'ಹನುಮಂತನ' ಸಾವಿಗೆ ಕಾರಣವಾಯಿತೇ ಭ್ರಷ್ಟಾಚಾರ?
ಚಿತ್ರದುರ್ಗ, ಫೆಬ್ರವರಿ, 12: ಪ್ರೇಮ ವೈಫಲ್ಯ, ಸಾಲದ ಶೂಲ, ಪರೀಕ್ಷೆಯಲ್ಲಿ ಅನುತ್ತೀರ್ಣ, ಜೀವನದಲ್ಲಿ ಜಿಗುಪ್ಸೆ ಹೀಗೆ ಹತ್ತು ಹಲವು ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವರನ್ನು ನೋಡಿದ್ದೇವೆ, ಕಂಡಿದ್ದೇವೆ.
ಆದರೆ ಇಲ್ಲೊಬ್ಬರು ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೊಡ್ಡದಾಗಿ ಕೂಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತ್ತ ಯೋಧ ಹನುಮಂತಪ್ಪ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದರೆ , ಇತ್ತ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಕೊಮ್ಮನಪಟ್ಟಿ ಗ್ರಾಮದ ಬಳಿ ಶಿರಾ ತಾಲೂಕು ತಾಳಿಕಟ್ಟೆಯ ಹನುಮಂತ ವಿದ್ಯುತ್ ಟವರ್ ಏರಿ ಕೆಳಕ್ಕೆ ಜಿಗಿದಿದ್ದಾರೆ.[ಚಿತ್ರದುರ್ಗ ಅಕ್ಕಿ ಮೂಟೆಯಲ್ಲಿ ಸಿಕ್ಕ ಹಣವೆಷ್ಟು]
ಸಮಾಜದಲ್ಲಿನ ಅನ್ಯಾಯ, ಅಕ್ರಮ ಕಂಡು ಬೇಸತ್ತಿದ್ದೇನೆ. ಇದನ್ನೆಲ್ಲ ನೋಡಿ ನಾನು ಬದುಕಲು ಇಷ್ಟಪಡುವುದಿಲ್ಲ' ಎಂದು ಹೇಳುತ್ತಲೇ ಹನುಮಂತ ವಿದ್ಯುತ್ ಟವರ್ ಏರಿದ್ದಾನೆ. ಗ್ರಾಮಸ್ಥರು ಹನುಂತನ ಹುಚ್ಚಾಟವನ್ನ ನೋಡಿ ಅಗ್ನಿ ಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಹನುಮಂತನ ಮನವೊಲಿಸಲು ನಡೆಸಿದ ಎಲ್ಲ ಪ್ರಯತ್ನಿಸಿದರು.[ವೀರ ಯೋಧ ಹನುಮಂತಪ್ಪ ಕೊಪ್ಪದ್]
ಆದರೆ ಯಾರ ಮಾತನ್ನೂ ಕೇಳದೆ ನೋಡುನೋಡುತ್ತಿದ್ದಂತೆ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿಗೆ ಶರಣಾದವನ ಮಾನಸಿಕ ಸ್ಥಿತಿ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ.