ಜಯಲಲಿತಾ ಚಿಕಿತ್ಸೆಗೆ ಯುಕೆಯಿಂದ ಬಂದ ತಜ್ಞ ವೈದ್ಯ
ಚೆನ್ನೈ, ಅಕ್ಟೋಬರ್ 01 : ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನಿಜಕ್ಕೂ ಏನಾಗಿದೆ, ಅವರ ದೇಹಸ್ಥಿತಿ ಹೇಗಿದೆ ಎಂಬ ಬಗ್ಗೆ ಹಲವಾರು ಬಗೆಯ ಊಹಾಪೋಹಗಳು ಹರಿದಾಡುತ್ತಿರುವ ಹೊತ್ತಿನಲ್ಲೇ ಯುನೈಟೆಡ್ ಕಿಂಗಡಂನ ವೈದ್ಯರೊಬ್ಬರು ಅವರ ಪರೀಕ್ಷೆಗಾಗಿ ಚೆನ್ನೈಗೆ ಬಂದಿದ್ದಾರೆ.
ಲಂಡನ್ ಬ್ರಿಜ್ ಆಸ್ಪತ್ರೆಯಲ್ಲಿ ತುರ್ತು ಆರೈಕೆ ತಜ್ಞರಾಗಿರುವ ಡಾ. ರಿಚರ್ಡ್ ಜಾನ್ ಬೇಲ್ ಅವರು ಜಯಲಲಿತಾ ಅವರನ್ನು ಪರೀಕ್ಷಿಸಿದ ಬಳಿಕ, ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾ ಅವರಿಗೆ ಅತ್ಯುತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಜಯಲಲಿತಾ ಅವರಿಗೆ ಬೇಲ್ ಅವರು ಚಿಕಿತ್ಸೆ ನೀಡಲಿದ್ದಾರೆ.[ಆರೆಸ್ಸೆಸ್ ನಿಂದ ಜಯಲಲಿತಾ ಸಾವು ಎಂದವಳ ವಿರುದ್ಧ ಎಫ್ ಐಆರ್]
ಈ ನಡುವೆ, ಜಯಲಲಿತಾ ಅವರ ದೇಹಸ್ಥಿತಿಗತಿಯ ಬಗ್ಗೆ ಯಾಕೆ ನಿಜವಾದ ಚಿತ್ರಣ ನೀಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಆಗ್ರಹಿಸಿದ್ದಾರೆ. ಅನವಶ್ಯಕವಾಗಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಇತಿಶ್ರೀ ಹಾಡಿರಿ ಎಂದು ಕರುಣಾನಿಧಿ ಸೇರಿದಂತೆ ಹಲವಾರು ನಾಯಕರು ಸರಕಾರವನ್ನು ಒತ್ತಾಯಿಸುತ್ತಿದ್ದಾರೆ.
ತಮಿಳುನಾಡಿನ ರಾಜ್ಯಪಾಲ ಸಿ ವಿದ್ಯಾಸಾಗರ ಅವರು ಶನಿವಾರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ, ಜಯಲಲಿತಾ ಅವರ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವ ಸಾಧ್ಯತೆಯಿದೆ. ಭೇಟಿಯ ನಂತರ ರಾಜ್ಯಪಾಲರು ಅಧಿಕೃತ ಹೇಳಿಕೆ ನೀಡಬಹುದೆಂದು ನಿರೀಕ್ಷಿಸಲಾಗಿದೆ.[ಜಯಲಲಿತಾ ಸಭೆ ನಡೆಸಿದ್ದರ ಫೋಟೋ ಎಲ್ಲಿ: ಕರುಣಾನಿಧಿ]
ಜಯಲಲಿತಾ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಗೆ ದಾಖಲಾಗಿದ್ದರೂ ರಾಜ್ಯಪಾಲರು ಏಕೆ ಭೇಟಿ ನೀಡಿ ವಿಚಾರಿಸಿಲ್ಲ ಎಂದು ಕರುಣಾನಿಧಿ ಅವರು ಕೇಳಿದ್ದರು. ಸರಕಾರ ಮಾತ್ರವಲ್ಲ, ಜಯಲಲಿತಾ ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಕೂಡ ಆಗಾಗ ಹೇಳಿಕೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಜಯಲಲಿತಾ ಅವರು ಬೇಗನೆ ಗುಣವಾಗಲೆಂದು ಅಪೋಲೋ ಆಸ್ಪತ್ರೆ ಮುಂದೆ ಅವರ ಅಭಿಮಾನಿಗಳು ಪೂಜೆ ಸಲ್ಲಿಸಿದರು. ತಮಿಳುನಾಡಿನ ಹಲವಾರು ದೇವಸ್ಥಾನಗಳಲ್ಲಿ ಕೂಡ ಹೋಮಹವನ ಮಾಡಲಾಗುತ್ತಿದೆ.