ಕರ್ನಾಟಕದಿಂದ 2,480 ಕೋಟಿ ರುಪಾಯಿ ಪರಿಹಾರ ಕೇಳಿದ ತಮಿಳುನಾಡು
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕವು ತಮಿಳುನಾಡಿಗೆ ಕಾವೇರಿ ನೀರು ಹರಿಸಿಲ್ಲ. ಅದ್ದರಿಂದ 2,480 ಕೋಟಿ ರುಪಾಯಿ ಪರಿಹಾರ ಕೊಡಿಸಬೇಕು ಎಂದು ತಮಿಳುನಾಡು ಸರಕಾರ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ
ಚೆನ್ನೈ, ಜನವರಿ 9: ತಮಿಳುನಾಡು ಸರಕಾರ ಸೋಮವಾರ ಕರ್ನಾಟಕದಿಂದ 2,480 ಕೋಟಿ ರುಪಾಯಿ ಪರಿಹಾರವನ್ನು ಕೇಳಿದೆ. ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಮನವಿಯಲ್ಲಿ, ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರು ಬಿಡಲು ಕರ್ನಾಟಕ ವಿಫಲವಾದದ್ದರಿಂದ ಪರಿಹಾರವನ್ನು ಕೇಳಿದೆ.
ಸಾಕ್ಷ್ಯಗಳ ಪಟ್ಟಿ ಮಾಡುವುದಕ್ಕೆ ಎರಡೂ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಒಂದು ವಾರ ಕಾಲಾವಕಾಶ ನೀಡಿದೆ. ಎರಡೂ ಸರಕಾರಗಳಿಗೆ ಸಾಕ್ಷ್ಯಗಳ ವಿವರಗಳ ಅಫಿಡವಿಟ್ ಸಲ್ಲಿಸಲು ನಾಲ್ಕು ವಾರ ಅವಕಾಶ ನೀಡಲಾಗಿದೆ. ಜಲ ವಿವಾದದ ವ್ಯಾಜ್ಯ ಇತ್ಯರ್ಥವಾಗುವವರೆಗೆ ನಿತ್ಯ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.[ತಮಿಳುನಾಡಿಗೆ 2 ಸಾವಿರ ಕ್ಯೂಸೆಕ್ಸ್ ಹರಿಸುವಂತೆ ಸುಪ್ರೀಂ ಆದೇಶ]
ಕೆಆರ್ ಎಸ್ ಅಣೆಕಟ್ಟೆ ಡೆಡ್ ಸ್ಟೋರೇಜ್ ಮಟ್ಟ ತಲುಪಿದೆ. ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಕರ್ನಾಟಕ ಈಗಾಗಲೇ ರಾಜ್ಯದಾದ್ಯಂತ ಬರ ಪರಿಸ್ಥಿತಿ ಘೋಷಣೆ ಮಾಡಿದೆ. ಹಾಗೂ ಕೇಂದ್ರ ಸರಕಾರವು ಕರ್ನಾಟಕ ಸಲ್ಲಿಸಿದ್ದ 4700 ಕೋಟಿ ಪರಿಹಾರದ ಮನವಿಗೆ ಪ್ರತಿಯಾಗಿ 1700 ಕೋಟಿ ನೀಡಿದೆ.
ತಮಿಳುನಾಡಿನಲ್ಲೂ ಬರಪರಿಸ್ಥಿತಿಗೆ ಕಂಗಾಲಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 170ಕ್ಕೂ ಹೆಚ್ಚು ರೈತರು ಕಳೆದ ಎರಡು ತಿಂಗಳಲ್ಲಿ ಅತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ನೀರಿನ ಸಮಸ್ಯೆ ನಿವಾರಿಸುವುದಕ್ಕೆ ಕೃಷ್ಣಾ ನದಿಯಿಂದ ನೀರು ಬಿಡುಗಡೆ ಮಾಡುವಂತೆ ಆಂಧ್ರಪ್ರದೇಶವನ್ನು ಸಹ ತಮಿಳುನಾಡು ಮನವಿ ಮಾಡಿದೆ.