು ಹಳ್ಳಿಯ ಬೀದಿಬೀದಿಗಳಲ್ಲಿ ಮೆರವಣಿಗೆ ಮಾಡಿಸಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. [ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!]
ಮೆರವಣಿಗೆ ಸಾಗುತ್ತಿದ್ದಾಗ ಆತನ ತಲೆಯ ಮೇಲೆ ತಣ್ಣೀರು ಸುರಿಯುತ್ತಲೇ ಇದ್ದರು. ನೀರಿಗಾಗಿ ಇಷ್ಟೆಲ್ಲಾ ಮಾಡುತ್ತಿರುವಾಗ ತಣ್ಣೀರನ್ನು ಅನಗತ್ಯವಾಗಿ ವ್ಯಯ ಮಾಡುವ ಅಗತ್ಯವೇನಿತ್ತು? ಆಮೇಲೆ ಮಾಡಿದ್ದೇನೆಂದರೆ, ಮೆರವಣಿಗೆ ಮಾಡಿಸಿದ ನಂತರ ಹತ್ತಿರದಲ್ಲಿರುವ ನದಿಗೆ ಕರೆದುಕೊಂಡು ಹೋಗಿ ಅಲ್ಲಿ ಗಣಪತಿ ವಿಗ್ರಹವನ್ನು ವಿಸರ್ಜನೆ ಮಾಡಿದ್ದಾರೆ.
ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು ಏನೋ ಮಂತ್ರ ಗುನುಗುನಿಸುತ್ತಲೇ ಇದ್ದರು. ಹಳ್ಳಿಗರು ಏನು ಮಾಡುತ್ತಿದ್ದಾಕೆ, ಯಾಕೆ ಮಾಡುತ್ತಿದ್ದಾರೆ, ತನ್ನನ್ನೇಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಯಾವ ಅರಿವೂ ಆ ಬಾಲಕನಿಗಿರಲಿಲ್ಲ. ಹಳ್ಳಿಗರು ಹೇಳಿದಂತೆ ಸುಮ್ಮನೆ ನಡೆಯುತ್ತಿದ್ದ, ಅವರು ಹೇಳಿದಂತೆ ಮಾಡುತ್ತಿದ್ದ. [ಮುನಿಸಿಕೊಂಡಿರುವ ವರುಣ ಮಹಾಶಯನಿಗಾಗಿ ಕತ್ತೆಗಳ ಮದುವೆ]
ಸಿನೆಮಾಗಳಲ್ಲಿ ಕಳ್ಳ ಲೂಟಿ ಹೊಡೆದುಕೊಂಡು ಹೋದಮೇಲೆ ಪೊಲೀಸರು ಪೀಪಿ ಊದುತ್ತ ಬರುವ ಹಾಗೆ, ಮೂಢನಂಬಿಕೆಯ ದಾಸರಿಂದ ಇಂಥ ನಿರ್ಲಜ್ಜ ಘಟನೆ ನಡೆದುಹೊದ ಮೇಲೆ ಮಾನವ ಹಕ್ಕು ಆಯೋಗ ಚಕಾರವೆತ್ತಿದೆ. ಇಂಥ ಸಂಪ್ರದಾಯ ಕೂಡಲೆ ನಿಲ್ಲಿಸುವಂತೆ ಮನವಿ ಮಾಡಿದೆ. [ಮೂಢನಂಬಿಕೆ: ಮುಖ್ಯಮಂತ್ರಿಗಳಿಗೆ ನಟ ಶಿವಣ್ಣ ನೀಡಿದ ಗಂಭೀರ ಸಲಹೆ]
ಇಡೀ ಘಟನೆ ವಿಡಿಯೋ ರೆಕಾರ್ಡ್ ಆಗಿದ್ದು, ಇದರಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಬೆದರಿ ಒಡ್ಡಿದೆ. ಹಾಗೆಯೆ, ಒಂದು ವರದಿ ಸಲ್ಲಿಸುವಂತೆ ಜಿಲ್ಲಾ ಅಧಿಕಾರಿಗಳಿಗೆ ಮನವಿಯನ್ನೂ ಮಾಡಿದೆ.
ಅಚ್ಚರಿಯ ಸಂಗತಿಯೆಂದರೆ, ಮೌಢ್ಯ ನೇಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಸಿದ್ದರಾಮಯ್ಯ ಸರಕಾರ ಘನವಾಗಿ ಯೋಚಿಸುತ್ತಿರುವಾಗಲೇ ಇಂಥದೊಂದು ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಚಿತ್ರದುರ್ಗದ ಶಾಸಕ ಜಿಎಚ್ ತಿಪ್ಪಾರೆಡ್ಡಿಯವರು ಇದಕ್ಕೆ ಏನೆನ್ನುತ್ತಾರೆ? [ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಪಣತೊಟ್ಟ ಸಿದ್ದು]