ವಾಣಿವಿಲಾಸ ಸಾಗರದಲ್ಲಿ ವರುಣನ ಕೃಪೆಗಾಗಿ ಮೈಸೂರು ರಾಜಮನೆತನದ ಪೂಜೆ
ಚಿತ್ರದುರ್ಗ, ಮೇ 30: ವರುಣನ ಕೃಪೆಗಾಗಿ ಪ್ರಾರ್ಥಿಸಿ ಮೈಸೂರಿನ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಿತ್ರದುರ್ಗದ ವಾಣಿವಿಲಾಸ ಸಾಗರದಲ್ಲಿ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಚಂಡಿ ಹೋಮ, ರುದ್ರ ಹೋಮ ಹಾಗೂ ಪರ್ಜನ್ಯ ಜಪ ಕೂಡ ಮಾಡಲಾಗಿದೆ. ಅದಕ್ಕೂ ಮೊದಲು ಗಂಗಾ ಪೂಜೆ ಸಲ್ಲಿಸಲಾಗಿದೆ.
ಹಿರಿಯೂರು ತಾಲೂಕಿನ ಸಮೀಪ ಇರುವ ವಾಣಿವಿಲಾಸ ಸಾಗರಕ್ಕೆ ಮಾರಿ ಕಣಿವೆ ಅಂತಲೂ ಹೆಸರಿದೆ. ರಾಜ್ಯದಲ್ಲೇ ತುಂಬ ಹಳೆಯದಾದ ಅಣೆಕಟ್ಟು ಇದು. ಈ ಅಣೆಕಟ್ಟಿನ ಕೆಲಸ ಆರಂಭಿಸಿದವರು ಮಹಾರಾಣಿ ಕೆಂಪ ನಂಜಮ್ಮಣಿ ವಾಣಿವಿಲಾಸ ಸನ್ನಿಧಾನ. ಅವರು ತಮ್ಮ ಸಮಾಜ ಸೇವಾ ಕಾರ್ಯಗಳಿಂದ ಬಹಳ ಹೆಸರಾಗಿದ್ದವರು.[ಬೆಂಗ್ಳೂರಲ್ಲಿ ಮಹಾ ಮಳೆ, ದುರ್ಗದಲ್ಲಿ ಬೇಯುತಿದೆ ಇಳೆ (ವಿಶೇಷ ವರದಿ)]
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಯದುವೀರ ಒಡೆಯರ್, ಇಂಥ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದೇ ಸಂತೋಷ. ಜತೆಗೆ ಸ್ಥಳೀಯರೊಂದಿಗಿನ ಮಾತುಕತೆ ಇನ್ನಷ್ಟು ಹೆಮ್ಮೆ ಮೂಡಿಸುತ್ತದೆ. ನಮ್ಮ ಕುಟುಂಬದ ಹಿರಿಯರ ದೂರದೃಷ್ಟಿಯಿಂದ ನಿರ್ಮಾಣಗೊಂಡ ಈ ಅಣೆಕಟ್ಟು ಇಂದಿಗೂ ಸ್ಥಳೀಯರಿಗೆ ಪ್ರಯೋಜನವಾಗುತ್ತಿರುವುದು ಹೆಮ್ಮೆ ಎಂದು ಆವರು ಹೇಳಿಕೊಂಡಿದ್ದಾರೆ.
ಚಿತ್ರದುರ್ಗದಲ್ಲಿ ಬರಗಾಲ
ಚಿತ್ರದುರ್ಗ ಜಿಲ್ಲೆಯಲ್ಲಿ ಬರಗಾಲದಿಂದ ಪರಿತಪಿಸುವಂತಾಗಿದೆ. ರಾಜ್ಯದ ಕೆಲವೆಡೆ ಒಳ್ಳೆ ಮಳೆಯಾಗುತ್ತಿದ್ದರೆ, ಹಲವೆಡೆ ಬರಗಾಲದ ಸ್ಥಿತಿಯೇ ಇದೆ. ಇಂಥ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥಿಸಿ ಮೈಸೂರು ರಾಜಮನೆತನದವರು ಪೂಜೆ ಸಲ್ಲಿಸಿದ್ದಾರೆ.
ಪರ್ಜನ್ಯ ಜಪದಿಂದ ಮಳೆ
ಪರ್ಜನ್ಯ ಜಪ ಮಾಡಿದರೆ ಮಳೆ ಬರುತ್ತದೆ ಎಂಬುದು ಹಿಂದೂ ಧರ್ಮದಲ್ಲಿ ಅನಾದಿ ಕಾಲದಿಂದಲೂ ಇರುವ ನಂಬಿಕೆ. ಆ ಕಾರಣದಿಂದ ಪರ್ಜನ್ಯ ಜಪ ಕೂಡ ಮಾಡಿಸಲಾಗಿದೆ.
ಉತ್ತಮ ಮಳೆಗಾಗಿ ಪ್ರಾರ್ಥಿಸೋಣ
ಇದೇ ವೇಳೆ ಮೊದಲಿಗೆ ಗಂಗಾಪೂಜೆ ಸಲ್ಲಿಸುವುದು ಕೂಡ ಉತ್ತಮ ಮಳೆಯಾಗಿ ಎಲ್ಲೆಡೆ ಸಮೃದ್ಧವಾಗಿ ನೀರು ಸಿಗಲಿ ಎಂಬ ಕಾರಣಕ್ಕಾಗಿಯೇ. ಕಳೆದ ಎರಡ್ಮೂರು ವರ್ಷಗಳಿಂದ ರಾಜ್ಯದಲ್ಲಿ ಸರಿಯಾದ ಮಳೆಯಾಗಿಲ್ಲ. ಈ ಬಾರಿಯಾದರೂ ಉತ್ತಮ ಮಳೆಯಾಗಲಿ ಎಂದು ನಾವು ಕೂಡ ದೇವರನ್ನು ಪ್ರಾರ್ಥಿಸೋಣ.
ರೈತರ ಸಾಲ ಮನ್ನಾಗೆ ಆಗ್ರಹ
ರಾಜ್ಯ್ ಸರಕಾರ ರೈತರ ಸಾಲ ಮನ್ನಾ ಮಾಡಲಿ ಎಂಬುದು ಹಲವರ ಒತ್ತಾಯವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಧ್ಯವಿಲ್ಲ ಎಂದು ಹೇಳಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷ ತಾವು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದುಬಂದರೆ ಇಪ್ಪತ್ನಾಲ್ಕು ಗಂಟೆಯೊಳಗೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಾರೆ.