ಅಮ್ಮ ನಿಧನದ ನಂತರ ಮೊದಲ ಸಂಪುಟ ಸಭೆ ಇಂದು: ಒಪಿಎಸ್ ಏನ್ಮಾಡ್ತಾರೆ?
ಮುಖ್ಯಮಂತ್ರಿ ಸ್ಥಾನವನ್ನು ತಾಕಾಲಿಕವಾಗಿ ವಹಿಸಿಕೊಂಡಾಗೆಲ್ಲ ಒ.ಪನ್ನೀರ್ ಸೆಲ್ವಂ ಅವರು ಜಯಲಲಿತಾ ಕುರ್ಚಿಯಲ್ಲಿ ಸಹ ಕೂರುತ್ತಿರಲಿಲ್ಲ. ಈಗ ಅಮ್ಮ ಇಲ್ಲ. ಶನಿವಾರ ಸಂಪುಟ ಸಭೆಯಲ್ಲಿ ಒಪಿಎಸ್ ಹೇಗಿರ್ತಾರೆ ಎಂಬುದು ಕುತೂಹಲ ಕೆರಳಿಸಿದೆ.
ಚೆನ್ನೈ, ಡಿಸೆಂಬರ್ 10: ಜಯಲಲಿತಾ ನಿಧನದ ನಂತರ ತಮಿಳುನಾಡಿನ ಸಂಪುಟ ಸಬೆ ಇದೇ ಮೊದಲ ಬಾರಿಗೆ ಶನಿವಾರ ನಡೆಯಲಿದೆ. ಈ ಸಭೆಯ ಬಗ್ಗೆ ವಿಪರೀತ ಕುತೂಹಲವಿದ್ದು, ಎಐಎಡಿಎಂಕೆ ಸರ್ವೋಚ್ಚ ನಾಯಕಿಯ ಗೈರಿನಲ್ಲಿ ಪಕ್ಷ ಹಾಗೂ ಸರಕಾರ ಹೇಗೆ ಕರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಹಲವರು ಗಮನಿಸಲಿದ್ದಾರೆ.
ಈಗಾಗಲೇ ಹಲವು ಪ್ರಶ್ನೆಗಳಿವೆ. ಜಯಲಲಿತಾ ಅವರು ಕೂರುತ್ತಿದ್ದ ಕುರ್ಚಿಯಲ್ಲಿ ಕೂತು ಒ.ಪನ್ನೀರ್ ಸೆಲ್ವಂ ಸಭೆ ನಡೆಸುತ್ತಾರಾ ಎಂಬ ಬಗ್ಗೆ ಕೂಡ ಪ್ರಶ್ನೆಯಿದೆ. ಈ ಹಿಂದೆ ಎರಡು ಬಾರಿ ತಾತ್ಕಾಲಿಕವಾಗಿ ಸಿಎಂ ಸ್ಥಾನ ಅಲಂಕರಿಸಿದ್ದ ಪನ್ನೀರ್ ಸೆಲ್ವಂ ಅಮ್ಮನ ಕುರ್ಚಿಯ ಮೇಲೆ ಕೂರಲು ನಿರಾಕರಿಸಿದ್ದರು.[ಎಐಎಡಿಎಂಕೆ ಉಳಿಯತ್ತಾ, ಒಗ್ಗಟ್ಟು ಇರುತ್ತಾ-ಶಶಿಕಲಾ ನಡೆ ಏನು?]
ಅಮ್ಮನ ಬಗ್ಗೆಗಿನ ಭಯ/ಗೌರವ/ಪ್ರೀತಿ ಈ ಹಿಂದಿನ ಸಂಪುಟ ಸಭೆಯಲ್ಲಿ ನಿಚ್ಚಳವಾಗಿ ಕಾಣುತ್ತಿದ್ದವು. ಸಭೆ ಆರಂಭವೇ ಪನ್ನೀರ್ ಸೆಲ್ವಂ ಕಣ್ಣೀರಿನ ಜತೆ ಆಗಲಿದೆ. ಬೇರೆಯವರೂ ತಮ್ಮ ಕಣ್ಣೀರು ಒರೆಸಿಕೊಳ್ಳುತ್ತಾರೆ. ಅಮ್ಮನ ಕುರ್ಚಿ ಖಾಲಿ ಇರಲಿದೆ. ಅದರೆ ಅಮ್ಮನೇ ಇನ್ನೂ ಅಧಿಕಾರ ನಡೆಸುತ್ತಿದ್ದಾರೇನೋ ಎಂಬಂತೆ ಅಲ್ಲಿ ಜಯಲಲಿತಾ ಅವರ ಫೋಟೋ ಇರಲಿದೆ.
ಅಮ್ಮನ ಗೈರಿನಲ್ಲಿ ಪನ್ನೀರ್ ಸೆಲ್ವಂ ನಡವಳಿಕೆಗಳು ಬಹಳ ಪ್ರಚಾರಕ್ಕೆ ಬಂದಿದ್ದವು. ಅಕ್ರಮ ಆಸ್ತಿ ಪ್ರಕರಣದಲ್ಲಿ ಜಯಲಲಿತಾ ಜೈಲಿನಲ್ಲಿದ್ದಾಗ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಆತ ಕಣ್ಣಿರು ಹಾಕಿದ್ದರು. ಇನ್ನು ಬಜೆಟ್ ಮಂಡನೆ ವೇಳೆ ಅಮ್ಮನ ಫೋಟೋ ಹಾಕಿದ್ದ ಬ್ರೀಫ್ ಕೇಸ್ ತಂದು ಗಮನ ಸೆಳೆದಿದ್ದರು.[ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ]
ರಾಜಕೀಯ ತಜ್ಞರ ದೃಷ್ಟಿಯೆಲ್ಲ ಈಗ ಪನ್ನೀರ್ ಸೆಲ್ವಂ ಮೇಲಿದೆ. ತಮಿಳುನಾಡು ವಿಧಾನಸಭೆಯ ಮುಂದಿನ ಚುನಾವಣೆಗೆ ಇನ್ನೂ ದೀರ್ಘವಾದ ಅವಧಿಯಿದೆ. ಅಲ್ಲಿವರೆಗೆ ಈ ಹಿಂದಿನ ರೀತಿಯೇ ಆಡಳಿತ ನಡೆಸುತ್ತಾರಾ ಅಥವಾ ಜಯಲಲಿತಾ ನೆರಳಿನಿಂದ ಆಚೆ ಬಂದು ತಾನೊಬ್ಬ ನಾಯಕ ಎಂಬುದನ್ನು ತೋರಿಸುತ್ತಾರೆ ಎಂದು ಕಾದುನೋಡಬೇಕಿದೆ.