ಮಾನವನಿಗೆ ಹೃದಯ ಕವಾಟ : ಕಾಮಧೇನುವೇ ನಿನಗೆ ಸಾಟಿಯಿಲ್ಲ
ಚೆನ್ನೈ, ಜುಲೈ, 16 : 'ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ ನೀನಾರಿಗಾದೆಯೋ ಎಲೆ ಮಾನವ' ಎಂಬ ಪದ್ಯವನ್ನು ನಾವು ಬಾಲ್ಯದಿಂದ ಕೇಳಿಕೊಳ್ತಾ ಬಂದಿದ್ದೇವೆ. ಹುಟ್ಟಿನಿಂದ ಸಾಯುವವರೆಗೂ ಪರೋಪಕಾರಕ್ಕಾಗಿ ಜೀವ ಸವೆಸುವ ಹಸು ಕ್ಷಣಗಳನ್ನು ಎಣಿಸುತ್ತಿರುವ ಜೀವ ಉಳಿಸಿ 'ಪರೋಪಕಾರಾರ್ಥಂ ಇದಂ ಶರೀರಂ' ಎಂಬ ಉಕ್ತಿಯನ್ನು 'ಪರೋಪಕರಾರ್ಥ ಹೋದಂ ಶರೀರಂ' ಎಂದು ಬದಲಾಯಿಸುವಂತೆ ಮಾಡಿದೆ.
ಹೌದು..ಪ್ರತಿಯೊಬ್ಬರಲ್ಲೂ ಆಶ್ಚರ್ಯ ಹುಟ್ಟಿಸಿ ಸಾಧನೆ ಪುಟ ಸೇರುತ್ತಿದ್ದ ವೈದ್ಯಲೋಕ ಇದೀಗ ಹಸುವಿನ ಕವಾಟವನ್ನು ಮಾನವನಿಗೆ ಜೋಡಿಸಿ ಇನ್ನೊಂದು ಸಾಧನೆಯ ಭಾಷ್ಯ ಬರೆದಿದೆ. ಜೊತೆಗೆ ಹಸುವಿನ ಪ್ರಾಮುಖ್ಯವನ್ನು ಮತ್ತೊಮ್ಮೆ ಲೋಕಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಕಾಮಧೇನುವಿಗೆ ನಮೋನ್ನಮಃ!
ಹೈದರಾಬಾದಿನ 81 ವರ್ಷ ವಯಸ್ಸಿನ ಮಹಿಳೆಯೊಬ್ಬಳಿಗೆ ಹೃದಯದ ಕವಾಟ ವಿಫಲವಾಗಿತ್ತು. ಆಕೆಗೆ ಉಸಿರಾಟದ ತೊಂದರೆ ಉಂಟಾಗಿ ಪರಿಸ್ಥಿತಿ ಗಂಭೀರವಾಗಿತ್ತು. ಆಗ ಹಸುವಿನ ಹೃದಯದ ಕವಾಟವನ್ನು ವೃದ್ದೆಗೆ ಜೋಡಿಸುವಲ್ಲಿ ಫ್ರಾಂಟಿಯರ್ ಲೈಫ್ ಲೈನ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದು, ವೃದ್ಧೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.[ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗೋಮೂತ್ರ]
ಹೃದಯದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಒಂದು ವ್ಯಾಲ್ಸ್ ಅಳವಡಿಸದೆ ಅವಳು ಬದುಕುವುದು ಕಷ್ಟಕರವಾಗಿತ್ತು. ಆಗ ಸ್ಚಲ್ಪ ಶ್ರಮ ತೆಗೆದುಕೊಂಡ ವೈದ್ಯರ ತಂಡ ಹಸುವಿನ ಹೃದಯದ ವ್ಯಾಲ್ವ್ ಜೋಡಿಸುವಲ್ಲಿ ಸಫಲರಾಗಿದ್ದಾರೆ ಎಂದು ಮುಖ್ಯ ವೈದ್ಯ ಡಾ. ಇ.ಎಂ ಚೆರಿಯನ್ ತಿಳಿಸಿದ್ದಾರೆ.
ಮಹಿಳೆಗೆ 4 ವರ್ಷಗಳ ಹಿಂದೆ ಒಂದು ಬಾರಿ ಶಸ್ತ್ರಚಿಕಿತ್ಸೆ ಮಾಡಿ ವ್ಯಾಲ್ವ್ ಅಳವಡಿಸಲಾಗಿತ್ತು. ಇತ್ತೀಚೆಗೆ ಉಸಿರಾಟದ ತೊಂದರೆ ಅಧಿಕವಾಗಿದೆ ಎಂದು ತಪಾಸಣೆಗೆ ಬಂದಿದ್ದರು. ತಪಾಸಣೆ ನಡೆಸಿದಾಗ ಹಿಂದೆ ಅಳವಡಿಸಿದ್ದ ಓರ್ಟಿಕ್ ವ್ಯಾಲ್ವ್ ದುಃಸ್ಥಿತಿ ತಲುಪಿರುವುದು ತಿಳಿದುಬಂದಿತು. ನಂತರ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧಾರ ತೆಗೆದುಕೊಂಡು ಮುಂದಾಗಿ, ಯಶಸ್ಸು ಗಳಿಸಿದೆವು ಎಂದು ಅಂತಾರಾಷ್ಟ್ರೀಯ ಹೃದಯ ತಜ್ಞ ಡಾ. ಆರ್ ಅನಂತರಾಮನ್ ಸಂತಸ ವ್ಯಕ್ತಪಡಿಸಿದ್ದಾರೆ.