ಅಡ್ಡಾದಿಡ್ಡಿ ಭವಿಷ್ಯ ನಂಬಿ ಪತಿಯನ್ನೇ ಕೊಂದ ಪತ್ನಿ
ಚೆನೈ, ಡಿ. 15: ಅವರದ್ದೇನೂ ಹೊಸದಾಗಿ ಮದುವೆಯಾಗಿದ್ದ ಸಂಸಾರವಲ್ಲ. ಭರ್ತಿ 40 ವರ್ಷಗಳ ದಾಂಪತ್ಯ ಜೀವನ. ಆದರೆ ಜ್ಯೋತಿಷಿಯೊಬ್ಬನ ಎಡವಟ್ಟು ಸಲಹೆ ಹೆಂಡತಿಯೇ ಗಂಡನನ್ನು ಕೊಲೆ ಮಾಡುವಂತೆ ಮಾಡಿದೆ.
ಅಡ್ಡಾದಿಡ್ಡಿ ಭವಿಷ್ಯ ಹೇಳಿದ ಪರಿಣಾಮ ತಮಿಳುನಾಡಿನ ತಿರುವಳ್ಳುರ್ ಜಿಲ್ಲೆಯ ಪೆರಿಯಪಾಳ್ಯಂನ ಕನ್ನಿಗೈಪೈರ್ 61 ವರ್ಷದ ಮಹಿಳೆ 70 ವರ್ಷದ ತನ್ನ ಗಂಡನನ್ನು ಕೊಲೆಮಾಡಿದ್ದಾಳೆ.[ಟಿವಿ ಜ್ಯೋತಿಷ್ಯ ಶೋ ಬಂದ್ ಸಾಧ್ಯವಿಲ್ಲ: ನ್ಯಾಯಾಲಯ]
ವಿಜಯಲಕ್ಷ್ಮೀ ಎಂಬುವಳು ಪತಿ ಕತ್ತಿರ್ವೇಲನ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. 'ನಿಮ್ಮ ಗಂಡ ಸೊಸೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ' ಎಂದು ಜ್ಯೋತಿಷಿ ಹೇಳಿದ್ದೆ ಕೊಲೆಗೆ ಮೂಲ ಕಾರಣ.
ದಂಪತಿಗೆ ಒಬ್ಬ ಬುದ್ಧಿಮಾಂದ್ಯ ಮಗನಿದ್ದಾನೆ. ಅವನಿಗೆ ಕೆಲ ವರ್ಷಗಳ ಹಿಂದೆ ಮದುವೆ ಮಾಡಲಾಗಿತ್ತು. ಆದರೆ ಸೊಸೆ ಬೇರೆಯಾಗಿದ್ದಳು. ಆದರೆ ಕತ್ತಿರ್ವೇಲನ್ ಇವಳೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾನೆ ಎಂಬ ಶಂಕೆ ವಿಜಯಲಕ್ಷ್ಮೀಗೆ ಮೂಡಿದೆ. ಇದನ್ನು ಬಗೆಹರಿಸಿಕೊಳ್ಳಲು ಜ್ಯೋತಿಷಿ ಬಳಿ ತೆರಳಿದಾಗ ಆತ ಇಲ್ಲದ ಸಲಹೆ ನೀಡಿದ್ದಾನೆ.[ಅಡ್ಡಾದಿಡ್ಡಿ ಭವಿಷ್ಯ ಹೇಳುವವರ ವಿರುದ್ಧ ಭುಗಿಲೆದ್ದ ಕಿಡಿ]
ಮೊದಲೇ ಅನುಮಾನದಿಂದ ಕುದಿಯುತ್ತಿದ್ದ ವಿಜಯಲಕ್ಷ್ಮೀ ಗಂಡನನ್ನೇ ಕೊಲೆ ಮಾಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜ್ಯೋತಿಷಿ ಪತ್ತೆಗೆ ಬಲೆ ಬೀಸಿದ್ದಾರೆ.