ಅಕ್ರಮ ಆಸ್ತಿ ಪ್ರಕರಣದ ದೋಷಿ ಜಯಲಲಿತಾ ಆಸ್ತಿ ಏನಾಗುತ್ತೆ?
ಜಯಲಲಿತಾ ಅಕ್ರಮ ಆಸ್ತಿ ಪ್ರಕರಣದ ಅಂತಿಮ ತೀರ್ಪು ಬಂದ ನಂತರ ದಿವಂಗತ ಮುಖ್ಯಮಂತ್ರಿಯ ಆಸ್ತಿ ಏನಾಗುತ್ತದೆ ಎಂಬ ಪ್ರಶ್ನೆಗೆ ಈ ವರದಿಯಲ್ಲಿ ಉತ್ತರವಿದೆ
ಚೆನ್ನೈ, ಫೆಬ್ರವರಿ 14: ಶಶಿಕಲಾ ನಟರಾಜನ್ ಅವರ ಮುಖ್ಯಮಂತ್ರಿ ಗಾದಿ ಕನಸಿಗೆ ಎಳ್ಳು ನೀರು ಬಿಡುವಂತೆ ಮಾಡಿತು ಸುಪ್ರೀಂ ಕೋರ್ಟ್, ಇದೀಗ ದೊಡ್ಡ ಮಟ್ಟದ ಆಸ್ತಿ, ಬಂಗಾರ, ಕಟ್ಟಡಗಳು ಮತ್ತು ವಜ್ರದ ಒಡವೆಗಳನ್ನು ಸರಕಾರ ವಶದಲ್ಲೇ ಮುಂದುವರಿಯಲಿದೆ. ಅಧಿಕಾರಿಗಳು ಮೊದಲಿಗೆ ಮೂವರನ್ನು (ಶಶಿಕಲಾ, ಇಳವರಸಿ ಮತ್ತು ಸುಧಾಕರನ್) ಕರ್ನಾಟಕದ ಜೈಲಿಗೆ ಕಳುಹಿಸುತ್ತಾರೆ.
ಆ ನಂತರ 130 ಕೋಟಿ ರುಪಾಯಿ ದಂಡ ವಸೂಲು ಮಾಡಲಾಗುತ್ತದೆ. ದಿವಂಗತ ಜಯಲಲಿತಾರನ್ನೂ ಒಳಗೊಂಡಂತೆ ನಾಲ್ವರಿಂದ ಈ ದಂಡದ ಮೊತ್ತ ವಸೂಲು ಮಾಡಬೇಕಿದೆ. ಇನ್ನೂರೈವತ್ತು ಆಸ್ತಿಗಳನ್ನು ಕೋರ್ಟ್ ಅಟ್ಯಾಚ್ ಮಾಡಿತ್ತು. ಅದನ್ನು ವಶಪಡಿಸಿಕೊಂಡು, ಅಧಿಕಾರಿಗಳು ಸುಪರ್ದಿಗೆ ಪಡೆಯಲಿದ್ದಾರೆ. ಆ ನಂತರದ ಪ್ರಕ್ರಿಯೆಗಳು ಶೀಘ್ರದಲ್ಲಿ ಆರಂಭವಾಗುತ್ತವೆ.[ಜಯಾಗೆ ಸೇರಿದ ಸೀರೆ, ಆಭರಣ, ಸ್ಲಿಪ್ಪರ್ ಕಥೆ ಏನು?]
ಬೆಂಗಳೂರಿನ ವಿಚಾರಣೆ ಕೋರ್ಟ್ ನ ಆದೇಶವನ್ನೇ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಶಶಿಕಲಾ, ಸುಧಾಕರನ್ ಹಾಗೂ ಇಳವರಸಿಯನ್ನು ತಪ್ಪಿತಸ್ಥರು ಎಂದು ಘೋಷಣೆ ಮಾಡಿದೆ. ಶಶಿಕಲಾ ಮತ್ತಿಬ್ಬರು ಸಂಬಂಧಿಕರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ಮತ್ತು ಹತ್ತು ಕೋಟಿ ರುಪಾಯಿ ದಂಡ ಮತ್ತು ಜಯಲಲಿತಾಗೆ ನಾಲ್ಕು ವರ್ಷ ಜೈಲು ಶಿಕ್ಷೆ, ನೂರು ಕೋಟಿ ರುಪಾಯಿ ದಂಡ ವಿಧಿಸಿತ್ತು.[ಇಂದಲ್ಲ ನಾಳೆ ಪರಪ್ಪನ ಅಗ್ರಹಾರಕ್ಕೆ ಶಶಿಕಲಾ ಬರಲೇಬೇಕು!]
1991-1996ರ ಮಧ್ಯೆ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಂಪಾದನೆಗೂ ಮೀರಿ 66.65 ಕೋಟಿ ರುಪಾಯಿ ಆಸ್ತಿ ಮಾಡಿದ್ದಾರೆ ಎಂದು ಜಯಲಲಿತಾ ಮತ್ತು ಇತರ ಮೂವರ ವಿರುದ್ಧ ಆರೋಪ ಮಾಡಲಾಗಿತ್ತು. ಈ ತೀರ್ಪಿನ ವಿರುದ್ಧ ಎಐಎಡಿಎಂಕೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ.